ಜಲಕಳೆ ತೆರವು, ಕೆರೆ ಕಾಲುವೆಗಳ ಸುಧಾರಣೆಯ ಸವಾಲು..!

KannadaprabhaNewsNetwork |  
Published : Sep 22, 2025, 01:01 AM IST
21ಡಿಡಬ್ಲೂಡಿ7ಕಲಘಟಗಿ ಸಮೀಪದ ದೇವಿಕೊಪ್ಪದ ಕೆರೆಗೆ ನೀರು ಹರಿದು ಬರುವ ಪೈಪಲೈನ ಬಳಿಯೇ ಹುಟ್ಟಿಕೊಂಡಿರುವ ಜಲಕಳೆ.  | Kannada Prabha

ಸಾರಾಂಶ

ಸಾಮಾನ್ಯವಾಗಿ ಈಗ ಏತ ನೀರಾವರಿ ಮೂಲಕ ನೀರು ಪಡೆಯುತ್ತಿರುವ ಕಲಘಟಗಿಯ ಬಹುತೇಕ ಕೆರೆಗಳು ಊರ ಹೊರಗಿವೆ. ಕೃಷಿಗಾಗಿಯೇ ಈ ಕೆರೆಗಳಿಗೆ ನೀರು ಹರಿಸುತ್ತಿದ್ದು, ಈ ಮೊದಲು ಗುಡ್ಡ- ಗಾಡುಗಳಿಂದ ಹರಿದು ಬರುವ ನೀರೇ ಮೂಲವಾಗಿತ್ತು. ಹೀಗಾಗಿ ಈ ಕೆರೆಗಳಿಗೆ ಕೊಳಚೆ ನೀರಿನ ಸೇರ್ಪಡೆಯೇ ಇರಲಿಲ್ಲ.

ಬಸವರಾಜ ಹಿರೇಮಠ

ಧಾರವಾಡ: ಮೊದಲ ಹಂತದಲ್ಲಿ 41 ಕೆರೆಗಳಿಗೆ ಈಗಾಗಲೇ ಬೇಡ್ತಿ ಬಂದಿದ್ದಾಳೆ. ಜತೆಗೆ ಎರಡನೇ ಹಂತದಲ್ಲಿ 107 ಕೆರೆಗಳನ್ನು ಗುರುತಿಸಿದ್ದು ಸದ್ಯದಲ್ಲಿಯೇ ಈ ಕೆರೆಗಳಿಗೂ ಬೇಡ್ತಿಯು ಹರಿಯುವುದು ನಿಶ್ಚಿತ. ಆದರೆ, ಈ ಏತ ನೀರಾವರಿ ಯೋಜನೆ ಸಂಪೂರ್ಣ ಯಶಸ್ವಿಯಾಗಲು ಕೆಲವು ಸವಾಲುಗಳಿದ್ದು, ಅವು ಪರಿಹಾರವಾಗಬೇಕಿದೆ.

ಬೇಡ್ತಿ ನದಿ ನೀರು ಸಂಪೂರ್ಣ ಶುದ್ಧವಾಗಿಲ್ಲ. ಹುಬ್ಬಳ್ಳಿಯ ಭಾಗದಿಂದ ಬರುವ ಗಟಾರು, ಕೊಳಚೆ ನೀರು ಈ ನದಿ ಅಥವಾ ಕೊಳ್ಳದ ಒಡಲು ಸೇರುತ್ತಿದೆ. ಈ ನೀರು ಕಲಘಟಗಿ ಕೆರೆಗಳನ್ನು ತಲುಪುತ್ತಿದೆ. ಈ ನೀರು ಕೃಷಿ, ಮೀನುಗಾರಿಕೆ, ತೋಟಗಾರಿಕೆ ಅಂತಹ ಕಾರ್ಯಗಳಿಗೆ ತಕ್ಕುದಾದುದು ಸರಿ. ಒಳ್ಳೆಯ ಉತ್ಪನ್ನವೂ ಬರಲಿದೆ. ಆದರೆ, ಈ ಮೊದಲಿದ್ದ ಕೆರೆಗಳ ಸ್ವಚ್ಛತೆಯನ್ನು ಈ ನೀರು ಹಾಳು ಮಾಡುತ್ತಿರುವ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಲಕಳೆ ಸೃಷ್ಟಿ: ಸಾಮಾನ್ಯವಾಗಿ ಈಗ ಏತ ನೀರಾವರಿ ಮೂಲಕ ನೀರು ಪಡೆಯುತ್ತಿರುವ ಕಲಘಟಗಿಯ ಬಹುತೇಕ ಕೆರೆಗಳು ಊರ ಹೊರಗಿವೆ. ಕೃಷಿಗಾಗಿಯೇ ಈ ಕೆರೆಗಳಿಗೆ ನೀರು ಹರಿಸುತ್ತಿದ್ದು, ಈ ಮೊದಲು ಗುಡ್ಡ- ಗಾಡುಗಳಿಂದ ಹರಿದು ಬರುವ ನೀರೇ ಮೂಲವಾಗಿತ್ತು. ಹೀಗಾಗಿ ಈ ಕೆರೆಗಳಿಗೆ ಕೊಳಚೆ ನೀರಿನ ಸೇರ್ಪಡೆಯೇ ಇರಲಿಲ್ಲ. ಸ್ವಾಭಾವಿಕವಾಗಿ ಈ ಕೆರೆಗಳು ಸ್ವಚ್ಛತೆ ಕಾಪಾಡಿಕೊಂಡಿದ್ದವು. ಈಗ ಬೇಡ್ತಿ ನದಿಯ ನೀರಿನ ಸೇರ್ಪಡೆಯಿಂದ ಕೆರೆಗಳಲ್ಲಿ ಜಲಕಳೆ ಬೆಳೆಯುತ್ತಿದೆ.

