ಶಿವಮೊಗ್ಗ: ದೇಶದಲ್ಲಿ ಕರ್ನಾಟಕವನ್ನು ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲಿಸುವಲ್ಲಿ ವಿತರಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ವಿತರಕರ ಸಂಘದಿಂದ ನಡೆದ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ವಿತರಕರ ಕೊಡುಗೆ ಮಹತ್ವದ್ದು ಎಂದರು.ಕರ್ನಾಟಕದಲ್ಲಿ ಚಿಲ್ಲರೆ ಮಾರುಕಟ್ಟೆಯನ್ನು ಬೆಳೆಸುವ ಬಗ್ಗೆ ವಿತರಕರಿಗೆ ಮಾಹಿತಿಗಳನ್ನು ನೀಡುತ್ತ ದೇಶದ ಆರ್ಥಿಕತೆಗೆ ವಿತರಕರ ಉದ್ಯಮ ಅತಿ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.ಕರ್ನಾಟಕ ಗ್ರಾಹಕ ವಸ್ತುಗಳ ವಿತರಕರ ಸಂಘಗಳ ಒಕ್ಕೂಟ ಅಧ್ಯಕ್ಷ ಗಿರೀಶ್ ಶಂಕರ್ ಸುಂಕದ ಮಾತನಾಡಿ, ಕಂಪನಿಗಳ ಹಾಗೂ ಸರ್ಕಾರದ ಕೆಲ ನೀತಿಗಳಿಂದ ವಿತರಕರ ಅಸ್ತಿತ್ವಕ್ಕೆ ಧಕ್ಕೆ ಬಂದಿರುತ್ತದೆ. ಇಂತಹ ಸಂದರ್ಭದಲ್ಲಿ ನಾವುಗಳೆಲ್ಲರೂ ಒಗ್ಗಟ್ಟಾಗಿ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಬೇಕು ಎಂದರು.ಕರ್ನಾಟಕ ಫೆಡರೇಶನ್ ಆಫ್ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಯಂತ್ ಗಾಣಿಗ್ಮಾ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿತರಕರ ಮಂಡಳಿ ರಚಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಮಟ್ಟದ ಭದ್ರತೆಯನ್ನು ವಿತರಿಕರಿಗೆ ನೀಡುವ ಭರವಸೆ ನೀಡಿದರು.
ಇದೇ ವೇಳೆ 29 ಜನ ಸಂಸ್ಥಾಪಕ ಸದಸ್ಯರುಗಳಿಗೆ ಸನ್ಮಾನಿಸಲಾಯಿತು. 27 ಕಂಪೆನಿಗಳಿಂದ ಫ್ರೀ ಸ್ಯಾಂಪಲ್ ಪಡೆದು 125 ಕಿಟ್ಗಳನ್ನು ತಯಾರಿಸಿ ಬಂದಂತಹ ಎಲ್ಲ ಸದಸ್ಯರುಗಳಿಗೆ ವಿತರಿಸಲಾಯಿತು. ಭದ್ರಾವತಿ, ಶಿಕಾರಿಪುರ, ಸಾಗರ, ಗದಗ ಹಾಗೂ ಕೊಪ್ಪದಿಂದ ಆಗಮಿಸಿದ ಪದಾಧಿಕಾರಿಗಳಿಗೂ ಗೌರವಿಸಿ ಸನ್ಮಾನಿಸಲಾಯಿತು.
ಶಿವಮೊಗ್ಗ ವಿತರಕರ ಸಂಘದ ಉಪಾಧ್ಯಕ್ಷ ಬಿ.ಆರ್.ಬದರಿನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿವಾಸ್ ವಂದನಾರ್ಪಣೆ ಮಾಡಿದರು. ಜಂಟಿ ಕಾರ್ಯದರ್ಶಿ ಅರವಿಂದ್ ಮನವಿ ಪತ್ರವನ್ನು ಓದಿದರು. ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.