₹೧ ಕೋಟಿ ವೆಚ್ಚದಲ್ಲಿ ನಿರ್ಮಾಣ । ಸುತ್ತ ಗಿಡಗಂಟಿ ಬೆಳೆದು ಭೂತ ಬಂಗಲೆಯಂತಾಗಿದೆಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಯಾಗಿ ಸುಮಾರು ₹೧ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪಟ್ಟಣದ ರೈತ ಸಭಾ ಭವನ ಕಟ್ಟಡ ಪಾಳು ಬಿದ್ದು ಬರೋಬರಿ ೪ ವರ್ಷ ಕಳೆದರೂ ಯಾರೂ ಕೇಳುವರಿಲ್ಲದಂತಾಗಿದೆ.
೨೦೧೬ರಲ್ಲಿ ಕ್ರಿಯಾ ಯೋಜನೆಯೊಂದಿಗೆ ಅನುಮೋದನೆ ಪಡೆದು ₹೭೦ ಲಕ್ಷ ವೆಚ್ಚದಲ್ಲಿ ಪ್ರಾರಂಭವಾದ ರೈತ ಭವನ ಕಾಮಗಾರಿ ಸುಮಾರು ೫ ವರ್ಷಗಳ ಕಾಲ ನಡೆದು ೨೦೨೧ರಲ್ಲಿ ಸಭಾ ಭವನವನ್ನು ಉದ್ಘಾಟನೆ ಕೂಡ ಮಾಡಲಾಯಿತು. ಆದರೆ ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ನೆಪದಲ್ಲಿ ಮತ್ತೆ ಹೆಚ್ಚುವರಿ ₹೩೫ ಲಕ್ಷ ಮಂಜೂರು ಮಾಡಿ ಈ ಕಾಮಗಾರಿ ಟೆಂಡರ್ ಆಗಿತ್ತು. ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಸುಮಾರು ೪ ವರ್ಷ ಕಳೆದರೂ ಗುತ್ತಿಗೆದಾರ ಕಾಮಗಾರಿ ಆರಂಭಿಸದ ಕಾರಣ ಸಭಾಭವನ ಕೂಡ ಪಾಳು ಬಿದ್ದಿತ್ತು. ಇದೀಗ ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆಯಾದರೂ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಭಾಭವನವನ್ನು ಸುಸಜ್ಜಿತ ಸ್ಥಿತಿಗೆ ತಂದು ಬಳಕೆಗೆ ಸಿದ್ಧಪಡಿಸದೆ ಹಾಗೆಯೇ ಬಿಡಲಾಗಿದ್ದು, ಸಭಾಭವನದ ಸುತ್ತ ಗಿಡಗಂಟಿ ಬೆಳೆದು ನಿಂತಿವೆ.ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಾಣ ಮಾಡಲಾಗಿದೆ. ಸಭೆ-ಸಮಾರಂಭ ಮಾಡಬೇಕಾದರೆ ರೈತ ಸಮುದಾಯಕ್ಕೆ ಯಾವುದೇ ಒಂದು ಸಭಾ ಭವನವಿಲ್ಲದ ಹಿನ್ನೆಲೆ ರೈತ ಸಭಾಭವನ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಹಲವು ವರ್ಷಗಳ ಬಳಿಕ ತಾಲೂಕಿಗೊಂದು ರೈತ ಸಭಾ ಭವನ ಮಂಜೂರಿ ಮಾಡಿದೆ. ಸುಸಜ್ಜಿತವಾದ ಭವನ ನಿರ್ಮಾಣವಾಯಿತೆಂದು ರೈತ ಸಮುದಾಯ ಸಂತಸಗೊಂಡಿತ್ತು. ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆ ಕೂಡ ಮಾಡಲಾಗಿತ್ತು. ಆದರೆ ಭೋಜನದ ಸಭಾಂಗಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ನೆಪದಲ್ಲಿ ಸಭಾಭವನಕ್ಕೆ ಬೀಗ ಹಾಕಿ ಸುಮಾರು ೪ ವರ್ಷ ಕಳೆದಿದ್ದು, ಸಭಾಭವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇದು ರೈತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಡಾಡಿ ದನಗಳ ತಾಣ:ಪಟ್ಟಣದ ಹೊರ ವಲಯದಲ್ಲಿ ರೈತ ಭವನ ನಿರ್ಮಾಣ ಮಾಡಿ ಹಾಳುಗೆಡವಲಾಗಿದೆ. ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಜನರು ಓಡಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲವು ಪೋಕರಿಗಳು ರಾತ್ರಿಯಾಗುತ್ತಲೇ ಇಲ್ಲಿ ಜೂಜು, ಮದ್ಯ ಸೇವನೆ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆ ಅಡ್ಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೇ ಹಾಳು ಬಿದ್ದ ಈ ಕಟ್ಟಡವೀಗ ನಾಯಿ, ಹಂದಿ, ದನಗಳ ವಾಸ ಸ್ಥಾನ ಕೂಡ ಆಗಿ ಮಾರ್ಪಟ್ಟಿದೆ.