ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದ ಅವರು, ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಾಗ ಒಬ್ಬ ಬೇಡ ಜಿಂಕೆ ಬೇಟೆಯಾಡಲು ಬಂದಾಗ ಸನ್ಯಾಸಿ ಮುಂದೆ ಜಿಂಕೆ ಓಡಿ ಹೋಯಿತು. ಆಗ ಬೇಡ ಸನ್ಯಾಸಿಗೆ ಕೇಳುತ್ತಾನೆ. ಸ್ವಾಮಿ ಜಿಂಕೆ ಓಡಿ ಹೋಯಿತಾ ಎಂದು. ಜಿಂಕೆ ಹೋಯಿತು ಎಂದರೆ ಅದನ್ನು ಕೊಂದು ಬಿಡುತ್ತಾನೆ. ಆ ಪಾಪ ನನಗೆ ಬಂದು ಬಿಡುತ್ತದೆ. ಸುಳ್ಳು ಹೇಳಿದರೂ ಪಾಪ ಬರುತ್ತದೆ ಎಂದು ಯೋಚಿಸಿದ ಸನ್ಯಾಸಿ. ಕಣ್ಣು ನೋಡಿತ್ತು, ಆದರೆ, ಅದು ಮಾತನಾಡಲ್ಲ. ನಾಲಿಗೆ ಮಾತನಾಡುತ್ತೆ, ಆದರೆ, ಅದು ನೋಡಲಾಗಲ್ಲ ಎಂದರು. ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ. ಸಾವು, ನೋವು ಸಂಭವಿಸುತ್ತದೆ ಎಂದು ಹಿಂದೆ ಹೇಳಿದ್ದೆ. ಇದು ಅಮಾವಾಸ್ಯೆಯವರೆಗೂ ಇರಲಿದೆ ಎಂದ ಶ್ರೀಗಳು, ಪ್ರಕೃತಿಯಲ್ಲಿ ಒಳ್ಳೆಯದು, ಕೆಟ್ಟದ್ದು ಇದೆ. ಅದು ಪ್ರಕೃತಿಯ ದೋಷ. ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ. ಅಮಾವಾಸ್ಯೆ ನಂತರ ಈ ಸಮಸ್ಯೆ ಮುಂದಿನ ಭಾಗದಲ್ಲಿ ಆಗುತ್ತದೆ. ಅನಿಷ್ಟ ಜಾಸ್ತಿ ಇರುತ್ತದೆ ಎಂದರು.ಅಳುಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಮೊದಲಿಗೆ ಅಪಪ್ರಚಾರ ಬಂದಿದೆ. ಇದು ಬರುವ ಹೊತ್ತಿಗೆ ಸತ್ಯ ಎನ್ನುವುದು ಮರೆ ಮಾಚಿರುತ್ತದೆ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಲ್ಲ. ಮಾಡದವರ ಪಾಪ ಆಡಿದವರ ಬಾಯಲ್ಲಿ. ನಾನು ತಪ್ಪು ಮಾಡದೆ ಹೇಳುವುದು ಅಪಪ್ರಚಾರ. ಅದು ಪಾಪವಾಗುತ್ತದೆ ಎಂದರು.
ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ರಾಷ್ಟ್ರ ರಾಜಕಾರಣದಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ. ಭೀಮ ಸೋಲುತ್ತಾನೆ. ರಾಜ್ಯ ರಾಜಕಾರಣದ ಮಹಾಭಾರತದಲ್ಲಿ ಅಭಿಮನ್ಯುವನ್ನು ಮೋಸದಿಂದ ಕತ್ತರಿಸುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗೆ ಸದ್ಯಕ್ಕೆ ತೊಂದರೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರು ಮತವನ್ನು ದಾನ ಮಾಡುತ್ತಿಲ್ಲ. ಮಾರಿಕೊಳ್ಳುತ್ತಿದ್ದಾರೆ ಎಂದು ಕೋಡಿಮಠದ ಬೇಸರ ವ್ಯಕ್ತಪಡಿಸಿದರು.