ವಚನಕಾರರು ನಡೆಸಿದ ಚರ್ಚೆ, ಚಿಂತನೆಗಳು ಜ್ಞಾನದ ಪರಂಪರೆ

KannadaprabhaNewsNetwork |  
Published : Feb 26, 2024, 01:35 AM IST
ಚಿತ್ರ 25ಬಿಡಿಆರ್2ಬಸವಕಲ್ಯಾಣ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶನಿವಾರ ಹಮ್ಮಿಕೊಂಡಿದ್ದ  ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ ಕುರಿತಾದ ಪ್ರತಿಷ್ಠಾನದ 77ನೇ ಉಪನ್ಯಾಸ ಸಮಾರಂಭವನ್ನು ಬಿಹಾರದ ಪಟ್ನಾ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿಂದಿಯ ಪ್ರಸಿದ್ಧ ಕವಿ ಪ್ರೊ. ಅರುಣ ಕಮಲ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಟ್ನಾ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಅರುಣ ಕಮಲ್‌ ಅವರು ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭಗಳು ಕುರಿತಾದ ಬಗ್ಗೆ ಬಸವಕಲ್ಯಾಣದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ವಚನಕಾರರು 12ನೇ ಶತಮಾನದಲ್ಲಿ ನಡೆಸಿದ ಚರ್ಚೆ, ಚಿಂತನೆಗಳು ಜ್ಞಾನ ಪರಂಪರೆ ಹಾಗೂ ದರ್ಶನಗಳಾಗಿವೆ ಇದು ಜಾಗತಿಕ ತತ್ವಶಾಸ್ತ್ರದ ಭಾಗವಾಗಿವೆ ಎಂದು ಬಿಹಾರದ ಪಟ್ನಾ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಹಿಂದಿಯ ಪ್ರಸಿದ್ಧ ಕವಿ ಪ್ರೊ. ಅರುಣ ಕಮಲ್‌ ಹೇಳಿದರು.

ಅವರು ಇಲ್ಲಿನ ಬಸವಕಲ್ಯಾಣ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ ಕುರಿತಾದ ಪ್ರತಿಷ್ಠಾನದ 77ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ನೆಲದಲ್ಲಿ ಮಾನವೀಯತೆ ಮತ್ತು ಜ್ಞಾನ ಪರಂಪರೆ ಎರಡೂ ಚಲನಶೀಲವಾಗಿದ್ದವು ಎಂದರು.

ಲೋಕಜ್ಞಾನದ ಅಂತರಂಗ ಕಟ್ಟಿಕೊಡುವ ಸಾಮರ್ಥ್ಯ ಭಾಷೆಗಿದೆ. ಭಾಷೆಗೆ ಯಾವ ಹಂಗು ಇಲ್ಲ. ಆಡಿದವರಿಗೆ ದಕ್ಕುವ ಗುಣ ಭಾಷೆಗಿದೆ. ಭಾಷೆ ಯಾವುದಾದರೂ ಅದರಲ್ಲೊಂದು ಜ್ಞಾನ ಪರಂಪರೆ ಇದ್ದೇ ಇರುತ್ತದೆ. ಹೆಚ್ಚು ಭಾಷೆ ತಿಳಿದಷ್ಟು ಹೆಚ್ಚು ಜ್ಞಾನ ಪರಂಪರೆ ಅರಿಯುತ್ತೇವೆ. ಭಾಷಾ ಜ್ಞಾನ ಇರುವವರು ವ್ಯವಹಾರಿಕ ಜ್ಞಾನವೂ ಹೊಂದಿರಬೇಕು. ಲೋಕಜ್ಞಾನದ ಆಂತರ್ಯವನ್ನು ಭಾಷೆ ದಟ್ಟವಾಗಿ ಕಟ್ಟಿಕೊಡುತ್ತದೆ ಎಂದರು.

