ಚಳ್ಳಕೆರೆ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲವೆಂದು ಚಿಂತನೆ ಮಾಡುತ್ತಿದ್ದಾರೆ. ಆದರೆ, ಪತ್ರಿಕೆಗಳಲ್ಲಿ ಮಾತ್ರ ಸರ್ಕಾರ ಸಾಧನೆ ಮಾಡಿರುವುದಾಗಿ ಸುಳ್ಳುಪ್ರಚಾರ ಪಡೆಯುತ್ತಿದೆ ಎಂದು ಶ್ರವಣಬೆಳಗೋಳದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಆರೋಪಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆದರೂ, ತೃಪ್ತಿಕರವಾದ ಚರ್ಚೆ ನಡೆಯಲಿಲ್ಲ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಎಚ್.ಆನಂದಪ್ಪನವರಿಗೆ ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.ಪತ್ರಕರ್ತ ಬಿ.ವಿ.ಚಿದಾನಂದಮೂರ್ತಿ, ಬಷೀರ್ಹಯಾತ್, ಡಿ.ಮಂಜುನಾಥ ಇವರೊಂದಿಗೆ ನಾನು ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು, ಹಳೆ ದಿನಗಳು ಇನ್ನೂ ನೆನಪಿನಲ್ಲಿವೆ. ಆಗಾಗ ಚಳ್ಳಕೆರೆಗೆ ಭೇಟಿ ನೀಡಿ ಸ್ನೇಹಿತರೊಂದಿಗೆ ಕುಶಲೋಪನಡೆಸುವ ಪರಿಪಾಠ ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.
ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ಮುಖಂಡರಾದ ಸುರೇಶ್, ಪಿ.ಎ.ತಮ್ಮಣ್ಣ, ಎಂ.ಬಾಲಸಿದ್ದೇಶ್ವರ, ಅಕ್ಷರವೆಂಕಟೇಶ್, ಎಂ.ಆರ್.ರವಿಪ್ರಸಾದ್, ಉದ್ಯಮಿ ಬಾಲಾಜಿ, ಚಿನ್ಮಯಸ್ವಾಮಿ, ಟಿ.ಬಿ.ಜಿತೇಂದ್ರ ಮುಂತಾದವರು ಉಪಸ್ಥಿತರಿದ್ದರು.