ಕೊಪ್ಪಳ: ಪ್ರಾಚೀನ ಕಾಲದಲ್ಲಿ ಮಹಿಳೆಯರ ಮನದಾಳದ ಧ್ವನಿಯಿಂದ ಜಾನಪದ ಹುಟ್ಟಿದೆ. ಅಕ್ಷರ ರೂಪವಿಲ್ಲದ ಜನಪದ ಸಾಹಿತ್ಯಕ್ಕೆ ಪ್ರಚಲಿತ ದಿನಗಳಲ್ಲಿ ಬಲ ಸಿಕ್ಕು ಮುಖ್ಯವಾಹಿನಿಗೆ ಪರಿಚಯವಾಗಿ ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾಹಿತಿ ವೀಣಾ ಪಾಟೀಲ ಹೇಳಿದರು.
ಜಾನಪದ ಕಲೆ ನಮ್ಮ ಜೀವನದ ಒಂದು ಭಾಗವಾಗಿದೆ. ಕಲೆ ಬಾಯಿಂದ ಬಾಯಿಗೆ ಪಸರಿಸಿದೆ. ಹೆಚ್ಚಾಗಿ ಅನಕ್ಷರಸ್ಥರು ಇದರಲ್ಲಿ ಸಾಧನೆ ಮಾಡಿದ್ದಾರೆ. ಜನಪದ ಕಲೆಗಳು ನಮ್ಮ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮುಂದಿನ ತಲೆಮಾರಿವನರಿಗೆ ಅಂದರೆ ತಲೆಮಾರಿನಿಂದ ತಲೆಮಾರಿನ ವರೆಗೆ ಹೊತ್ತು ಸಾಗುತ್ತವೆ. ಈ ಕಲೆ ದುಡಿದು ದಣಿದ ದೇಹಗಳಿಗೆ ಉಲ್ಲಾಸ, ಉತ್ಸಾಹ ನೀಡುತ್ತವೆ. ಜತೆಗೆ ಆಯಾಸ ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಕಾರಣ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಕನ್ನಡ ಭಾಷೆ ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಮಾತೃ ಭಾಷೆ ಬಳಕೆ ಬಗ್ಗೆ ಹಿಂಜರಿಕೆ ಬೇಡ. ಕನ್ನಡ ಹೃದಯದ ಭಾಷೆಯಾಗಿದೆ. ಕಾರಣ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಅರಿವಿನ ಜೋಳಿಗೆಯೊಂದಿಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಕನ್ನಡವೆಂದರೆ ಬರಿ ಪದವಲ್ಲ, ಅದು ಶಬ್ದಕೋಶದ ಮಹಾನ್ ನಿಘಂಟು. ಭಾಷೆಯ ಬಗ್ಗೆ ಗೌರವವಿರಲಿ. ಜಾನಪದ ಸಾಹಿತ್ಯದ ಮೂಲಕ ಬದುಕು ರೂಪಿಸಿಕೊಳ್ಳಬೇಕು. ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕಿದೆ ಎಂದರು,ಸಾಹಿತಿ ಬಿ.ಎನ್. ಹೊರಪೇಟಿ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಗದೀಶ್ವರಿ ಜಾಣಗಾರ, ಕಾರ್ಯದರ್ಶಿ ಜಯಶ್ರೀ ಹಂಚಿನಾಳ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಪ್ರತಿಭಾ ಮೇಟಿ, ಜುನಸಾಬ ವಡ್ಡಟ್ಟಿ, ಸಂಜೀವಿನಿ ಒಕ್ಕೂಟದ ಸುನೀಲ ಹಾಗೂ ಸಂಘದ ಮಹಿಳೆಯರು ಇತರರು ಇದ್ದರು.