ಹೊಸದುರ್ಗ: ಕನ್ನಡ ನಾಡು ಶಿಕ್ಷಣ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು, ಮಠಮಾನ್ಯಗಳಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ ಸಮಾರಂಭದಲ್ಲಿ ಮಾತಾನಾಡಿದ ಅವರು, ನಮ್ಮ ನಾಡಿನಲ್ಲಿ ಮಠಗಳ ಕೊಡುಗೆ ಅಪಾರ. ಅನ್ನ, ಶಿಕ್ಷಣ, ಜ್ಞಾನ ದಾಸೋಹದ ಮೂಲಕ ಸರ್ಕಾರಗಳು ಮಾಡದ ಸಾಧನೆಗಳನ್ನು ಮಠಗಳು ಮಾಡಿವೆ. ಮಠದಲ್ಲಿ ಕಲಿತವರು ಮಹಾನ್ ಸಾಧಕರಾಗಿದ್ದಾರೆ ಎಂದು ಶ್ಲಾಘಿಸಿದರು.
ನಮ್ಮ ತಂದೆ ಯಡಿಯೂರಪ್ಪ ಅವರ ರಾಜಕೀಯ ಏಳುಬೀಳುಗಳನ್ನು ಕಂಡಿದ್ದೇನೆ. ಅವರು ನನಗೆ ತಂದೆಯೂ ಹೌದು, ಗುರುಗಳೂ ಹೌದು. ಜೀವನದಲ್ಲಿ ಯಾವುದೇ ಗಂಡಾಂತರ ಬಂದರೂ ನಮ್ಮ ತಂದೆ ಹೆದರಿ ಹೋಗಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಕಾಲು ಎಳೆಯುವವರು ಹೆಚ್ಚಿದ್ದಾರೆ. ಆದರೂ ಎಲ್ಲಿಯೇ ಹೋದರೂ ಯಡಿಯೂರಪ್ಪ ಅವರ ಮಗನೆಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದರಿಂದ ಯಾವುದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜಯೇಂದ್ರ ಅವರು ಜ್ವರದಿಂದ ಬಳಲುತ್ತಿದ್ದರೂ ಅತ್ಯಂತ ಪ್ರೀತಿಯಿಂದ ಸಾಣೇಹಳ್ಳಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಮಾತೃ ಭಾಷೆಯಲ್ಲಿ ಕಲಿಯಲು ಹಾತೊರೆಯುವ ಮಕ್ಕಳು ತಮಗೆ ಗೊತ್ತಿಲ್ಲದ ಇಂಗ್ಲಿಷ್ ಭಾಷೆ ಕಲಿಯಲು ಕಾನ್ವೆಂಟ್ ಶಾಲೆಗೆ ಸೇರುತ್ತವೆ ಎಂದು ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಹೇಳಿದರು.ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ನಾಗರೀಕರು ಅವುಗಳ ಬಗ್ಗೆ ಜಾಗೃತರಾಗಿರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭಂಡಾರ್ ತಿಳಿಸಿದರು.ಮಾದಾರ ಚೆನ್ನಯ್ಯ ಗುರುಪೀಠದ ಬಸವ ಮಾದಾರ ಶ್ರೀಗಳು ಆಶೀರ್ವಚನ ನೀಡಿದರು. ವಿಮಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.