ಕಲ್ಯಾಣ ಎಂಬುವದು ಬಹುದೊಡ್ಡ ಅನುಭವ ಲೋಕವಾಗಿದೆ. ಇಲ್ಲಿ ಬಸವ, ಅಲ್ಲಮ, ಅಕ್ಕ ಸೇರಿ ಹಲವರು ನಡೆಸಿದ ಚರ್ಚೆ, ಚಿಂತನೆಗಳು ಜಗತ್ತಿನ ಚಲನಶೀಲತೆಗೆ ಚಾಲಕ ಶಕ್ತಿಗಳಾಗಿವೆ. ವೈಚಾರಿಕ ಪರಂಪರೆಯೊಂದು ಕಲ್ಯಾಣದಲ್ಲಿ ಇತ್ತೆಂಬುದೇ ಬೆರಗಿನ ಸಂಗತಿ ಎಂದರು.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದರ ನಿಯಂತ್ರಣಕ್ಕೆ ಮತ್ತು ಬಳಕೆಗೆ ಮನುಷ್ಯನ ಅಗತ್ಯವಿದೆ. ಮಾನವೀಯತೆ ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು. ಮಾನವೀಯತೆ ಬದುಕಿನ ಸತ್ವವಾಗಿದೆ ಎಂದರು.

ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಮಾತನಾಡಿ, ಬಹಳ ದೊಡ್ಡ ದೊಡ್ಡ ವ್ಯಕ್ತಿತ್ವಗಳ ಬರಹಗಾರರ, ವಿಜ್ಞಾನಿಗಳ ಮಾತನ್ನು ಕೇಳಿಸಿಕೊಳ್ಳುವದೂ ಶಿಕ್ಷಣದ ಭಾಗವಾಗಿದೆ. ದೊಡ್ಡವರ ಮಾತು ಮತ್ತು ಆಲೋಚನೆಗಳು ಅನೇಕ ಹೊಸ ದಾರಿ, ಹೊಸ ಹೊಳಹು ತೋರಿಸುತ್ತವೆ. ಸಾಹಿತ್ಯದಲ್ಲಿ ಬದುಕಿನ ಸಮಾಜದ ಹಲವು ಮುಖಗಳು ಅಡಕವಾಗಿರುತ್ತವೆ. ಅದನ್ನು ಅರಿಯುವ ಸೂಕ್ಷ್ಮತೆ ಗಂಭೀರ ಓದಿನಿಂದ ಸಾಧ್ಯ ಎಂದರು.

ಸಿಯುಕೆ ಪ್ರಾಧ್ಯಾಪಕ ಪ್ರೊ. ಬಿ.ಬಿ ಪೂಜಾರಿ ಮಾತನಾಡಿ, ಆಲೋಚಿಸುವ, ಮಾತನಾಡುವ ಬರೆಯುವ ಸಾಮರ್ಥ್ಯ ಕೇವಲ ಮನುಷ್ಯನಿಗೆ ಮಾತ್ರ ಒದಗಿದ ವರ. ಒಳ್ಳೆಯದನ್ನು ಆಲೋಚಿಸಿ ಬರೆದು, ಮಾತನಾಡುತ್ತ ತನ್ನ ಸೃಜನಶೀಲತೆ ಬೆಳೆಸಿಕೊಂಡವರು ಉತ್ತಮ ಬರಹಗಾರರಾಗುತ್ತಾರೆ. ಮನುಷ್ಯನ ವ್ಯಕ್ತಿತ್ವ ಅವನ ಸೃಜನಶೀಲ ಕೆಲಸಗಳಿಂದ ರೂಪುಗೊಳ್ಳುತ್ತದೆ ಎಂದರು.

ಉಪನ್ಯಾಸಕರಾದ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯ ತನ್ನ ಕಾಲದ ಹಲವು ತಲ್ಲಣಗಳಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಗುಣ ಹೊಂದಿದೆ. ಜಾಗತಿಕ, ಭಾರತೀಯ ಮತ್ತು ಕನ್ನಡ ಸಾಹಿತ್ಯದ ಮೂಲ ಸತ್ವ ಮಾನವೀಯತೆಯಾಗಿದೆ ಎಂದರು.

ಪ್ರಾಚಾರ್ಯ ಡಾ. ಅಶೋಕಕುಮಾರ ವಣಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಎನ್ಆರ್ ಕೋಡ್ಲೆ, ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಫತೆಪುರದ ವಿಮಲಕುಮಾರ ಸೇರಿ ಹಲವರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಉಪ ಪ್ರಾಚಾರ್ಯ ಡಾ. ಅರುಣಕುಮಾರ ಯಲಾಲ್‌, ಬಿಇಸಿ ರಿಜಿಸ್ಟ್‌ರ್‌ ಪ್ರೇಮಸಾಗರ ಪಾಟೀಲ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