ಗಜೇಂದ್ರಗಡ: ಹಾಲುಮತ ಸಮಾಜವು ಹಿಂದಿನಿಂದಲೂ ನನ್ನ ರಾಜಕೀಯ ಜೀವನಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು, ನಿಮ್ಮ ಅಭಿಮಾನವು ನನನ್ನು ಮಂತ್ರಮುಗ್ಧಗೊಳಿಸುತ್ತಾ ಬಂದಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಪಟ್ಟಣದ ಸಿಬಿಎಸ್ಸಿ ಶಾಲೆಯ ಎದುರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿ ತಾಲೂಕು ಕುರುಬರ ಸಂಘದಿಂದ ಶನಿವಾರ ನಡೆದ ಕನಕ ಭವನ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಮುಖಂಡ ಎಚ್.ಎಸ್. ಸೋಂಪೂರ ಮಾತನಾಡಿ, ಈ ಹಿಂದೆ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಹಲವಾರು ಬಾರಿ ಭೂಮಿ ಪೂಜೆ ನಡೆದರೂ ಸಹ ಕನಕ ಭವನ ನಿರ್ಮಾಣವಾಗಿಲ್ಲ ಎಂಬ ಕೊರಗಿತ್ತು. ಆದರೆ ಶಾಸಕ ಜಿ.ಎಸ್. ಪಾಟೀಲ ಇಂದು ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿದ್ದು ೨ ವರ್ಷದಲ್ಲಿ ಕನಕ ಭವನ ನಿರ್ಮಾಣವಾಗಲಿದೆ ಎಂದರು.
ಸಮಾಜದ ಮುಖಂಡ ಕಳಕಪ್ಪ ಕಂಬಳಿ ಮಾತನಾಡಿ, ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಕನಕ ಭವನ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವುದು ಖುಷಿ ತಂದಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರೂ ಸಂಘಟಿತರಾಗೋಣ ಎಂದರು.ಗಜೇಂದ್ರಗಡ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಸಮಾಜದಿಂದಲೂ ಸಹ ಹಣವನ್ನು ಸಂಗ್ರಹಿಸಿ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದಾಗ, ಮುಖಂಡ ಎಚ್.ಎಸ್.ಸೋಂಪುರ ಮುಖಂಡರೊಬ್ಬರು ರು. ೨೫ ಸಾವಿರ ಹಣವನ್ನು ನೀಡಲು ಮುಂದಾಗಿದ್ದಾರೆ ಎಂದಾಗ ಶಾಸಕರು ಈಗ ಸಾವಿರದಲ್ಲಿ ಅಲ್ಲ, ಲಕ್ಷದಲ್ಲಿ ಹಣವನ್ನು ಸಂಗ್ರಹಿಸಿ ಎಂದರು. ಆಗ ಮುಖಂಡ ವಿ.ಆರ್. ಗುಡಿಸಾಗರ ಅವರು ರು.೧ ಲಕ್ಷ ದೇಣಿಗೆ ನೀಡಲು ಒಪ್ಪಿದ್ದಾರೆ ಎಂದು ವಕೀಲ ಕೆ.ಎಸ್. ಕೊಡತಗೇರಿ ಅವರು ತಿಳಿಸಿದಾಗ ರೋಕಡಿ ನಾ ಎಂದು ಹಾಸ್ಯ ಮಿಶ್ರಿತವಾಗಿ ಶಾಸಕ ಜಿ.ಎಸ್. ಪಾಟೀಲ ಕೇಳಿದ್ದರಿಂದ ಕಾರ್ಯಕ್ರಮದಲ್ಲಿದ್ದವರು ನಗೆ ಗಡಲಲ್ಲಿ ತೇಲಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲಬುರ್ಗಿ ವಿಭಾಗ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ಕಾಗಿನಲೆ ಶಾಖಾಮಠ ಬಾದಿಮನಾಳದ ಶಿವಶಿದ್ದೇಶ್ವರ ಸ್ವಾಮೀಜಿ, ನಿಡಗುಂದಿ ಧರ್ಮರಮಠ ಷಣ್ಣಮುಖಪ್ಪಜ್ಜನವರ, ಪ್ಯಾಟಿ ಧರ್ಮರಮಠ ಸಕ್ರಪ್ಪಜ್ಜ ಧರ್ಮರ, ಗುಳಗುಳಿ ಯೋಗಾನಂದ ಆಶ್ರಮದ ಋಷಿಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಸಮಾಜದ ಹಿರಿಯ ಮುಖಂಡ ವಿ.ಆರ್. ಗುಡಿಸಾಗರ, ಕುರಬರ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಬಿಚ್ಚೂರ, ಪ್ರಧಾನ ಕಾರ್ಯದರ್ಶೀ ಕೆ.ಎಸ್. ಕೊಡತಗೇರಿ, ನೀಲಪ್ಪ ಬೂದಿಹಾಳ, ದ್ರಾಮಣ್ಣ ಪ್ರಭಣ್ಣವರ, ಶೈಲಜಾ ಚಿಲ್ಝರಿ, ಶರಣಪ್ಪ ಬೆಟಗೇರಿ, ಬಸವರಾಜ ಬೆನಕನವಾರಿ, ನಾಗೇಶ ಲಕ್ಕಲಕಟ್ಟಿ, ರಮೇಶ ವದೆಗೋಳ, ಸೇರಿ ಇತರರು ಇದ್ದರು.