ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ

KannadaprabhaNewsNetwork |  
Published : Sep 05, 2025, 01:00 AM IST
ಹರಪನಹಳ್ಳಿ: ಪಟ್ಟಣದ ತೆಗ್ಗಿನಮಠದಲ್ಲಿ ನಡೆದ ಲಿ.ಚಂದ್ರಮೌಳೀಶ್ವರ ಶಿವಾಚಾರ್ಯರ 89ನೇ ಜನ್ಮ ದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಲಿ.ಚಂದ್ರಮೌಳೀಶ್ವರರು ಹರಪನಹಳ್ಳಿಯಲ್ಲಿ ನೆಲೆಯೂರದಿದ್ದರೆ ಶಿಕ್ಷಣ ಕ್ಷೇತ್ರದ ಜತೆಗೆ ತಾಲೂಕಿನ ಅಭಿವೃದ್ಧಿಯನ್ನು ನಾವುಗಳು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ

ಹರಪನಹಳ್ಳಿ: ನಾಡಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಗ್ಗಿನಮಠದ ಸಭಾ ಭವನದಲ್ಲಿ ನಡೆದ ಲಿ.ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 89ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಲಿ. ಚಂದ್ರಮೌಳೀಶ್ವರರು ಮಧ್ಯ ಕರ್ನಾಕದಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳನ್ನು ತೆರೆದು ಮನೆ ಮನೆಗಳಲ್ಲಿ ಬೆಳಗುವ ದೀಪವಾಗಿದ್ದಾರೆ, ಅವರು ಮಾನವನ ಹುಟ್ಟು ಸಾವಿನ ನಂತರವು ಅಜರಾಮರವಾಗಿರಬೇಕು ಎನ್ನುವ ದೂರದೃಷ್ಠಿ ಹೊಂದಿ ಅದರಂತೆ ನಡೆದರು ಎಂದು ನುಡಿದರು.

ಎಷ್ಟೇ ಯುಗಗಳು ಕಳೆದರೂ ಅವರ ಮಹತ್ಕಾರ್ಯಗಳು ಎಂದಿಗೂ ಜೀವಂತವಾಗಿರುತ್ತವೆ, ಹರಪನಹಳ್ಳಿ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿತ್ತು, ಅಂತಹ ತಾಲೂಕನ್ನು ರಾಜ್ಯ ಹೊರರಾಜ್ಯಗಳಿಂದ ಮಕ್ಕಳು ಶಿಕ್ಷಣ ಪಡೆಯಲು ಬರುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರನ್ನು ಕೇವಲ ಒಂದು ಪರಿಮಿತಿಯಿಂದ ನೋಡಲು ಆಗದು ಕಡುಕಷ್ಟದ ದಿನಗಳಿಂದ ಹುಟ್ಟು ಹೋರಾಟದ ಬದುಕನ್ನು ಸವೆಸುತ್ತ ಹೋರಾಟ ಮನೋಭಾವ ರೂಢಿಸಿಕೊಂಡಿದ್ದರು ಎಂದರು.

ಲಿ.ಚಂದ್ರಮೌಳೀಶ್ವರರು ಹರಪನಹಳ್ಳಿಯಲ್ಲಿ ನೆಲೆಯೂರದಿದ್ದರೆ ಶಿಕ್ಷಣ ಕ್ಷೇತ್ರದ ಜತೆಗೆ ತಾಲೂಕಿನ ಅಭಿವೃದ್ಧಿಯನ್ನು ನಾವುಗಳು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಸಮಾಜವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸುಲಭವಾದ ಕಾರ್ಯವಲ್ಲ, ಮಠ ಅಭಿವೃದ್ಧಿಯಾಗುವ ಮುನ್ನ ಹರಪನಹಳ್ಳಿ, ಹಡಗಲಿ ಸೇರಿದಂತೆ ಇತರೆ ತಾಲೂಕುಗಳಿಗೆ ತೆರಳಿ ಜೋಳಿಗೆಯ ಮೂಲಕ ಪಡಿ ಹಕ್ಕಿಯಿಂದ ಮಠ ಕಟ್ಟಿ ಬೆಳೆಸಿದರು ಎಂದರು.

ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ನಾವು ಮಾಡುವ ಉತ್ತಮ ಕಾರ್ಯಗಳಿಂದ ನಮ್ಮ ಹೆಸರು ಅಜರಾಮರವಾಗಿ ಉಳಿಯುತ್ತವೆ ಎಂಬುವುದಕ್ಕೆ ಇಂದಿಗೂ ಲಿ. ಚಂದ್ರಮೌಳೀಶ್ವರ ಶಿವಾಚಾರ್ಯರ ಕಾರ್ಯಗಳು ಜೀವಂತಿಕೆ ಉಳಿಸಿಕೊಂಡಿವೆ ಎಂದು ಹೇಳಿದರು.

ತೆಗ್ಗಿನ ಮಠದಂತಹ ಮಠಗಳು ನಾಡಿನಲ್ಲಿ ಬೆರಳಣಿಕೆಯಷ್ಟಿದ್ದು, ಸಮಾಜದಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಸಮಾಜ ಸೇವೆ ಮಾಡುವುದರಲ್ಲಿ ಶ್ರೀಮಠವು ನಾಡಿನಲ್ಲಿ ಮೊದಲನೆ ಸಾಲಿನಲ್ಲಿದೆ, ಇದರ ಏಳಿಗೆಗೆ ಟಿ.ಎಂ. ಚಂದ್ರಶೇಖರಯ್ಯನವರ ಪಾತ್ರ ಅಮೂಲ್ಯವಾದದ್ದು ಎಂದರು.

ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಗುರುಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವುಗಳು ಸಾಗಬೇಕಿದೆ, ಬಡ ಹಿಂದುಳಿದ ತಾಲೂಕೆಂಬ ಕಪ್ಪು ಚುಕ್ಕಿ ಅಳಿಸಿ ಹಾಕಿದ ಕೀರ್ತಿ ಚಂದ್ರಮೌಳೀಶ್ವರರಿಗೆ ಸಲ್ಲುತ್ತದೆ, ಅವರು ನಡೆದಾಡಿದ ಸ್ಥಳಗಳು ಇಂದು ಪುಣ್ಯ ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ ಎಂದರು.

ಶ್ರೀಮಠವು ಕಷ್ಟದ ಕಾಲಘಟ್ಟದಲ್ಲಿ ಸಾಕಷ್ಟು ಸವಾಲು ಎದುರಿಸಿ ನಾಡಿನಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ 64ಕ್ಕೂ ಅಧಿಕ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲು ಸಾಧ್ಯವಾಯಿತು ಎಂದರು.

ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಎಂ. ರಾಜಣ್ಣ, ನಿವೃತ್ತ ಇಒ ಎಚ್.ಎಂ. ಕೊಟ್ರಯ್ಯ ಮಾತನಾಡಿ, ಮಠ ಬೆಳೆದು ಬಂದ ಹಾದಿ ಸ್ಮರಿಸಿದರು.

ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಟಿ.ಎಂ. ಚನ್ನವೀರಸ್ವಾಮಿ, ಟಿ.ಎಂ. ಪ್ರತೀಕ್, ಟಿ.ಎಂ. ಗುರುಬಸವರಾಜ್, ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ್, ಟಿ.ಎಂ. ನಾಗರಾಜ್, ಟಿ.ಎಂ. ವೀರೇಶ್, ಎ.ವೀರಣ್ಣ, ಕರಿಬಸಪ್ಪ, ಪ್ರಾಚಾರ್ಯ ಸಿ.ಎಂ. ವೀರೇಶ್, ನಾಗೇಂದ್ರ, ಚರಣ್, ಅರುಣ್ ಕುಮಾರ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!