ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಮುಕ್ಕನಹಳ್ಳಿ ಗ್ರಾಮದ ಕೆರೆ ಏರಿ ಮೇಲೆ ಚಲಿಸುತ್ತಿದ್ದ ಹಳ್ಳಿಮೈಸೂರಿನ ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಬಸ್ ನಿಯಂತ್ರಣ ತಪ್ಪಿ ಕೆರೆಗೆ ಇಳಿಯುತ್ತಿದ್ದ ಸಂದರ್ಭದಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.ಸೋಮವಾರ ಮುಂಜಾನೆ ವಾಹನ ಚಾಲಕ ಎಂದಿನಂತೆ ಶಾಲಾ ವಾಹನದಲ್ಲಿ ದೊಡ್ಡಹಳ್ಳಿ, ಆನೆಕನ್ನಂಬಾಡಿ, ಮುಕ್ಕನಹಳ್ಳಿ ಮಾರ್ಗದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಮುಕ್ಕನಹಳ್ಳಿ ಕೆರೆ ಏರಿ ಮೇಲೆ ಬರುವಾಗ ಉತ್ತಮ ಸ್ಥಿತಿಯಲ್ಲಿ ಇಲ್ಲದ ಸ್ಟೇರಿಂಗ್ ರಾಡ್ ಅಗತ್ಯದಂತೆ ತಿರುಗದೇ ನಿಯಂತ್ರಣ ತಪ್ಪಿದೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಚಾಲಕ ವಾಹನ ಚಾಲನೆಯನ್ನು ನಿಯಂತ್ರಿಸಿ, ಕೆರೆಗೆ ಇಳಿಯಬೇಕಿದ್ದ ಶಾಲಾ ವಾಹನವನ್ನು ಒಂದು ಚಿಕ್ಕ ಮರಕ್ಕೆ ಡಿಕ್ಕಿ ಹೊಡಿಸಿ ನಿಲ್ಲಿಸಿ, ವಾಹನದಲ್ಲಿದ್ದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನನ್ನು ರಕ್ಷಿಸಿದ್ದಾರೆ. ಈ ಘಟನೆಯ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ, ಪೋಷಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.ಪ್ರತ್ಯಕ್ಷದರ್ಶಿ ಹಾಗೂ ಹಳ್ಳಿಮೈಸೂರು ಭೀಮ್ ಆರ್ಮಿ ಅಧ್ಯಕ್ಷ ಪ್ರಸಾದ್ ಎ ಹಾಗೂ ಮುಕ್ಕನಹಳ್ಳಿ ತನ್ವೀರ್ ಮಾತನಾಡಿ, ಚಾಲಕನ ಸಮಯಪ್ರಜ್ಞೆ, ಮಕ್ಕಳ ಅದೃಷ್ಟ ಹಾಗೂ ಪೋಷಕರ ಪುಣ್ಯದ ಫಲದಿಂದ ಯಾವುದೇ ಅನಾಹುತ ನಡೆಯದೇ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿ, ಬಸ್ ಚಾಲಕನು ಸ್ಟೇರಿಂಗ್ ರಾಡ್ ಸಮಸ್ಯೆ ಕುರಿತು ತಿಳಿಸಿದ್ದರೂ ವಿದ್ಯಾಸಂಸ್ಥೆ ಮಾಲೀಕ ದೇವರಾಜು ಅವರ ಬೇಜವಾಬ್ದಾರಿಯಿಂದ ಈ ಅನಾಹುತ ನಡೆದಿದೆ. ಮಕ್ಕಳ ಜೀವಕ್ಕೆ ತೊಂದರೆಯಾಗಿದ್ದರೇ ಯಾರು ಹೊಣೆ, ಆದ್ದರಿಂದ ಶಾಲೆ ಮಾಲೀಕರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.೩ ಶಾಲಾ ಬಸ್ಗಳ ವಶ