ಸಮಸ್ಯೆಗಳ ನಡುವೆಯೇ ಶೈಕ್ಷಣಿಕ ವರ್ಷಾರಂಭಕ್ಕೆ ಅಣಿ

KannadaprabhaNewsNetwork | Published : May 31, 2024 2:16 AM

ಸಾರಾಂಶ

ದುರಸ್ತಿಗಾಗಿ ಕಾದಿರುವ ನೂರಾರು ಶಾಲೆಗಳ ನಡುವೆಯೇ ಇಂದಿನಿಂದ ಶಾಲಾರಂಭಬವಾಗುತ್ತಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ.

* ಅನಂತಕುಮಾರ್‌

ಕನ್ನಡಪ್ರಭ ವಾರ್ತೆ ಭದ್ರಾವತಿ

ಶಿಕ್ಷಕರ ಕೊರತೆ ಹಾಗೂ ಶಿಥಿಲ ಕಟ್ಟಡದ ಸಮಸ್ಯೆಗಳು ಸೇರಿ ಹಲವಾರು ಸಮಸ್ಯೆಗಳ ನಡುವೆಯೂ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆಗಳ ಕೈಗೊಂಡಿದೆ.

ತಾಲೂಕಿನಲ್ಲಿ ೨೮೭ ಸರ್ಕಾರಿ ಶಾಲೆಗಳು, ೬೧ ಅನುದಾನಿತ ಶಾಲೆಗಳು, ೮೬ ಅನುದಾನ ರಹಿತ ಶಾಲೆಗಳು, ೧೭ ವಸತಿ ಶಾಲೆಗಳು ಹಾಗು ೨ ಇತರೆ ಶಾಲೆಗಳನ್ನು ಒಳಗೊಂಡಂತೆ ೪೪೮ ಶಾಲೆಗಳನ್ನು ಹೊಂದಿದೆ. ಅವುಗಳಲ್ಲಿ ೨೯೮ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದ್ದರೆ, ೧೫೦ ಶಾಲೆಗಳು ನಗರ ಪ್ರದೇಶ ವ್ಯಾಪ್ತಿಯಲ್ಲಿವೆ.

