ಹೊಳೆನರಸೀಪುರ: ಡಾ. ಬಿ. ಆರ್. ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚಿಸಿ, ನಮ್ಮ ರಾಷ್ಟ್ರದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಜತೆಗೆ ಸಮಾನತೆಯನ್ನು ನೀಡಿದ ಶ್ರೇಷ್ಠವಾದ ಸಂವಿಧಾನ ರಚಿಸಿದ್ದಾರೆ. ಇಂತಹ ಸಂವಿಧಾನ ನೀಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಗೌರವ ಸಲ್ಲಿಸಲು ಸಂತೋಷವಾಗುತ್ತದೆ ಎಂದು ಶಾಸಕ ಎಚ್. ಡಿ. ರೇವಣ್ಣ ತಿಳಿಸಿದರು.
ಡಾ. ಅಂಬೇಡ್ಕರ್ ಅವರ ಮೀಸಲಾತಿ ನೀತಿಯಿಂದ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಮತ್ತು ಸಂವಿಧಾನದ ಸಹಾಯದಿಂದ ಸಮಾಜದ ಕಟ್ಟಕಡೆ ವ್ಯಕ್ತಿಯೂ ಅನುಕೂಲ ಪಡೆಯಲು ಸಾಧ್ಯವಾಗಿದೆ. ಜತೆಗೆ ಅನೇಕರು ರಾಜಕೀಯದಲ್ಲಿ ಸ್ಥಾನಮಾನ ಪಡೆಯಲೂ ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ, ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ತಾರೇಶ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕಾರ್ಯದರ್ಶಿ ಸುಪ್ರಿತ್ ಪಾಸ್ವಾನ್, ಸದಸ್ಯ ಜವರೇಶ್, ಪ್ರಸನ್ನ, ಕುಮಾರ ಇತರರು ಶಾಸಕ ಎಚ್.ಡಿ. ರೇವಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು. ಪುರಸಭೆ ಮಾಜಿ ಸದಸ್ಯರಾದ ಉಮೇಶ್ ಹಾಗೂ ಕುಮಾರಸ್ವಾಮಿ, ಡಿಶ್ ಗೋವಿಂದ, ಪುನೀತ್, ಪಾಪಣ್ಣಿ, ಕುಮಾರ್, ಬೈರಾಜು, ವೈರಮುಡಿ, ಇತರರು ಇದ್ದರು.