ದಿನೇ ದಿನೇ ಮಲೆನಾಡಿಗರ ನಿದ್ದೆಗೆಡಿಸುತ್ತಿದೆ ಕೆಎಫ್‌ಡಿ ಭೀತಿ

KannadaprabhaNewsNetwork |  
Published : Dec 14, 2025, 02:30 AM IST
ಮಂಗನ ಅಂತ್ಯಸAಸ್ಕಾರ ಮಾಡಿರುವುದು | Kannada Prabha

ಸಾರಾಂಶ

ಜಿಲ್ಲೆಯ ಕೆಲವೆಡೆ ಒಂದೆರಡು ಮಂಗನಕಾಯಿಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಜನರಲ್ಲಿ ಕೆಎಫ್‌ಡಿ ಭೀತಿ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಸಾಗರ

ಜಿಲ್ಲೆಯ ಕೆಲವೆಡೆ ಒಂದೆರಡು ಮಂಗನಕಾಯಿಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಜನರಲ್ಲಿ ಕೆಎಫ್‌ಡಿ ಭೀತಿ ಶುರುವಾಗಿದೆ.

ಕಳೆದ ೨೦೧೯ರಂದು ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡು ೨೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ನಂತರದ ವರ್ಷಗಳಲ್ಲಿ ತಾಲೂಕಿನಲ್ಲಿ ಒಂದೆರಡು ಕೆಎಫ್‌ಡಿ ಪ್ರಕರಣ ದಾಖಲಾಗಿತ್ತೆ ಹೊರತು ಸಾವು ನೋವು ಸಂಭವಿಸಿರಲಿಲ್ಲ. ಆದರೆ ಈಗ ಮಂಗಗಳ ಸರಣಿ ಸಾವು ಜನರ ನಿದ್ದೆಗೆಡಿಸಿದೆ.

ತಾಲೂಕಿನ ಮಾವಿನಸರ ಗ್ರಾಮದಲ್ಲಿ ೨, ಆವಿನಹಳ್ಳಿ ವ್ಯಾಪ್ತಿಯಲ್ಲಿ ೫, ಎಡಜಿಗಳೆಮನೆಯಲ್ಲಿ ೧, ಆನಂದಪುರ ವ್ಯಾಪ್ತಿಯ ಅಡೂರಿನಲ್ಲಿ ೧, ಮಾಲ್ವೆ ಸಮೀಪದ ಸುಳಗೋಡು ಗ್ರಾಮದಲ್ಲಿ ಒಂದು, ತಲವಾಟ ಪಂಚಾಯತಿಯ ಮಂಜಿನಕಾನಿನಲ್ಲಿ ೫ ಹೀಗೆ ಒಟ್ಟು ೨೦ ಮಂಗಗಳು ಸಾವನ್ನಪ್ಪಿದೆ. ಈ ಪೈಕಿ ಐದಾರು ಮಂಗಗಳ ಅವಶೇಷಗಳನ್ನು ಕೆಎಫ್ಡಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಬಳಿಕ ಉಳಿದ ಮಾಹಿತಿ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಲ್ವೆ ಸುಳಗೋಡು ಗ್ರಾಮದ ವಿಶ್ವನಾಥ್ ಅವರ ತೋಟದಲ್ಲಿ ಬುಧವಾರ ಸಂಜೆ ವೇಳೆ ಮಂಗವೊಂದು ಸತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಗುರುವಾರ ಬೆಳಗ್ಗೆ ಸ್ಥಳಕ್ಕೆ ತಾಲೂಕಿನ ಪುಶು ವೈದ್ಯಕೀಯ, ಆರೋಗ್ಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ತೋಟದಲ್ಲಿ ಸತ್ತು ಬಿದ್ದಿದ್ದ ಮಂಗಕ್ಕೆ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ಸುತ್ತಲಿನ ಗ್ರಾಮದಲ್ಲಿ ಜನಜಾಗೃತಿ ಮೂಡಿಸಿದ್ದಾರೆ.

