ರಂಗ ಸಂಸ್ಕೃತಿ ಗ್ರಾಮೀಣರಿಗೆ ತಲುಪಿಸಿದ ಶ್ರೇಯಸ್ಸು ಸಿಜಿಕೆಗೆ ಸಲ್ಲುತ್ತದೆ

KannadaprabhaNewsNetwork |  
Published : Jun 29, 2026, 02:00 AM IST
ಹಾವೇರಿ ನಗರದ ಗೆಳೆಯರ ಬಳಗ ಶಾಲೆಯ ಆವರಣದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಜಿಲ್ಲಾ ಕಲಾ ಬಳಗ ಮತ್ತು ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಹುಟ್ಟಿನೊಂದಿಗೆ ಬಂದ ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿ, ಬೀದಿ ನಾಟಕಗಳ ಮೂಲಕ ರಂಗ ಸಂಸ್ಕೃತಿಯನ್ನು ಗ್ರಾಮೀಣ ಜನರಿಗೆ ತಲುಪಿಸಿದ ಶ್ರೇಯಸ್ಸು ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ (ಸಿಜಿಕೆ) ಅವರಿಗೆ ಸಲ್ಲುತ್ತದೆ.

ಹಾವೇರಿ: ಹುಟ್ಟಿನೊಂದಿಗೆ ಬಂದ ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿ, ಬೀದಿ ನಾಟಕಗಳ ಮೂಲಕ ರಂಗ ಸಂಸ್ಕೃತಿಯನ್ನು ಗ್ರಾಮೀಣ ಜನರಿಗೆ ತಲುಪಿಸಿದ ಶ್ರೇಯಸ್ಸು ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ (ಸಿಜಿಕೆ) ಅವರಿಗೆ ಸಲ್ಲುತ್ತದೆ ಎಂದು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ ಹೇಳಿದರು.

ನಗರದ ಗೆಳೆಯರ ಬಳಗ ಶಾಲೆಯ ಆವರಣದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಜಿಲ್ಲಾ ಕಲಾ ಬಳಗ ಮತ್ತು ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ಸಾಧನೆಗೆ ಸತತ ಪ್ರಯತ್ನ ಬೇಕು. ಪ್ರತಿಭೆಗೆ ಸಾಣಿ ಹಿಡಿದು ಕ್ರಿಯಾಶೀಲತೆಯಿಂದ ಕೆಲಸ ಮಾಡಿದಾಗ ಕೀರ್ತಿ, ಯಶಸ್ಸು ಮತ್ತು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಸಿಜಿಕೆ ಅವರ ರಂಗಪ್ರಜ್ಞೆ ಮತ್ತು ಚಿಂತನೆಗಳ ಪರಿಶ್ರಮವು ನಮಗೆ ದಾರಿದೀಪವಾಗಿದೆ. ಇಂದು ಪ್ರಶಸ್ತಿ ಸ್ವೀಕರಿಸುವವರು ಇದನ್ನು ಮಾದರಿಯಾಗಿಟ್ಟುಕೊಂಡು ಮುಂದೆ ಹೆಚ್ಚಿನ ಸಾಧನೆಗೆ ಮುಂದಾಗಲಿ ಎಂದು ಕರೆ ನೀಡಿದರು.

ರಂಗಭೂಮಿಯ ಇಂದಿನ ಸ್ಥಿತಿಗತಿ ಕುರಿತು ರಂಗಭೂಮಿ ಕಲಾವಿದ ಆರ್.ಸಿ. ನಂದಿಹಳ್ಳಿ ಮಾತನಾಡಿ, ಬೀದಿ ನಾಟಕಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲು ಮತ್ತು ಜನಸಾಮಾನ್ಯರ ಜೊತೆಗೆ ನೇರ ಸಂವಾದ ನಡೆಸಲು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ. ಯಾವುದೇ ಶುಲ್ಕವಿಲ್ಲದೇ ಮುಖಾಮುಖಿಯಾಗುವ ಈ ಮಾಧ್ಯಮವು ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಇಂದು ನಾಟಕಗಳ ಕಮ್ಮಟಗಳು ಹೆಚ್ಚು ನಡೆಯಬೇಕು. ಯುವ ಪೀಳಿಗೆಯನ್ನು ಬೀದಿ ನಾಟಕದತ್ತ ಎಳೆಯುವ ಕೆಲಸವಾಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಕಲಾವಿದರಾದ ಚಂದ್ರಶೇಖರ ಹೆಬ್ಬಾರ, ಮಲ್ಲಿಕಾರ್ಜುನ ಚಂದ್ರಾಪಟ್ಟಣ, ಜಗದೀಶ ಕಟ್ಟಿಮನಿ, ಜ್ಯೋತಿ ಅರ್ಕಸಾಲಿ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಲಾಬಳಗದ ಅಧ್ಯಕ್ಷ ಕೆ.ಆರ್. ಹಿರೇಮಠ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಜಿಲ್ಲಾ ಕಲಾಬಳಗವು ಅನೇಕ ಕಲಾವಿದರನ್ನು ಕಟ್ಟಿಕೊಂಡು ಬೀದಿ ನಾಟಕಗಳ ಮೂಲಕ ಮೂಢನಂಬಿಕೆ, ಪರಿಸರ ಜಾಗೃತಿ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವದು ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದು, ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭದಂತಹ ಕಾರ್ಯವು ಸದಾ ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವಾಯ್.ಬಿ. ಆಲದಕಟ್ಟಿ, ಪರಿಮಳಾ ಜೈನ್, ಶಂಕರ ತುಮ್ಮಣ್ಣನವರ, ಪ್ರೊ. ಶಮಂತಕುಮಾರ ಕೆ.ಎಸ್., ಆರ್.ಎಸ್. ದೇಶಪಾಂಡೆ, ಗೋಪಾಲ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಭಾರತೀ ಯಾವಗಲ್ಲ ಪ್ರಾರ್ಥಿಸಿದರು. ಜಗದೀಶ ಚೌಟಗಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