ಇತಿಹಾಸ ಪ್ರಸಿದ್ಧ ಚಿಕ್ಕಗಡಿಯಾರಕ್ಕೆ ನವೀಕರಣ ಭಾಗ್ಯ

KannadaprabhaNewsNetwork |  
Published : Sep 03, 2026, 03:15 AM IST
26 | Kannada Prabha

ಸಾರಾಂಶ

ಅಗತ್ಯ ಬಿಡಿಭಾಗಗಳು ನಾಪತ್ತೆ

ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಐತಿಹಾಸಿಕ ಕುರುಹುಗಳಲ್ಲಿ ಒಂದಾದ 140 ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕ ಗಡಿಯಾರಕ್ಕೆ ಕೊನೆಗೂ ನವೀಕರಣ ಭಾಗ್ಯ ಕೂಡಿ ಬಂದಿದೆ.ಎಚ್‌.ಎಮ್‌.ಟಿ (ಹಿಂದುಸ್ತಾನ್ ಮೆಷಿನ್ ಟೂಲ್ಸ್) ಸಂಸ್ಥೆಯ ಸಿಎಸ್‌ಆರ್ ಅನುದಾನದ ನೆರವಿನೊಂದಿಗೆ ಈ ಐತಿಹಾಸಿಕ ಗಡಿಯಾರವನ್ನು ದುರಸ್ತಿಗೊಳಿಸಲಾಗುತ್ತಿದೆ. ಈಗಾಗಲೇ ಎಚ್‌.ಎಮ್‌.ಟಿ ತಾಂತ್ರಿಕ ಅಧಿಕಾರಿಗಳು ಚಿಕ್ಕ ಗಡಿಯಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಂತರಿಕ ಯಂತ್ರೋಪಕರಣಗಳನ್ನು ಬಿಡಿಭಾಗಗಳಾಗಿ ಬೇರ್ಪಡಿಸಿ ತಪಾಸಣೆ ನಡೆಸಿದ್ದಾರೆ.ಈ ವೇಳೆ ಕೆಲವು ಅಗತ್ಯ ಬಿಡಿಭಾಗಗಳು ನಾಪತ್ತೆಯಾಗಿರುವುದು ಹಾಗೂ ಕೆಲವು ಭಾಗಗಳು ಅತ್ಯಂತ ದುಬಾರಿಯಾಗಿರುವುದು ಬೆಳಕಿಗೆ ಬಂದಿದೆ.ಎಚ್‌.ಎಮ್‌.ಟಿ ಸಂಸ್ಥೆ ತನ್ನ ಬಳಿ ಲಭ್ಯವಿರುವ ಬಿಡಿಭಾಗಗಳನ್ನು ಬಳಸಿ ಉಚಿತವಾಗಿ ದುರಸ್ತಿ ಕಾರ್ಯ ನಿರ್ವಹಿಸಲಿದೆ. ಅಪರೂಪದ ಹಾಗೂ ದುಬಾರಿ ಬಿಡಿಭಾಗಗಳನ್ನು ಮೈಸೂರು ಮಹಾನಗರ ಪಾಲಿಕೆ ಪ್ರತ್ಯೇಕವಾಗಿ ಖರೀದಿಸಬೇಕಿದೆ. ಪುರಭವನ ಎದುರಿನ ಐತಿಹಾಸಿಕ ದೊಡ್ಡ ಗಡಿಯಾರ (ಸಿಲ್ವರ್ ಜೂಬಿಲಿ ಕ್ಲಾಕ್ ಟವರ್) ದುರಸ್ತಿಗೂ ಯೋಜನೆ ರೂಪಿಸಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯ 25 ವರ್ಷಗಳ ಸಂಭ್ರಮಾರ್ಥವಾಗಿ (ಆಗಸ್ಟ್ 8, 1927) ಈ 75 ಅಡಿ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲಾಗಿತ್ತು.ಚಿಕ್ಕಗಡಿಯಾರ ದುರಸ್ತಿ ಕುರಿತು ಮಾತನಾಡಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಅಗತ್ಯವಿರುವ ಬಿಡಿಭಾಗಗಳ ವೆಚ್ಚ 1 ಲಕ್ಷ ರೂ. ಒಳಗಿದ್ದರೆ ಪಾಲಿಕೆಯಿಂದಲೇ ನೇರವಾಗಿ ಖರೀದಿಸಲಾಗುವುದು. 1 ಲಕ್ಷ ರೂ. ಮೀರಿದರೆ ಟೆಂಡರ್ ಕರೆಯಲಾಗುವುದು ಅಥವಾ ಇತರೆ ಸಿಎಸ್‌ಆರ್ ನೆರವು ಪಡೆಯಲಾಗುವುದು. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲು ವಾಣಿ ವಿಲಾಸ ನೀರು ಸರಬರಾಜು ಕಚೇರಿಯಲ್ಲಿ ತಾಂತ್ರಿಕ ತಂಡದೊಂದಿಗೆ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಚಿಕ್ಕ ಗಡಿಯಾರದ ಹಿನ್ನೆಲೆಬ್ರಿಟಿಷ್ ವೈಸ್‌ರಾಯ್ ಆಗಿದ್ದ ಲಾರ್ಡ್ ಡಫರಿನ್ ಅವರನ್ನು 1886ರಲ್ಲಿ ಆಗಿನ ಚಾಮರಾಜ ಒಡೆಯರ್ ಮೈಸೂರಿಗೆ ಆಹ್ವಾನಿಸಿದ್ದರು. ಈ ಐತಿಹಾಸಿಕ ಭೇಟಿಯ ನೆನಪಿಗಾಗಿ ಚಿಕ್ಕ ಗಡಿಯಾರ ಗೋಪುರವನ್ನು ನಿರ್ಮಿಸಲಾಯಿತು. ಸಾರ್ವಜನಿಕರಲ್ಲಿ ಸಮಯ ಪ್ರಜ್ಞೆ ಮೂಡಿಸಲು ಹಾಗೂ ದೇವಿಕಲ್ಪನೆಯ ಸುಂದರ ಕೆತ್ತನೆ, ಕಂಬಗಳು ಮತ್ತು ಕೆಳಭಾಗದಲ್ಲಿ ಕಾರಂಜಿಯೊಂದಿಗೆ ಇದನ್ನು ಲೋಕಾರ್ಪಣೆಗೊಳಿಸಲಾಗಿತ್ತು.ವಿಶೇಷತೆ: ಇದರ ನಾಲ್ಕೂ ಬದಿಗಳಲ್ಲಿ ಸಂಸ್ಕೃತ, ಕನ್ನಡ, ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ನಮೂದಿಸಲಾದ ಮಾರ್ಬಲ್ ಫಲಕಗಳಿವೆ. ಕಳೆದ 30 ವರ್ಷಗಳಿಂದ ಈ ಗಡಿಯಾರ ತನ್ನ ಗಂಟೆಯ ನಾದ ಕಳೆದುಕೊಂಡಿದ್ದು, ಶೀಘ್ರದಲ್ಲೇ ಇದನ್ನೂ ಸಿಎಸ್‌ಆರ್ ನೆರವಿನೊಂದಿಗೆ ಜೀರ್ಣೋದ್ಧಾರಗೊಳಿಸಲು ನಗರ ಪಾಲಿಕೆ ನಿರ್ಧರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಸ್ತು, ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ
ರೇಷ್ಮೆಗೂಡಿಗೆ ಬಂಪರ್ ಬೆಲೆ: ಕೆಜಿಗೆ 1100 ರು. ಹೊಸ ದಾಖಲೆ