ಕನ್ನಡಪ್ರಭ ವಾರ್ತೆ ಮಂಡ್ಯ
ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಗೆ ಇಳಿಯಬಾರದು. ಮಹಿಳೆಯರಿಗೆ ಶಕ್ತಿ ತುಂಬುವುದು ಮಹಿಳಾ ಆಯೋಗದ ಕರ್ತವ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಕನ್ನಡ ಸೇನೆ-ಕರ್ನಾಟಕ ಜಿಲ್ಲಾ ಘಟಕದಿಂದ ನಡೆದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಎಲ್ಲಿಯವರೆ ಸಮಸ್ಯೆ, ಸವಾಲು, ಅವಮಾನಗಳನ್ನು ಎದುರಿಸುವ ಶಕ್ತಿ ತಮಗಿದೆ ಎಂದು ಗೊತ್ತಾಗುವುದಿಲ್ಲವೋ ಅಲ್ಲಿಯವರೆಗೆ ದೌರ್ಜನ್ಯ ನಿಲ್ಲುವುದಿಲ್ಲ. ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮೋಸ-ವಂಚನೆಗಳಿಗೆ ಗುರಿಯಾಗುವುದಿಲ್ಲ. ಮೈಕ್ರೋ ಫೈನಾನ್ಸ್ಗಳನ್ನು ನಿಯಂತ್ರಣದಲ್ಲಿಡಲು ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಮೈಕ್ರೋ ಫೈನಾನ್ಸ್ನವರಿಂದ ಮಹಿಳೆಯರು ಸಮಸ್ಯೆಗಳಿದ್ದರೆ ಅವರ ನೆರವು ಪಡೆಯುವಂತೆ ಸಲಹೆ ನೀಡಿದರು.ಹೆಣ್ಣು ಭ್ರೂಣ ಹತ್ಯೆ ಹೆಣ್ಣು ಕಾರಣೀಭೂತಳಾಗುತ್ತಿರುವುದು ವಿಷಾದದ ಸಂಗತಿ. ಹೆಣ್ಣಿನ ರಕ್ಷಣೆಗೆ ಪುರುಷರೂ ಟೊಂಕಕಟ್ಟಿ ನಿಲ್ಲಬೇಕಿದೆ. ಸೃಷ್ಟಿಯ ವಿರುದ್ಧವಾಗಿ ಹೋದರೆ ವಿನಾಶ ಖಚಿತ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.
ಹೆಣ್ಣು ಭ್ರೂಣ ಹತ್ಯೆ ಕಳಂಕ ಮಂಡ್ಯಕ್ಕೆ ಅಂಟಿಸಿಕೊಳ್ಳುವುದು ಬೇಡ. ಮಂಡ್ಯ ರಾಜ್ಯಕ್ಕೇ ಒಂದು ಭರವಸೆಯ ಬೆಳಕಿದ್ದಂತೆ. ಕನ್ನಡ ನೆಲ-ಜಲ, ಭಾಷೆ, ಸಂಸ್ಕೃತಿ, ಹೋರಾಟ, ಆಚಾರ-ವಿಚಾರ ಯಾವುದೇ ಇದ್ದರೂ ಅದಕ್ಕೆ ಸ್ವಾಭಿಮಾನದ ಕಿಚ್ಚು ಹಚ್ಚಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವ ಶಕ್ತಿ ಈ ನೆಲದ ಜನರಿಗಿದೆ. ಅಂತಹ ನೆಲದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯುವುದಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದರು.ಹೆಣ್ಣು ಮಕ್ಕಳಿಗೆ ಹೊಟ್ಟೆಯಲ್ಲಿರುವಾಗಿನಿಂದಲೇ ಹುಟ್ಟಬೇಕೋ-ಸಾಯಬೇಕೋ ಎಂಬ ಹೋರಾಟ ಶುರುವಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಶಕ್ತಿಯಾಗಿ ನಿಲ್ಲಬೇಕು. ಸಮಸ್ಯೆಗಳಿಗೆ ಹೆದರದೆ ದಿಟ್ಟತನದಿಂದ ಎದುರಿಸಬೇಕು. ತಾಯಿಯಾದವಳು ಮಗಳಿಗೆ ಪ್ರೀತಿಯನ್ನು ಕೊಡುತ್ತಾಳೆ. ತಂದೆ ಮಗಳಿಗೆ ಶಕ್ತಿಯನ್ನು ತುಂಬುತ್ತಾನೆ. ಹೆಣ್ಣು ತಾಯಿಯ ಪ್ರೀತಿ ತಂದೆಯ ಶಕ್ತಿಯನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಬೆಳವಣಿಗೆ ಸಾಧಿಸಬೇಕು. ಹೆಣ್ಣು