ಧಾರವಾಡ:ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಡಾ. ಬಿ.ಆರ್. ಅಂಬೆಂಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಮನಿತ ಸಮುದಾಯಕ್ಕೆ ಜೀವನ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್. ತಳ ಸಮುದಾಯಗಳ ಮೂಲಭೂತ ಹಕ್ಕುಗಳಿಗೆ ಹೋರಾಡಿದರು. ಅವರ ರಾಜಕೀಯ ಪ್ರವೇಶ ಸುಲಭವಾಗಿರಲಿಲ್ಲ. ಸಾಮಾಜಿಕ ಮತ್ತು ರಾಜಕೀಯವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಎಲ್ಲ ಸಮುದಾಯ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರು ಅತಿದೊಡ್ಡ ಸಂವಿಧಾನವನ್ನು ಭಾರತಕ್ಕೆ ನೀಡಿದರು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಶತಮಾನಗಳಿಂದ ಶೋಷಣೆಗೆ ಒಳಗಾಗದ ಜನರಿಗೆ ಅಂಬೇಡ್ಕರ್ ಆಶಾಕಿರಣವಾಗಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಎಲ್ಲ ವರ್ಗದ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ಅನಿವಾರ್ಯವಾಗಿ ಬೇಕಾಗಿದ್ದಾರೆಯೇ ಎನ್ನುವ ಭಾವನೆಯೂ ಬರುತ್ತಿದೆ ಎಂದರು.ಹಿರಿಯ ಪತ್ರಕರ್ತ ದಿನೇಶ ಅಮಿನಮಟ್ಟು ಮಾತನಾಡಿ, ಅಲಕ್ಷಿತ ಸಮುದಾಯಕ್ಕೆ ಅಂಬೇಡ್ಕರ್ ಬದುಕು ಒಂದು ದೊಡ್ಡ ಕೊಡುಗೆ. ಅನೇಕ ಹೋರಾಟಕ್ಕೆ ಅಂಬೇಡ್ಕರ್ ಸ್ಫೂರ್ತಿಯಾಗಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಇಂದಿಗೂ ಕೂಡ ಅಲಕ್ಷಿತ ಮತ್ತು ಧಮನಿತ ಸಮುದಾಯಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವದು ದುರದೃಷ್ಟಕರ. ಬಡವರು ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದ್ದು ಸಮರ್ಪಕ ಸಂಪತ್ತು ಕೆಲವೇ ವರ್ಗದವರ ಪಾಲಾಗುತ್ತಿರುವುದು ವಿಪರ್ಯಾಸ. ಅಂಬೇಡ್ಕರ್ ಅವರ ಸಿದ್ಧಾಂತಗಳು ನಿಜವಾಗಿಯೂ ದೇಶದಲ್ಲಿ ಅನುಷ್ಠಾನವಾಗಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅಧ್ಯಯನ ವಿಭಾಗದ ವತಿಯಿಂದ ರಾಜಗೃಹ ಪುಸ್ತಕ ಬಿಡುಗಡೆ ಮಾಡಲಾಯಿತು.ತಾಂತ್ರಿಕ ಗೋಷ್ಠಿ: ದಮನಿತ ತಳ ಸಮುದಾಯಗಳ ಜಾತಿ ತಾರತಮ್ಯದ ವಿರುದ್ಧ ಡಾ. ಬಿ.ಅರ್. ಅಂಬೇಡ್ಕರ್ ಅವರ ಹೋರಾಟ ಎಂಬ ವಿಷಯದ ಕುರಿತು ಇತಿಹಾಸದ ಪ್ರಾಧ್ಯಾಪಕ ಡಾ. ಶೀಲಾಧರ ಮುಗಳಿ ಮಾತನಾಡಿದರು. ಕವಿವಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರವೀಂದ್ರ ಕಾಂಬಳೆ ಪ್ರತಿಕ್ರಿಯೆ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಎಸ್.ಕೆ. ಪವಾರ ವಹಿಸಿದ್ದರು. ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಕವಿವಿ ಸಿಂಡಿಕೇಟ್ ಸದಸ್ಯ ಮಹೇಶ ಹುಲ್ಲೆನ್ನವರ, ಪರೀಕ್ಷಾಂಗ ಕುಲಸಚಿವ ಡಾ. ಎನ್.ವೈ. ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಸಂಯೋಜಕ ಡಾ. ಸುಭಾಸಚಂದ್ರ ನಾಟಿಕಾರ ಇದ್ದರು.