ಪರಶಿವಮೂರ್ತಿ ಮಾಟಲದಿನ್ನಿ ಹಿರೇಮನ್ನಾಪುರ
ಈ ಸಮ್ಮೇಳನ ಕೇವಲ ಔಪಚಾರಿಕ ಕಾರ್ಯಕ್ರಮವಾಗಿರಲಿಲ್ಲ, ಕನ್ನಡ ಭಾಷೆಯ ಭವಿಷ್ಯ, ಸಮಾಜದ ಬದಲಾಗುತ್ತಿರುವ ಮೌಲ್ಯ, ನೆಲಮೂಲ ಸಂಸ್ಕೃತಿ, ರೈತರ ಬದುಕು, ಪರಿಸರ, ಶಿಕ್ಷಣ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ನಡೆದ ಮುಕ್ತ ಸಂವಾದದ ವೇದಿಕೆಯಾಯಿತು.
ಸಮ್ಮೇಳನದ ಎರಡು ದಿನಗಳಲ್ಲಿ ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತಿಗಳು, ಕವಿಗಳು, ಸಂಶೋಧಕರು, ಕಲಾವಿದರು ಮತ್ತು ಸಾರ್ವಜನಿಕರು ಹಿರೇಮನ್ನಾಪುರದಲ್ಲಿ ಸೇರಿದ್ದರು. ಗ್ರಾಮೀಣ ವಾತಾವರಣದಲ್ಲೇ ನಡೆದ ಸಾಹಿತ್ಯ ಸಮ್ಮೇಳನವು ನಗರದ ಸಭಾಂಗಣಗಳಿಗಿಂತ ವಿಭಿನ್ನ ಅನುಭವ ನೀಡಿತು. ಗ್ರಾಮಸ್ಥರ ಆತಿಥ್ಯ, ಸ್ವಯಂಸೇವಕರ ಸೇವೆ ಮತ್ತು ಸಂಘಟಕರ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಗೋಷ್ಠಿಗಳಲ್ಲಿ ಗಂಭೀರ ಚಿಂತನೆ: ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ, ನೆಲಮೂಲ ಸಂಸ್ಕೃತಿಯ ಮಹತ್ವ, 371(ಜೆ) ಮೀಸಲಾತಿ ಸಂರಕ್ಷಣೆ, ಕೋಮು ಸೌಹಾರ್ದ, ಕನ್ನಡ ಭಾಷೆಯ ಬೆಳವಣಿಗೆ, ಓದುವ ಸಂಸ್ಕೃತಿ, ರಂಗಭೂಮಿಯ ಭವಿಷ್ಯ, ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು.
ಕವಿಗೋಷ್ಠಿಯು ಸಾಹಿತ್ಯಾಸಕ್ತರ ಮನಗೆದ್ದಿತು. ಹಿರಿಯ ಹಾಗೂ ಯುವ ಕವಿಗಳು ಪರಿಸರ, ರೈತರ ಬದುಕು, ಕುಟುಂಬ, ಮಹಿಳಾ ಸಂವೇದನೆ, ಪ್ರೀತಿ, ವಿಜ್ಞಾನ, ಸಾಮಾಜಿಕ ಅಸಮಾನತೆ, ಉದ್ಯೋಗ, ಅಭಿವೃದ್ಧಿ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಕವನ ವಾಚಿಸಿದರು.
ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ: ಸಮ್ಮೇಳನದ ಸಂಜೆಗಳು ಜನಪದ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಂಗೇರಿದವು. ಕಲಾವಿದರು ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳಿಸಿದರೆ ಪ್ರೇಕ್ಷಕರು ಕಾರ್ಯಕ್ರಮಗಳಿಗೆ ಭರ್ಜರಿ ಸ್ಪಂದನೆ ನೀಡಿದರು. ಸಾಹಿತ್ಯ ಮತ್ತು ಕಲೆಯ ಸಂಗಮವು ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ತಂದಿತು.
ಕನ್ನಡ ಸಾಹಿತ್ಯ ಸಮ್ಮೇಳನ ಹಿರೇಮನ್ನಾಪುರ ಗ್ರಾಮಸ್ಥರು ತಮ್ಮ ಮನೆಯ ಕಾರ್ಯಕ್ರಮದಂತೆ ಎರಡು ದಿನಗಳ ಕಾಲ ನಡೆಸಿಕೊಟ್ಟಿದ್ದಾರೆ. ಗ್ರಾಮದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದ್ದಾರೆ.