ಹಿರೇಮನ್ನಾಪುರ: ಸಮಾಜ ಕಟ್ಟುವ ಶಕ್ತಿ ಕಾವ್ಯಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕವಿತೆ ಆಧರಿಸಿ ವಾಟ್ಸ್ಆ್ಯಪ್ ಕವಿಗಳಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಕವಿತೆ ಬರೆಯುವುದು ಸುಲಭದ ಕೆಲಸವಲ್ಲ, ಭಾಷೆಯ ಆಳ, ಸಾಹಿತ್ಯದ ಪರಂಪರೆ ಮತ್ತು ಬದುಕಿನ ಅನುಭವಗಳ ಅಧ್ಯಯನದ ಮೂಲಕವೇ ಗಟ್ಟಿ ಕಾವ್ಯ ಹುಟ್ಟುತ್ತದೆ ಎಂದು ಸಾಹಿತಿ ಮಮ್ತಾಜ್ ಬೇಗಂ ಹೇಳಿದರು.
ಕಾವ್ಯವು ಸಮಾಜಕ್ಕೆ ದಾರಿದೀಪವಾಗಬೇಕು. ಪ್ರಭುತ್ವ ಓಲೈಸುವ ಅಥವಾ ಕೇವಲ ವಿರೋಧಿಸುವ ಉದ್ದೇಶದಿಂದ ಕವಿತೆ ಬರೆಯುವುದಕ್ಕಿಂತ ಸಮಾಜಮುಖಿ ಪ್ರಶ್ನೆ ಎತ್ತಿ ಹಿಡಿಯುವ ಹಾಗೂ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಕಾವ್ಯವೇ ಸಾಹಿತ್ಯಕ್ಕೆ ಶಾಶ್ವತ ಮೌಲ್ಯ ತಂದುಕೊಡುತ್ತದೆ ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಸಾಹಿತಿ ಅರುಣಾ ನರೇಂದ್ರ ಮಾತನಾಡಿ, ಕವಿತೆ ಇಲ್ಲದಿದ್ದರೆ ಜಗತ್ತೇ ಕುರುಡಾಗುತ್ತದೆ. ಕವಿ ಯಾವಾಗಲೂ ನೊಂದವರ ಪರವಾಗಿ ನಿಲ್ಲಬೇಕು. ಕಾವ್ಯವು ಜನಸಾಮಾನ್ಯರ ನೋವು, ಆತಂಕ ಮತ್ತು ಹೋರಾಟಗಳಿಗೆ ಪ್ರತಿಬಿಂಬವಾಗಬೇಕು. ಕತ್ತಲೆಗೆ ದೀಪ ಹಚ್ಚುವುದೇ ಕವಿತೆಯ ಧರ್ಮ ಬೆಂಕಿ ಹಚ್ಚುವುದಲ್ಲ ಎಂದು ಅಭಿಪ್ರಾಯಪಟ್ಟರು.ಸಾಹಿತಿ ಶೇಖರಗೌಡ ಸರನಾಡಗೌಡ ಮಾತನಾಡಿ, ಜೀವನದ ಸತ್ಯ ಬಿಂಬಿಸುವ ಕಾವ್ಯವೇ ಶಾಶ್ವತವಾಗುತ್ತದೆ. ಕೇವಲ ವರ್ಣರಂಜಿತ ಕಲ್ಪನೆ ಅಥವಾ ಊಹಾಪೋಹಗಳಿಗೆ ಸೀಮಿತವಾದ ಕಾವ್ಯಕ್ಕಿಂತ ಸಮಾಜದಲ್ಲಿನ ಮೌಢ್ಯ, ಅನ್ಯಾಯ ಮತ್ತು ಅಸಮಾನತೆ ಪ್ರಶ್ನಿಸುವ ಕಾವ್ಯವೇ ಇಂದಿನ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ಪಾಟೀಲ, ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಶರಣಪ್ಪ ಲೈನದ್, ಆರ್.ಕೆ. ಸುಬೇದಾರ, ಅಮರೇಗೌಡ ಜಾಲಿಹಾಳ, ಹನುಮಂತಪ್ಪ ಈಟಿಯವರ, ಜಿ.ಎಸ್. ಗೋನಾಳ, ಶರಣಪ್ಪ ಮೆಟ್ರಿ, ಬಸವರಾಜ ಉಪ್ಪಿನ್, ಕೇದಾರನಾಥ ತುರಕಾಣಿ, ವೆಂಕಟೇಶಗೌಡ, ಸುಜಾತಾ ಹಿರೇಮಠ ಹಾಗೂ ತಮ್ಮಣ್ಣ ವಿರೂಪಾಪುರ, ಶಿವಾನಂದ ತಿಮ್ಮಾಪುರ, ದೇವರಾಜ ವಿಶ್ವಕರ್ಮ, ಮಹೇಶ ಹಡಪದ ಇದ್ದರು.