ಹಗರಿಬೊಮ್ಮನಹಳ್ಳಿ: ತಾಲೂಕಿನ ರೈತರ ಜೀವನಾಡಿ ಎನಿಸಿರುವ ಹಗರಿಬೊಮ್ಮನಹಳ್ಳಿ ಜಲಾಶಯದ ಅಂಗಳವೀಗ ದೂರದ ಸೈಬೀರಿಯಾ ಮತ್ತು ಮಂಗೋಲಿಯಾ ದೇಶದಿಂದ ಹಾರಿ ಬಂದಿರುವ ಕ್ರೌಂಚ (ಡೆಮೊಸೆಲ್ ಕ್ರೇನ್) ಪಕ್ಷಿಗಳ ಕಲರವಕ್ಕೆ ಸಾಕ್ಷಿಯಾಗಿದೆ.
ಸೂರ್ಯಕಾಂತಿ ಮತ್ತಿತರ ಧಾನ್ಯಗಳ ಬೆಳೆಗಳ ಕಟಾವಿನ ನಂತರ ಹೊಲಗಳಲ್ಲಿ ಸಿಗುವ ಆಹಾರ ಧಾನ್ಯಗಳನ್ನು ಈ ಪಕ್ಷಿಗಳು ಸೇವಿಸುತ್ತವೆ. ದಾಹ ತಣಿಸಲು ಜಲಾಶಯದ ಗುಂಡಿಗಳಲ್ಲಿ ನಿಂತಿರುವ ನೀರು ಸಹಕಾರಿಯಾಗಿರುವಂತೆಯೇ ಗುಂಡಿಗಳಲ್ಲಿನ ಏಡಿ, ಮೀನು ಮತ್ತು ಮೃದ್ವಂಗಿ ಮತ್ತಿತರ ಜಲಚರಗಳನ್ನೂ ಈ ಪಕ್ಷಿಗಳು ಭಕ್ಷಿಸುತ್ತವೆ.
ರಷ್ಯಾ ಬಳಿಯ ಮಂಗೋಲಿಯಾ ಮತ್ತು ಸೈಬೀರಿಯಾ ದೇಶಗಳಲ್ಲಿ ಈಗ ವಿಪರೀತ ಚಳಿ ಹಾಗೂ ಆಹಾರದ ಕೊರತೆಯ ಕಾರಣಕ್ಕೆ ಅಲ್ಲಿಂದ ವಲಸೆ ಹೊರಟ ಹಕ್ಕಿಗಳು ೪೮೦೦ ಕಿಮೀ ದೂರದ ಜಲಾಶಯದ ಅಂಗಳದಲ್ಲಿ ಆಹಾರಕ್ಕಾಗಿ ಬೀಡು ಬಿಟ್ಟಿದ್ದು, ಸಂತಾನೋತ್ಪತ್ತಿಗಾಗಿ ಕ್ರೌಂಚ ಹಕ್ಕಿಗಳು ಮರಗಳನ್ನು ಹುಡುಕಿ ಗೂಡು ಕಟ್ಟಲು ಮತ್ತೆ ವಲಸೆ ಹೊರಡುವ ಧಾವಂತದಲ್ಲಿವೆ.ಜಲಾಶಯದ ಅಂಗಳದಲ್ಲಿನ ನೀರು ಬತ್ತುತ್ತಿದ್ದು, ಬೆರಳೆಣಿಕೆಯಷ್ಟು ಉಳಿದಿರುವ ಗುಂಡಿಗಳಲ್ಲಿ ನೀರಿಗಾಗಿ ದನ, ಕರುಗಳು ಲಗ್ಗೆ ಇಡುತ್ತಿವೆ. ಮೀನಿಗಾಗಿ ಬಲೆ ಒಡ್ಡಲು ಜನರ ಪ್ರವೇಶವೂ ಹೆಚ್ಚಾಗುತ್ತಿದ್ದು, ಪಕ್ಷಿಗಳು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.
ಕ್ರೌಂಚ ಹಕ್ಕಿಗಳು ಬೀಡು ಬಿಟ್ಟಿರುವ ಅಂಗಳದಲ್ಲಿ ನಾಯಿಗಳು ಲಗ್ಗೆ ಇಡುತ್ತಿವೆ. ದೂರದಿಂದ ಬಂದಿರುವ ಕ್ರೌಂಚ ಹಕ್ಕಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕ್ರೌಂಚ ಹಕ್ಕಿಗಳು ಪರಿಸರಕ್ಕೆ ಪೂರಕವಾಗಿವೆ. ಹಕ್ಕಿಗಳು ಉಳಿದರೆ ಪ್ರಕೃತಿ ಉಳಿಯುತ್ತದೆ. ರೈತರ ಭವಿಷ್ಯವೂ ಹಸನಾಗುತ್ತದೆ ಎನ್ನುತ್ತಾರೆ ಪಕ್ಷಿಪ್ರೇಮಿ ಹುರಕಡ್ಲಿ ಶಿವಕುಮಾರ್.