ನವಲಗುಂದ:
ಮಂಗಳವಾರ ಸ್ಥಳೀಯ ಪಂಚಗೃಹ ಹಿರೇಮಠದ ಶ್ರೀಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮೌಲ್ಯಗಳ ಸಂರಕ್ಷಣೆಯೇ ಧರ್ಮ ಪೀಠಗಳ ಮೂಲ ಗುರಿಯಾಗಿದೆ. ನೀತಿವಂತರು ನಿರಾಶರಾಗಬಾರದು. ನೋವು ನುಂಗಿ ನಲಿವನ್ನು ತೋರಬೇಕಾಗಿದೆ. ಸತ್ಯ ಶುದ್ಧವಾದ ಧರ್ಮ ಮಾರ್ಗದಲ್ಲಿ ಮನುಷ್ಯ ನಡೆದು ಸುಖ-ಶಾಂತಿ ಪಡೆಯಬೇಕಾಗಿದೆ. ಇತಿಹಾಸ-ಪರಂಪರೆವುಳ್ಳ ನವಲಗುಂದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಆದರ್ಶ, ಪರಂಪರೆ ಗುರುವಿನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಬುಧವಾರ ಶುಭ ಮುಹೂರ್ತದಲ್ಲಿ ನೂತನ ಶ್ರೀಗಳಿಗೆ ಗುರುತ್ವಾಧಿಕಾರ ಅನುಗ್ರಹಿಸಿ ಶುಭ ಹಾರೈಸಲಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ಅರಿವಿನ ಆದರ್ಶ ಜೀವನ ಪ್ರಾಪ್ತಿಗಾಗಿ ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ವಿಶ್ವಾಸವನ್ನಿಟ್ಟು ಬಾಳುವ ಅವಶ್ಯಕತೆಯಿದೆ ಎಂದರು.
ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಶ್ರದ್ಧೆ, ನಿಷ್ಠೆ ಮತ್ತು ಅನುಭಾವದಿಂದ ಬದುಕು ನಿರಾಳ. ಸಾಮರಸ್ಯದ ನುಡಿ, ನಡೆ ಚೆಂದ. ಸಮರಸವೇ ಸರ್ವ ಸೌಭಾಗ್ಯಕ್ಕೆ ಸೋಪಾನ. ಜಗದೊಡೆಯನ ಧ್ಯಾನ ಮಾಡಿ ಬದುಕಿನಲ್ಲಿ ಶಾಂತಿ ಕಾಣಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಪಟ್ಟಣದ ರಾಜ ಬೀದಿಯಲ್ಲಿ ಭೋವಿ ಜನಾಂಗದವರು ಹಾಗೂ ತಾಲೂಕಿನ ಭಕ್ತರಿಂದ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. 1500 ಹೆಚ್ಚು ಮಹಿಳೆಯರು ಕುಂಭ ಹೊತ್ತು ಮೆರವಣೆಗೆಯಲ್ಲಿ ಪಾಲ್ಗೊಂಡರು.