ತಾಲೂಕಿನ ಒಟ್ಟು ೪೪೮ ಶಾಲೆಗಳಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ೭೬ ಶಾಲೆಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ೩೩ ಶಾಲೆಗಳ ಕಟ್ಟಡಗಳು ಬಹಳಷ್ಟು ಹಾನಿಗೊಳಗಾಗಿದ್ದು, ದುರಸ್ತಿಯ ನಿರೀಕ್ಷೆಯಲ್ಲಿವೆ. ಇವುಗಳ ಪೈಕಿ ೪೧ ಶಾಲೆಗಳು ಸಂಪೂರ್ಣ ಹಾಳಾಗಿದ್ದು, ಇವುಗಳನ್ನು ನೆಲಸಮಗೊಳಿಸಿ ಹೊಸ ದಾಗಿ ನಿರ್ಮಿಸುವ ಅಗತ್ಯವಿದೆ. ಇದು ಶಾಲಾ ಕಟ್ಟಡಗಳ ಸಮಸ್ಯೆಯಾದರೆ, ಮತ್ತೊಂದೆಡೆ ತಾಲ್ಲೂಕಿನ ಬಹುತೇಕ ಬಿಸಿಯೂಟದ ಅಡುಗೆ ಕೋಣೆಗಳು ಶಿಥಿಲಾವಸ್ಥೆಯಿಂದ ಕೂಡಿವೆ. ಇದು ತಾಲೂಕಿನ ಶಾಲೆಗಳ ಚಿತ್ರಣವಾದರೆ ಮತ್ತೊಂದೆಡೆ ಶಿಕ್ಷಕರ ಸಮಸ್ಯೆ ಕೂಡ ಕೇವಲ ಪ್ರಾಥಮಿಕ ಶಾಲೆಗಳಲ್ಲಿಯೇ ೧೩೩ ಶಿಕ್ಷಕರ ಕೊರತೆ ಕಂಡು ಬಂದಿದೆ. ತಾಲೂಕಿನ ೨೬೩ ಪ್ರಾಥಮಿಕ ಶಾಲೆಗಳಿಗೆ ೯೯೧ ಶಿಕ್ಷಕರು ಮಂಜೂರಾಗಿದ್ದು, ಅದರಲ್ಲೂ ೧೩೩ ಶಿಕ್ಷಕರ ಕೊರತೆ ಕಂಡು ಬಂದಿದೆ. ತಾಲೂಕಿನಲ್ಲಿ ೯೨ ಸಹ ಶಿಕ್ಷಕರು, ೩೩ ಮುಖ್ಯೋಪಾಧ್ಯಾಯರು, ೬ ದೈಹಿಕ ಶಿಕ್ಷಕರು, ೨ ವಿಶೇಷ ಶಿಕ್ಷಕರು ಸೇರಿದಂತೆ ೧೩೩ ಶಿಕ್ಷಕರ ಕೊರತೆಯಿದ್ದು, ಪ್ರಸ್ತುತ ೭೦ ಅತಿಥಿ ಶಿಕ್ಷಕರನ್ನಾದರೂ ನೇಮಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಇಷ್ಟೆಲ್ಲ ಸಮಸ್ಯೆಗಳ ನಡುವೆಯೇ ಕೆಲವು ಉತ್ತಮ ಫಲಿತಾಂಶ ನಿರೀಕ್ಷಿಸಿದ್ದ ಶಾಲೆಗಳು ಕಡಿಮೆ ಫಲಿತಾಂಶ ಪಡೆದಿರುವುದು ಸಹ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿ ದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಜ್ಜುಗೊಂಡಿರುವ ಶಿಕ್ಷಣ ಇಲಾಖೆ ಶೇ.೭೫ರಷ್ಟು ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ಆಯಾ ಶಾಲೆಗಳಿಗೆ ಪೂರೈಸಿದೆ. ಜೂ. ೧ರಿಂದ ವಿತರಣೆಗೆ ಸಿದ್ಧತೆ ನಡೆಸಿದೆ. ಜೊತೆಗೆ ದಾಖಲಾತಿ ಅಂದೋಲನ, ಜಾಗೃತಿ ಜಾಥಾ ನಡೆಸಲು ಸಿದ್ಧತೆ ನಡೆಸಿದೆ. ಒಟ್ಟಾರೆ ಅನೇಕ ಸಮಸ್ಯೆ ಸವಾಲುಗಳ ನಡುವೆಯೂ ಶಿಕ್ಷಣ ಇಲಾಖೆ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ಆರಂಭಿಸಿದೆ.

ಮೇ ೩೧ರಂದು ಚಾಲನೆ :

ಬುಧವಾರದಿಂದ ಸರ್ಕಾರಿ ಶಾಲೆಗಳು ಆರಂಭಗೊಂಡಿವೆಯಾದರೂ ಎರಡು ದಿನ ಸ್ವಚ್ಛತಾ ಕಾರ್ಯ ಸೇರಿದಂತೆ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಸಿದ್ದತೆಗಳನ್ನು ಕೈಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಪ್ರತಿ ವರ್ಷ ಶಾಲೆಗಳ ಪ್ರಾರಂಭೋತ್ಸವ ಹಬ್ಬದ ವಾತಾವರಣ ಕಂಡು ಬರುತ್ತಿದ್ದು, ಹಿಂದಿನ ದಿನವೇ ಎಲ್ಲಾ ಶಾಲೆಗಳಲ್ಲಿ ಹಸಿರು ತೋರಣಗಳಿಂದ ಅಲಂಕರಿಸಿ ಶಾಲಾಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಹೆಚ್ಚಿನ ಶ್ರಮವಹಿಸಿದ್ದಾರೆ. ಕೋಟ್:

ಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡ ಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ. ಇದರ ಸದುಪಯೋಗಪಡೆದುಕೊಂಡು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಹಕರಿಸಿ.

- ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಭದ್ರಾವತಿ

Share this article