ಸಬಲಳಾದಾಗ ಮಾತ್ರ ಸಮಾಜ ಮತ್ತು ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಮಂಡ್ಯ ಜನಪದದ ತವರು. ಈ ಜಿಲ್ಲೆಗೆ ಇರುವ ಜಾನಪದದ ಹಿನ್ನೆಲೆ ಬೇರೆ ಯಾವ ಜಿಲ್ಲೆಗೂ ಇಲ್ಲ. ಕಲೆಗಳನ್ನು ಉಳಿಸಿ ಬೆಳೆಸುವ ಮನೋಭಾವದ ಜೊತೆಗೆ ಶೇ.82ರಷ್ಟು ಕನ್ನಡ ಮಾತನಾಡುವ ಜನರಿದ್ದರೆ ಅದು ಮಂಡ್ಯದಲ್ಲಿ ಮಾತ್ರ. ಹಾಗಾಗಿ ಭವಿಷ್ಯದಲ್ಲಿ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ ಎಂಬ ಸಂದೇಶವನ್ನು ರಾಜ್ಯಕ್ಕೇ ಮಂಡ್ಯ ಸಾರಿ ಹೇಳುತ್ತಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ಸಮಾಜ, ದೇಶಕ್ಕೆ ಒಳ್ಳೆಯದಾಗುವಂತಹ ಕಾರ್ಯಕ್ರಮಗಳನ್ನು ಸಂಘಟನೆಗಳು ಮಾಡಿದರೆ ಅದಕ್ಕೆ ಎಂದಿಗೂ ನಮ್ಮ ಬೆಂಬಲವಿರುತ್ತದೆ. ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗಿ ಸಂಘಟನೆಗಳು ಶ್ರಮಿಸಿದಾಗ ಸಮಾಜದಿಂದ ಗೌರವಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದು ಚುಟುಕಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಹೆಣ್ಣಿಗೆ ದೈವದತ್ತವಾಗಿ ಪುರುಷರಿಗಿಂತ ಹೆಚ್ಚಿನ ಶಕಕ್ತಿ ಇದೆ. ಹೆಣ್ಣು ಮನೆ ಬೆಳಗಿದರೆ ಲೋಕವೇ ಬೆಳಗುತ್ತದೆ. ಹೆಣ್ಣನ್ನು ತಾಯಿ, ಹೆಂಡತಿ, ಅಕ್ಕ-ತಂಗಿಯಾಗಿ ಸ್ವೀಕರಿಸುತ್ತೇವೆ. ಮಗಳಾಗಿ ಒಪ್ಪಿಕೊಳ್ಳುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಹೆಣ್ಣಿಗೆ ಗೌರವ ಕೊಡುವುದು ಮನೆಯಿಂದಲೇ ಆರಂಭವಾಗಬೇಕು ಎಂದರು.ಕನ್ನಡನಾಡಿನ ಪ್ರತಿಯೊಬ್ಬರಲ್ಲೂ ಕನ್ನಡ ಪ್ರಜ್ಞೆ ಮೂಡಬೇಕು. ಕನ್ನಡದ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು. ಕನ್ನಡ ಭಾಷೆಯ ಇತಿಹಾಸ, ಮಹತ್ವವನ್ನು ಮಕ್ಕಳಿಗೂ ಪರಿಚಯಿಸಿ ಅವರಲ್ಲಿ ಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿದಾಗ ಕನ್ನಡದ ಉಳಿವು ಸಾಧ್ಯವಾಗುತ್ತದೆ. ಕನ್ನಡದ ಬೆಳವಣಿಗೆಯೂ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಹಲವರಿಗೆ ವೀರ ಕನ್ನಡಿಗ ಪ್ರಶಸ್ತಿ ಹಾಗೂ ಹಲವು ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಲಾಯಿತು. ಅಧ್ಯಕ್ಷತೆಯನ್ನು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ವಹಿಸಿದ್ದರು. ಅತಿಥಿಗಲಾಗಿ ಎಚ್.ವಿ.ನಟರಾಜು, ಸೌಭಾಗ್ಯಶಿವಲಿಂಗು, ಪವಿತ್ರಾ ನಾಗರಾಜು, ಜಿ.ಮಹಂತಪ್ಪ, ಎಂ.ಬೆಟ್ಟಹಳ್ಳಿ ಮಂಜುನಾಥ್, ಕಮ್ಮನಾಯಕನಹಳ್ಲಿ ಮಂಜು ಇತರರಿದ್ದರು.