ಶಿವಮೊಗ್ಗ: ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ದಿಸೆಯಲ್ಲಿ ಆರ್ಬಿಐ ಮಹಿಳೆಯರನ್ನು ಸಶಕ್ತೀಕರಣಗೊಳಿಸಲು ಆರ್ಥಿಕ ಸಾಕ್ಷರತೆ-ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ್ ತಿಳಿಸಿದರು.ನಗರದ ಡಿಎಆರ್ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಲೀಡ್ ಬ್ಯಾಂಕ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂಬುದು ಆರ್ಬಿಐ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ಈ ವರ್ಷ ಹಣಕಾಸು ಯೋಜನೆ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಇದು ಫೆ.24 ರಿಂದ 28ವರೆಗೆ ನಡೆಯಲಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಕಾರ ಕ್ಷೇತ್ರದವರೆಗೆ ಆಯೋಜಿಸಲಾಗಿದೆ ಎಂದರು.ಮನೆ ನಿರ್ವಹಣೆ ಮಾಡುವವರು ಮಹಿಳೆಯರೇ ಆಗಿರುವುದರಿಂದ ಅವರಿಗೆ ಫೈನಾನ್ಸಿಯಲ್ ಪ್ಲಾನಿಂಗ್ ಬಹಳ ಮುಖ್ಯವಾಗಿದೆ. ಸಂಬಳದಲ್ಲಿ ಉಳಿತಾಯ ಮಾಡುವುದನ್ನು ಕಲಿಯಬೇಕು. ನಿಮ್ಮ ಆದಾಯವನ್ನು ಅನಾವಶ್ಯಕವಾಗಿ ಖರ್ಚು ಮಾಡಿದೆ ಉಳಿತಾಯ ಮಾಡಬೇಕು. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಿಂದ ನಿಮ್ಮ ಹಾಗೂ ಕುಟುಂಬದ ಬೆಳವಣಿಗೆಗೆ ತೊಂದರೆ ಉಂಟಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಖರ್ಚು ಮಾಡಿ ಇನ್ನುಳಿದ ಹಣವನ್ನು ಬ್ಯಾಂಕ್ನಲ್ಲಿ ಉಳಿತಾಯ ಮಾಡಬೇಕು ಎಂದು ಸಲಹೆ ನೀಡಿದರು.ಆರ್ಥಿಕ ಸಾಕ್ಷರತಾ ಸಲಹೆಗಾರ ಬಿ.ಆರ್.ಶಂಕರಪ್ಪ ಮಾತನಾಡಿ, ಮಹಿಳೆಯರಲ್ಲಿ ಮಾನಸಿಕ ಸ್ಥೈರ್ಯ ಮೂಡಬೇಕು. ಮಹಿಳೆಯರಿಗೆ ಆಯಸ್ಸು ಹೆಚ್ಚು, ಪುರುಷರಿಗೆ ಆದಾಯ ಹೆಚ್ಚು ಇವೆರಡನ್ನು ಸಮತೋಲನಗೊಳಿಸಲು ಆರ್ಬಿಐ ಈ ಯೋಜನೆಯಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.ಹೆಣ್ಣು ಕುಟುಂಬದ ಕಣ್ಣು. ಕುಟಂಬದಲ್ಲಿನ ಆಗು-ಹೋಗುಗಳು, ಬೇಕು-ಬೇಡಗಳನ್ನು ಹೆಣ್ಣು ಮಕ್ಕಳೇ ಪೂರೈಸೋದು. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗೆ ನೀಡಿದೆ. ಅದರ ಜೊತೆಗೆ ಸಾಲದ ಸವಲತ್ತನ್ನು ಕೂಡ ನೀಡುತ್ತಿದೆ. ಉಳಿತಾಯ, ಹೂಡಿಕೆ ಇವೆಲ್ಲವನ್ನು ಜಾಗರೂಕತೆಯಿಂದ ಮಹಿಳೆಯರು ನಿರ್ವಹಿಸಬೇಕು. ಮಹಿಳೆಯರು ಆರ್ಥಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳವಾಗ ಕುಟುಂಬದ ಅನಿಸಿಕೆಯನ್ನು ಪಡೆಯಬೇಕು. ಆದಷ್ಟು ಉಳಿತಾಯವನ್ನು ಬ್ಯಾಂಕ್ನಲ್ಲೆ ಮಾಡಬೇಕು. ಬ್ಯಾಂಕ್ನ ಜೊತೆಗೆ ವ್ಯವಹಾರ ಶುದ್ಧವಾಗಿರಬೇಕು. ಸಾಲವನ್ನು ಪ್ರಾಮಾಣಿಕವಾಗಿ ಕಟ್ಟಬೇಕು ಎಂದು ಹೇಳಿದರು.ರೂರಲ್ ಸೆಲ್ಫ್ ಎಂಪ್ಲಾಯಿಮೆಂಟ್ ಟ್ರೈನಿಂಗ್ ಇನ್ಟಿಟ್ಯೂಟ್ನ ಕಾಂತೇಶ್ ಮಾತನಾಡಿ, ಮೊದಲು ನಾವು ಉಳಿತಾಯ ಮಾಡುವುದನ್ನು ಕಲಿಯಬೇಕು. ನಂತರ ಅದನ್ನು ಹೂಡಿಕೆ ಮಾಡಬೇಕು. ದುಡಿಮೆ ಇಲ್ಲದಿದ್ದರೆ ಹಣಕಾಸಿನ ಸಮಸ್ಯೆಯ ಉಂಟಾಗುತ್ತದೆ. ಅದಕ್ಕೆ ಪ್ರತಿಯೊಬ್ಬರೂ ದುಡಿಮೆ ಮಾಡಬೇಕು. ಯಾವುದೇ ಉದ್ಯೋಗ ಸಿಗದಿದ್ದರೆ ಸ್ವಂತ ಉದ್ಯೋಗವನ್ನು ಮಾಡಲು ಯೋಚಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಗಂಗಾಬಾಯಿ, ಸಹಾಯಕ ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಹೊನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಲೀಡ್ ಬ್ಯಾಂಕ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.