ಗದಗ: ಎಲ್ಲಿ ಸಂಸ್ಕಾರ, ಧರ್ಮಾಚರಣೆ ಇರುತ್ತದೆಯೋ ಅಂತಹ ಸಮಾಜಕ್ಕೆ ಜಂಗಮ ಸಮಾಜ ಎನ್ನುತ್ತಾರೆ. ಇದನ್ನು ಜಂಗಮರು ಮರೆಯಬಾರದು ಎಂದು ನರೇಗಲ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಜಂಗಮ ಸಮಾಜ ಶೈಕ್ಷಣಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಹಿಂದುಳಿದಿಲ್ಲ. ಆದರೆ, ಆರ್ಥಿಕವಾಗಿ ಹಿಂದುಳಿದಿದೆ. ಏಕೆಂದರೆ ಇರುವುದನ್ನು ಇನ್ನೊಬ್ಬರಿಗೆ ನೀಡುವುದು ಜಂಗಮ ಸಮಾಜವಾಗಿದೆ. ದುಶ್ಚಟಗಳಿಂದ ಸಮಾಜವು ಹಾಳಾಗುತ್ತಿದೆ. ವ್ಯಸನಮುಕ್ತರಾದರೆ ಮಾತ್ರ ಸಮಾಜದಲ್ಲಿ ದೊಡ್ಡ ಗೌರವ ಸಿಗುತ್ತದೆ ಎಂದರು.
ಜಗತ್ತನ್ನು ಉದ್ಧಾರ ಮಾಡುವುದು ಜಂಗಮರ ಕರ್ತವ್ಯವಾಗಿದೆ. ಹಳ್ಳಿಯಲ್ಲಿ ಹಾಳು ಬಿದ್ದಿರುವ ಮಠಗಳನ್ನು ಅಭಿವೃದ್ಧಿಪಡಿಸಿ ಆಚರಣೆಗಳನ್ನು ಮುಂದುವರಿಸಬೇಕು. ಪಾಲಕರು ಜಂಗಮ ಮಕ್ಕಳಿಗೆ ಗ್ರಂಥಗಳ ಓದಿಸುವ ಮೂಲಕ ಅವರಿಗೆ ಸಂಸ್ಕಾರ, ಧರ್ಮಾಚರಣೆಯ ಮಹತ್ವವನ್ನು ತಿಳಿಸಬೇಕು ಎಂದರು.ಜಿಲ್ಲಾ ಗ್ರಾಹಕ ನ್ಯಾಯ ಪೀಠದ ನಿವೃತ್ತ ಸದಸ್ಯ ಎಫ್.ಪಿ. ಲಕ್ಷ್ಮೇಶ್ವರಮಠ ಮಾತನಾಡಿ, ಜನಸೇವೆಯ ಜನಾರ್ದನ ಸೇವೆಯಾಗಿದೆ. ಭೂಮಿಯ ಮೇಲೆ ಬದುಕಲು ಕಂದಾಯದ ರೂಪದಲ್ಲಿ ಜನಸೇವೆ ಸಲ್ಲಿಸಬೇಕಾಗಿದೆ. ಕೆಲವರು ತನು, ಮನ, ಧನದಿಂದ ಸೇವೆ ಸಲ್ಲಿಸುತ್ತಾರೆ. ಸೇವೆಯನ್ನು ಸಮಾಜಸೇವಕರು ಸಾರ್ವಜನಿಕವಾಗಿ ಸಲ್ಲಿಸಿದರೆ, ಸರ್ಕಾರಿ ನೌಕರರು ಕೂಡಾ ಕರ್ತವ್ಯನಿಷ್ಠೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದರು.
ಹೂವಿನಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮಿಗಳು, ಅಸೂಟಿಯ ರೇವಣಶಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಫಕೀರಯ್ಯ ಹಿರೇಮಠ, ಶಿವಾನಂದಯ್ಯ ಹಿರೇಮಠ, ಆನಂದಯ್ಯ ವಿರಕ್ತಮಠ, ಎಂ.ಎಂ. ಶಿರೋಳಮಠ ಸೇರಿದಂತೆ ಮುಂತಾದವರು ಇದ್ದರು. ಕುಮಾರಸ್ವಾಮಿ ಹಿರೇಮಠ ಹಾಗೂ ತಂಡದವರು ಪ್ರಾರ್ಥಿಸಿದರು. ಉಮಾಪತಿ ಭೂಸನೂರಮಠ ನಿರೂಪಿಸಿದರು.