ಜಲ ಕಳೆ ನಿಧಾನವಾಗಿ ಇಡೀ ಕೆರೆಯನ್ನು ಆವರಿಸಿಕೊಳ್ಳುತ್ತಿದ್ದು, ಜಲಚರಗಳಿಗೂ ಹಾಗೂ ಪರಿಸರಕ್ಕೂ ಹಾನಿಕರ. ಹೀಗಾಗಿ ಈ ಜಲಕಳೆ ತೆರವುಗೊಳಿಸಿ ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಕಾಲುವೆ ಸುಧಾರಣೆ: ಏತ ನೀರಾವರಿ ಮೂಲಕ ನೀರು ಪೈಪಲೈನ್ ಮೂಲಕ 41 ಕೆರೆಗಳಿಗೆ ಹೋಗುತ್ತಿದ್ದು, ಆ ಕೆರೆಯಿಂದ ಕಟ್ಟಕಡೆಯ ರೈತರಿಗೆ ನೀರು ಮುಟ್ಟಲು ಇನ್ನೂ ಕೆಲವು ಸುಧಾರಣೆಗಳಾಗಬೇಕಿದೆ ಎಂದು ಬೆಂಡಲಗಟ್ಟಿಯ ರೈತ ನಾಗೇಶ ಮನವಿ ಮಾಡುತ್ತಾರೆ. ಸಚಿವ ಸಂತೋಷ ಲಾಡ್‌ ಅವರು ಮಾಡಿದ ಕೆಲಸ ಇಡೀ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ, ಕೆರೆಯಿಂದ ಸರಾಗವಾಗಿ ನೀರುಹರಿಯಲು ಕಾಲುವೆಗಳ ಸುಧಾರಣೆಯಾಗಬೇಕಿದೆ. ಈ ಕಾರ್ಯವಾದರೆ ಮಾತ್ರ ಕಟ್ಟಕಡೆಯ ರೈತರಿಗೂ ನೀರು ತಲುಪುತ್ತದೆ. ಇಲ್ಲವಾದಲ್ಲಿ ನೀರು ಮಧ್ಯದಲ್ಲಿ ಸೋರಿ ಹೋಗುತ್ತದೆ ಎಂದು ಕಾಲುವೆ ಸುಧಾರಣೆಯ ಬೇಡಿಕೆ ಇಟ್ಟರು.

ಕೋಡಿ ಹರಿಸಿ ಕಳೆ ಹೊರ ಹಾಕಿ: ಏತ ನೀರಾವರಿ ಮೂಲಕ ಬೇಡ್ತಿ ನದಿ ನೀರು ಕೆರೆಗಳಿಗೆ ಪೈಪ್‌ಲೈನ್ ಮೂಲಕ ತಲುಪುತ್ತಿದೆ. ಸದಾ ತುಂಬಿರುವ ಕೆರೆಯ ನೀರಿನ ಕೋಡಿಯನ್ನು ಆಗಾಗ ಹರಿಸುವ ಮೂಲಕ ಹೊಸದಾಗಿ ಜನ್ಮತಾಳುತ್ತಿರುವ ಜಲಕಳೆಯನ್ನು ಹೊರ ಹಾಕುವುದೊಂದೆ ಪರಿಹಾರ ಎನ್ನುವ ಪರಿಸರವಾದಿಗಳು, ಆಯಾ ಕೆರೆಗಳ ವ್ಯಾಪ್ತಿಯ ಗ್ರಾಪಂಗಳು ಕಡ್ಡಾಯವಾಗಿ ಈ ಕಾರ್ಯ ಮಾಡಬೇಕು. ಜತೆಗೆ ನೀರು ಬಳಕೆದಾರರು ಸಂಘವನ್ನು ರಚಿಸಿಕೊಂಡು ತಮ್ಮೂರಿನ ಕೆರೆಗಳನ್ನು ರಕ್ಷಿಸಲು ತಂಡ ರಚಿಸಿಕೊಳ್ಳಬೇಕು. ಇದರೊಂದಿಗೆ ಸರ್ಕಾರ ಕಾಲುವೆಗಳನ್ನು ಮರು ನಿರ್ಮಿಸುವ ವರೆಗೂ ಕೂರದೇ ಸದ್ಯಕ್ಕೆ ತಾತ್ಕಾಲಿಕವಾದರೂ ಕಾಲುವೆಗಳನ್ನು ಸುಧಾರಿಸಿಕೊಂಡು ಕಟ್ಟಕಡೆಯ ರೈತರಿಗೂ ನೀರುಮುಟ್ಟುವಂತೆ ಮಾಡಿಕೊಂಡಾಗ ಈ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಚಿಂತಕ ಡಾ. ಪ್ರಕಾಶ ಭಟ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