ಕನ್ನಡಪ್ರಭ ವಾರ್ತೆ ಹಿರಿಯೂರು
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಸಮಾಜದ ತತ್ವವನ್ನು ಆದರಿಸಿದ ದೇಶದ ಬೃಹತ್ ಲಿಖಿತ ಹಾಗೂ ಶ್ರೇಷ್ಠ ಸಂವಿಧಾನ ನೀಡಿದಂತಹ ಕೀರ್ತಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ವಿಶ್ವದ 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದಡಿ ಜೀವಪರ ಮತ್ತು ಮನುಷ್ಯತ್ವ ಪರ ಇರುವ ಸಂವಿಧಾನವನ್ನು ನೀಡಿದ್ದಾರೆ, ವಿಶೇಷವಾಗಿ ಮಹಿಳೆಯರಿಗೆ ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ತಳ ಸಮುದಾಯದವರಿಗೆ ಮೀಸಲಾತಿಯನ್ನು ನೀಡಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡಿದರು. ಉನ್ನತ ಮಟ್ಟದ ಸಾಧನೆ ಮಾಡಲು ಅಂಬೇಡ್ಕರ್ ಅವರ ಬದುಕು ನಮಗೆಲ್ಲ ದಿಕ್ಸೂಚಿಯಾಗುತ್ತದೆ ಎಂದರು.
ತಾಲೂಕು ವಕೀಲರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಕೆ.ರಾಜಪ್ಪ ಮಾತನಾಡಿ, ಡಾ.ಬಾಬು ಜಗಜೀವನ್ ರಾಂ ರವರು ಕಡು ಬಡತನದಲ್ಲಿ ಹುಟ್ಟಿ ಅವಮಾನ ಅಸ್ಪೃಶ್ಯತೆಯನ್ನು ಅನುಭವಿಸಿ ಶಿಕ್ಷಣವನ್ನು ಪಡೆದು 50 ವರ್ಷಗಳ ಕಾಲ ರಾಜಕೀಯ ರಂಗದಲ್ಲಿ ಸಂಸದರಾಗಿ ಕೇಂದ್ರ ಮಂತ್ರಿಗಳಾಗಿ ಮಾಡಿದಂತಹ ಸೇವೆ ಅನನ್ಯ. ಇಂಥವರನ್ನು ಒಂದು ಜಾತಿಗೆ ಸೀಮಿತ ಮಾಡಿ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅದರಿಂದ ತಪ್ಪಿಸಿದ್ದು ದುರ್ದೈವ. ಅವರು ದೇಶದ ಪ್ರಧಾನಿಯಾಗಿದ್ದರೆ ದಲಿತರ ಬದುಕು ಬೇರೆ ದಿಕ್ಕಿನಲ್ಲಿಯೇ ಸಾಗುತ್ತಿತ್ತು. ಹಸಿರು ಕ್ರಾಂತಿಯ ಹರಿಕಾರರಾಗಿ ದೇಶಕ್ಕೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಈಗಲಾದರೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಮೂರ್ತಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಎಲ್.ಗೌಡ, ಎಂ.ಪಿ.ತಿಪ್ಪೇಸ್ವಾಮಿ, ಶಿವಣ್ಣ, ಡಿ.ಸಿ.ಮಂಜುಳಾ, ಯುವ ಮುಖಂಡರಾದ ಡಿ.ಆರ್.ಮಹಾಲಿಂಗಪ್ಪ, ಹೂವಿನ ವ್ಯಾಪಾರಿ ಎಸ್.ಹೆಂಜೇರಪ್ಪ, ಕೆ.ಚಂದ್ರಶೇಖರ, ರಮೇಶ್, ಡಿ ಮೂರ್ತಿ, ಸಿ.ಪರಮೇಶ್ವರಪ್ಪ, ಎ.ತಿಮ್ಮಪ್ಪ, ಎಂ.ಶಿವಣ್ಣ, ಶುಭಮೂರ್ತಿ, ಕಮಲಮ್ಮ, ಕೆಂಚಮ್ಮ, ಗೋವಿಂದರಾಜು, ಲಕ್ಕಣ್ಣ, ಚಿದಾನಂದ, ಶಿವಣ್ಣಗೌಡ, ರಂಗಸ್ವಾಮಿ, ಲೋಕೇಶ್ ಸೇರಿದಂತೆ ಮಹಿಳಾ ಸಂಘದ ಪದಾಧಿಕಾರಿಗಳು, ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.