ರಾಣಿಬೆನ್ನೂರು: ಕೃಷಿ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರು ಕೇವಲ ಬೆಳೆ ಉತ್ಪಾದಿಸುವವರಷ್ಟೇ ಅಲ್ಲದೆ ಗ್ರಾಹಕರೂ ಆಗಿರುವುದರಿಂದ ಅವರ ಆರ್ಥಿಕ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲಿನ ಒಕ್ಕೂಟ (ಕೆಎಂಎಫ್) ಹಾಗೂ ಡಿಸಿಸಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ತರಲು ತಾವೇ ಮುಂಚೂಣಿಯಲ್ಲಿದ್ದು ಉಪವಾಸ ಸತ್ಯಾಗ್ರಹ ಮತ್ತು ಬೃಹತ್ ಹೋರಾಟಗಳನ್ನು ನಡೆಸಿದ್ದೇನು. ಜಿಲ್ಲೆಯ ಹಾಲು ಉತ್ಪಾದಕರ ಹಿತ ಕಾಯಲು ತಾವು ಮುಖ್ಯಮಂತ್ರಿಯಾಗಿದ್ದಾಗ ರು.100 ಕೋಟಿ ಅನುದಾನ ನೀಡುವ ಮೂಲಕ ಹಾವೇರಿಯಲ್ಲಿ ಬೃಹತ್ ''''''''ಮೆಗಾ ಡೈರಿ'''''''' ಸ್ಥಾಪನೆಗೆ ಚಾಲನೆ ನೀಡಿದ್ದೇನು. ಸರ್ಕಾರದ ಮೇಲೆ ಅವಲಂಬನೆ ಮಾಡುವುದಕ್ಕಿಂತ ಸ್ವತಃ ತಮ್ಮ ಶ್ರಮ ಮತ್ತು ದುಡಿಮೆಯ ಮೇಲೆಯೇ ನಂಬಿಕೆ ಇಟ್ಟು ಬೆಳೆದದ್ದು ಸಹಕಾರ ಕ್ಷೇತ್ರ. ಸಹಕಾರ ರಂಗವು ಜನರಿಂದ, ಜನರಿಗೋಸ್ಕರ ಇರುವಂತದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಹಕಾರ ಚಳವಳಿ ಅತ್ಯಂತ ಬಲವಾಗಿದೆ. ಅಲ್ಲಿ ಸಹಕಾರವು ಸರ್ಕಾರವನ್ನು ಆಳುತ್ತದೆ. ಅಲ್ಲಿನ ಸಹಕಾರ ರಂಗದ ನಾಯಕರೇ ಮುಖ್ಯಮಂತ್ರಿ, ಮಂತ್ರಿಗಳಾಗಿ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಆದರೆ ಕರ್ನಾಟಕದಲ್ಲಿ ಸರ್ಕಾರವು ಸಹಕಾರ ರಂಗವನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಕಟ್ಟಿದ ಮಾತ್ರಕ್ಕೆ ಭಾರತ ಸಂಪತ್ಭರಿತ ದೇಶವಾಗುವುದಿಲ್ಲ. ರೈತ ದುಡಿದರೆ ಮಾತ್ರ ನಮ್ಮ ದೇಶ ಸಂಪತ್ಭರಿತ ಹಾಗೂ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಸಾಧ್ಯ. ನಾವು ರೈತರು ಬೆಳೆದ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತೇವೆ. ಕಾರ್ಖಾನೆಗಳ ಉತ್ಪನ್ನಗಳಿಗಿಂತ ಕೃಷಿ ಉತ್ಪನ್ನಗಳೇ ದೇಶದ ಆರ್ಥಿಕತೆಗೆ ಹೆಚ್ಚಿನ ಬಲ ನೀಡುತ್ತವೆ. ನಮ್ಮ ಉತ್ಪನ್ನಗಳ ವಹಿವಾಟು ಹೆಚ್ಚಿಸಲು ಪೂರಕವಾಗಿ ಸಹಕಾರಿ ಸಂಸ್ಥೆಗಳು ನಿರ್ಮಾಣಗೊಂಡಿವೆ ಎಂದರು.ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಸೊಸೈಟಿ ವ್ಯಾಪ್ತಿಯಲ್ಲಿ ಸ್ಥಿತಿವಂತ ಸದಸ್ಯರೇ ಹೆಚ್ಚಿದ್ದು, ವ್ಯವಹಾರ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಸದಸ್ಯರು ಸಂಘದಲ್ಲಿ ಹೆಚ್ಚಿನ ಠೇವಣಿ ಇರಿಸಿ, ಅಗತ್ಯ ಸಾಲ ಸೌಲಭ್ಯಗಳನ್ನು ಪಡೆದು ಸಂಘದ ವ್ಯವಹಾರವನ್ನು ಹೆಚ್ಚಿಸಬೇಕು ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ, ಹಿರೇಮಾಗನೂರ ಸಹಕಾರಿ ಸಂಘದ ಆಡಳಿತಾಧಿಕಾರಿ ಜಗದೀಶಗೌಡ ಪಾಟೀಲ, ಸಂಘದ ನಿರ್ದೇಶಕರು ಹಾಗೂ ಕೆಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.