ಆರೋಗ್ಯ, ಶಿಕ್ಷಣ ರಾಷ್ಟ್ರೀಕರಣವಾದರೆ ಮಾತ್ರ ದೇಶ ಸಮೃದ್ಧ

KannadaprabhaNewsNetwork |  
Published : Oct 19, 2025, 01:00 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಧನ್ವಂತರಿ ಜಯಂತಿ ಅಂಗವಾಗಿ ಚಿತ್ರದುರ್ಗ ತಾಲೂಕಿನ ಮದೇಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರೀಕರಣವಾದರೆ ಮಾತ್ರ ದೇಶವನ್ನು ಇನ್ನಷ್ಟು ಸಮೃದ್ಧದೆಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಧನ್ವಂತರಿ ಜಯಂತಿ ಅಂಗವಾಗಿ ತಾಲೂಕಿನ ಮದೇಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಔಷಧಿ ಸಸ್ಯಗಳ ಪ್ರಾತ್ಯಕ್ಷತೆ ಹಾಗೂ ಉಪಯೋಗದ ಕುರಿತು ನುರಿತ ಪಾರಂಪಕರಿಕ ವೈದ್ಯರಿಂದ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರ ಇಂದು ದೊಡ್ಡ ಮಾಫಿಯವಾಗಿದೆ. ದುಡ್ಡಿದ್ದವರಿಗೆ ಮಾತ್ರ ಆರೋಗ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಆಸ್ಪತ್ರೆಗಳು ವ್ಯವಹಾರಿಕವಾಗಿವೆ. ಆರೋಗ್ಯದಲ್ಲಿ ವ್ಯವಹಾರ ಬೇಡ. ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರ ಪರಿಕಲ್ಪನೆ ಈ ದೇಶದ ನೆಲ, ಜಲ, ಆರೋಗ್ಯ ಮತ್ತು ಶಿಕ್ಷಣ ರಾಷ್ಟ್ರೀಕರಣ ಆಗಬೇಕು, ಉಚಿತ ಆಗಬೇಕು ಎಂಬುದಾಗಿತ್ತು. ಇದು ಸಾಧ್ಯವಾಗದೇ ಹೋಗಿರುವುದು ವಿಷಾಧಕರ ಸಂಗತಿ ಎಂದರು.

ವಿದ್ಯಾಭ್ಯಾಸ ಹಾಗೂ ಆರೋಗ್ಯ ಈ ಎರಡು ವಿಚಾರಗಳಿಗೆ ಜನರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಸಾಲ ಮಾಡಿಯಾದರೂ ಚಿಕಿತ್ಸೆಗೆ ಹಣ ಖರ್ಚು ಮಾಡುತ್ತಾರೆ. ಆದರೆ ಇಂದು ಚಿಕ್ಕ ಕಾಯಿಲೆಗೂ ರಕ್ತ ಪರೀಕ್ಷೆ, ಎಕ್ಸರೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ಮತ್ತಿತರ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಆದರೆ ಹಿಂದೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ನಾಡಿ ನೋಡಿ ಏನು ಕಾಯಿಲೆ ಎಂದು ಹೇಳುತ್ತಿದ್ದರು. ಯಾವುದೇ ದುಂದು ವೆಚ್ಚವಿಲ್ಲದೆ ಪಾರಂಪರಿಕ ವೈದ್ಯರು ಸಮಾಜವನ್ನು ಆರೋಗ್ಯಕರವಾಗಿಟ್ಟಿದ್ದರು. ಅಂತಹ ಪಾರಂಪರಿಕ ವೈದ್ಯರಿಗೆ ನೂರಾರು ಕಷ್ಟಗಳಿವೆ. ಸರಕಾರ ಅವರನ್ನು ಗುರುತಿಸಬೇಕಿದೆ. ಕೆಲವರು ನಕಲಿ ಪಾರಂಪರಿಕ ವೈದ್ಯರಿಂದ ನಿಜವಾದ ಪಾರಂಪರಿಕ ವೈದ್ಯರಿಗೆ ಧಕ್ಕೆಯಾಗುತ್ತಿದೆ. ಸರಕಾರ ಅರ್ಹರನ್ನು ಗುರುತಿಸಿ ಅವರಿಗೆ ಗೌರವ ಧನ ನೀಡಬೇಕು. ಮನೆ ಮದ್ದಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗಲಿವೆ ಎಂದರು.

ಭಾರತದ ಆಹಾರ ಪದ್ಧತಿ ಮತ್ತು ಪರಿಸರ ಕೂಡ ಔಷಧೀಯ ಗುಣಗಳಿಂದ ತುಂಬಿದೆ. ಭಾರತದ ಪರಿಸರವೇ ಆರೋಗ್ಯ. ಪಾರಂಪರಿಕ ಪದ್ಧತಿ ತಾಜಾ ಔಷಧಿ ಇದ್ದಂತೆ. ಹಾಗಾಗಿ ಪಾರಂಪರಿಕ ವೈದ್ಯರಿಗೆ ಆತ್ಮಸ್ಥೈರ್ಯ, ಭರವಸೆ ತುಂಬುವಂತಹ ಕೆಲಸ ಆಗಬೇಕಿದ್ದು ಪದ್ಧತಿಯ ಮಜಲುಗಳು ಅರಳುವಂತಾಗಬೇಕು ಎಂದು ಹೇಳಿದರು.

ಮೆದೇಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್.ಪಾತಣ್ಣ ಮಾತನಾಡಿ, ವಂಶ ಪಾರಂಪರ್ಯವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ, ಈ ಪದ್ಧತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.

ಪಾರಂಪರಿಕ ವೈದ್ಯ ದಿನೇಶ್ ಅವರು, ಔಷಧ ಸಸ್ಯಗಳಿಂದ ಉಂಟಾಗುವ ಪ್ರಯೋಜನಗಳ ಕುರಿತು ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ನಿರಂಜನ್, ರಜನಿ ಶಂಕರ್, ಕೃಷಿ, ತೋಟಗಾರಿಕೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ನಾನಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