ಕಮ್ಮರಡಿ ಸರ್ಕಾರಿ ಕಾಲೇಜಿನಲ್ಲಿ ಕ್ರೀಡಾ- ಕಾಲೇಜು ವಾರ್ಷಿಕೋತ್ಸವ
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ದೇಶದ ಏಳಿಗೆ ಅಡಗಿದೆ. ನನ್ನ ಅವಧಿಯಲ್ಲಿ ಈ ಕ್ಷೇತ್ರದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡಿಸಿದ್ದೇನೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಕಮ್ಮರಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕ್ರೀಡಾ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ಕಲಿಕಾ ಸಮಯದಲ್ಲಿ ನಿಷ್ಠೆಯಿಂದ ವಿದ್ಯಾಭ್ಯಾಸ ಮುಂದುವರಿಸಿ, ಶಿಕ್ಷಣವೆ ಭವಿಷ್ಯದ ಬಲ ಎಂದ ಅವರು ವಿದ್ಯಾರ್ಥಿಗಳ ಸಾಧನೆಗೆ ಶುಭ ಕೋರಿದರು.ಬೆಂಗಳೂರು ಬಿಬಿಎಂಪಿ ಅಧಿಕಾರಿ ಕೆ.ಎಸ್. ದಯಾನಂದ್ ಮಾತನಾಡಿ ವಿದ್ಯಾರ್ಥಿಗಳಿಗೆ ಜೀವನದ ಗುರಿಮುಟ್ಟಲು ಏಕಾಗ್ರತೆ ಮುಖ್ಯ. ಕಲಿಕಾವಸ್ಥೆಯಲ್ಲಿ ಮೂಡಿಸಿಕೊಂಡ ಸಂಯಮ ತಾಳ್ಮೆ ಜೀವನವನ್ನು ರೂಪಿಸುವಲ್ಲಿ ಸಹಾಯಕವಾಗಲಿದೆ ಎಂದರು.ಚಾವಲ್ಮನೆ ಗ್ರಾಮಪಂಚಾಯ್ತಿ ಮತ್ತು ಕಾಲೇಜು ಸಮಿತಿಯಿಂದ ಶಾಸಕ ಟಿ.ಡಿ. ರಾಜೇಗೌಡ ದಂಪತಿಯನ್ನು ಗೌರವಿಸಲಾಯಿತು. ಸಮಾಜ ಸೇವೆಗೆ ಕೊಡುಗೆ ನೀಡಿದ ಮಾಜಿ ಸಚಿವ ದಿ.ಬೇಗಾನೆ ರಾಮಯ್ಯನವರಿಗೆ ನುಡಿನಮನ ಸಲ್ಲಿಸಲಾಯಿತು.