- ಚನ್ನಗಿರಿ ತಾಲೂಕು ಸಂತೇಬೆನ್ನೂರು ಪೆಟ್ರೋಲ್ ಬಂಕ್ ಬಳಿ ಹತ್ಯೆ
- ಚನ್ನಾಪುರದ ಪಂಚರ್ ಕೆಲಸಗಾರ ರಂಗಸ್ವಾಮಿ ಹಂತಕ- ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಸಂತೋಷ್ ಹತ್ಯೆ
- ಪತ್ನಿ ಕೊಲೆಗೂ ರಂಗಸ್ವಾಮಿ ಸಂಚು, ಆರೋಪಿ ಬಂಧನದಿಂದ ತಪ್ಪಿದ ಮತ್ತೊಂದು ಕೊಲೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೇಬೆನ್ನೂರು ಸಮೀಪ ಗಾರೆ ಕೆಲಸಗಾರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಘಟನೆ ನಡೆದ 6 ಗಂಟೆಗಳಲ್ಲೇ ಪೊಲೀಸ್ ಶ್ವಾನದ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ.ಗ್ರಾಮದ ಸಂತೋಷ (36) ಕೊಲೆಯಾದ ಗಾರೆ ಕೆಲಸಗಾರ. ಚನ್ನಾಪುರದ ಪಂಚರ್ ಹಾಕುವ ಕೆಲಸಗಾರ ರಂಗಸ್ವಾಮಿ (32) ಹಂತಕ. ಕಳೆದ ರಾತ್ರಿ ಗ್ರಾಮದ ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಹಿಂದುಸ್ಥಾನ್ ಪೆಟ್ರೋಲಿಯಂ ಪಂಪ್ ಎದುರಿನ ರಸ್ತೆಯಲ್ಲಿ ಸಂತೋಷ್ನನ್ನು ಮಚ್ಚಿನಿಂದ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ವಿಷಯ ಸಂತೇಬೆನ್ನೂರು ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಯಾದ ಚನ್ನಾಪುರ ಗ್ರಾಮದ ಪಂಚರ್ ಕೆಲಸಗಾರ ರಂಗಸ್ವಾಮಿಯನ್ನು ಕೃತ್ಯಕ್ಕೆ ಬಳಸಿದ ಮಚ್ಚಿನೊಂದಿಗೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಕೊಲೆಗೀಡಾದ ಸಂತೋಷ್ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಕೋಪಗೊಂಡು ಹತ್ಯೆ ಮಾಡಿದ್ದಾಗಿ ಆರೋಪಿ ರಂಗಸ್ವಾಮಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸಂತೋಷನನ್ನು ಕೊಲೆ ಮಾಡಿದ ನಂತರ ತನ್ನ ಹೆಂಡತಿಯ ಕೊಲೆಗೂ ರಂಗಸ್ವಾಮಿ ಸಂಚು ರೂಪಿಸಿದ್ದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದರಿಂದ ಇನ್ನೊಂದು ಕೊಲೆ ಘಟಿಸೋದು ತಡೆದಂತಾಗಿದೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- - -
ಬಾಕ್ಸ್ * ಹಂತಕನ ಪತ್ತೆ ಹಚ್ಚಿದ ತುಂಗಾ-2 ಕೊಲೆ ಪ್ರಕರಣ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ತಂಡವು ಅಪರಾಧ ಪತ್ತೆ ಶ್ವಾನ (ಕ್ರೈಂ ಡಾಗ್) ತುಂಗಾ-2 ಜೊತೆಗೆ ಶ್ವಾನದಳ ಹಾಗೂ ಸುಕೋ ತಂಡದೊಂದಿಗೆ ಲಭ್ಯವಿರುವ ಸಾಕ್ಷ್ಯಾಧಾರ ಕಲೆ ಹಾಕಲು ಶುರುಮಾಡಿತು.ಧಾರಾಕಾರ ಸುರಿಯುತ್ತಿದ್ದ ಮಳೆಯ ಮಧ್ಯೆಯೂ ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು ತುಂಗಾ ಶ್ವಾನ ದಳದ ಸಿಬ್ಬಂದಿ ಎಂ.ಡಿ.ಶಫಿವುಲ್ಲಾ, ದರ್ಗಾನಾಯ್ಕ ಅವರೊಂದಿಗೆ ಆರೋಪಿಯ ಚಲನವಲನ ಗುರುತಿಸುವಲ್ಲಿ ಸಾಧ್ಯವಾಗಿದೆ. ಸಂತೇಬೆನ್ನೂರು ಠಾಣೆ ಪಿಎಸ್ಐಗಳಾದ ರೂಪಾ ತೆಂಬದ್, ಚನ್ನವೀರಪ್ಪ ಹಾಗೂ ಸಿಬ್ಬಂದಿ ಕಾರ್ಯನಿಷ್ಠೆಗೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
- - - (ಸಾಂದರ್ಭಿಕ ಚಿತ್ರ)