ಕೆಎಫ್ಡಿ ಪೂರ್ವಭಾವಿ ಸಭೆ ನಡೆಯದಿದ್ದರೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗನಕಾಯಿಲೆ ಕುರಿತು ನಿಗಾ ವಹಿಸಿ ಕ್ರಮ ತೆಗೆದುಕೊಳ್ಳುವಂತೆ ಇಲಾಖಾ ಪ್ರಮುಖರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು.

ಅಕ್ಟೋಬರ್‌ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಇಪಿಎ ಆಯಿಲ್ ಮಾತ್ರ ಸರಬರಾಜಾಗಿದೆ. ನವೆಂಬರ್ ಮಧ್ಯ ಭಾಗದಿಂದೀಚೆಗೆ ಮಂಗಗಳ ಸಾವು ಪ್ರಕರಣ ಗಣನೀಯವಾಗಿ ಏರುಮುಖದಲ್ಲಿದ್ದರೂ ಮಂಗನಕಾಯಿಲೆಯಿಂದ ಬಳಲುತ್ತಿರುವ ತಾಲೂಕಿನ ಪ್ರದೇಶಗಳಲ್ಲೂ ಸಮರ್ಪಕ ಜಾಗೃತಿ ಕಾರ್ಯ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ನವೆಂಬರ್‌ನಲ್ಲಿ ೭ ಮಂಗ ಮೃತಪಟ್ಟಿದ್ದು, ಎರಡರ ಮರಣೋತ್ತರ ಪರೀಕ್ಷೆ ನಡೆಸಿ, ನೆಗೆಟೀವ್ ವರದಿ ಬಂದಿದೆ. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ೧೪೫೭ ಡಿಇಪಿಎ ಆಯಿಲ್‌ನ್ನು ವಿತರಿಸಲಾಗಿದೆ. ತಾಲೂಕಿನಲ್ಲಿ ೧೭ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇದರಲ್ಲಿ ಅರಳಗೋಡು, ಕಾರ್ಗಲ್, ಬಂದಗದ್ದೆ, ತಾಳಗುಪ್ಪ, ತಡಗಳಲೆ, ತ್ಯಾಗರ್ತಿ, ಆವಿನಹಳ್ಳಿಯನ್ನು ಪ್ರಕರಣ ಜಾಸ್ತಿ ಇರುವ ಪಂಚಾಯತಿಗಳು ಎಂದು ಗುರುತಿಸಲಾಗಿದೆ. ಹೀಗಾಗಿ ತಾಲೂಕಿನೆಲ್ಲೆಡೆ ಹೆಚ್ಚಿನ ಡಿಇಪಿಎ ಆಯಿಲ್ ಸರಬರಾಜು ಮಾಡುವುದು, ಜನ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಸಾಗರದಲ್ಲಿ ನವೆಂಬರ್ ತಿಂಗಳಲ್ಲಿ ೧೧೧ ಜನರ ಸ್ಯಾಂಪಲ್ ಕಳುಹಿಸಿದ್ದು, ಯಾವುದೂ ಪಾಸಿಟಿವ್ ಬಂದಿಲ್ಲ. ಸಾಗರದ ಪ್ರತಿ ಆರೋಗ್ಯ ಕೇಂದ್ರದಿಂದ ನಿತ್ಯ ೪-೫ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕಿನ ಯಾರಿಗಾದರೂ ಜ್ವರ, ಸುಸ್ತು, ಗಂಟು ನೋವು ಕಂಡು ಬಂದರೆ ಕೂಡಲೇ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಿಬಿಸಿ ಪರೀಕ್ಷೆ ನಡೆಸಿ, ರಕ್ತಕಣ ಕಡಿಮೆಯಿರುವುದು ಪತ್ತೆಯಾದರೆ ತಕ್ಷಣ ಮಣಿಪಾಲ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ೧೦ ಹಾಸಿಗೆಯನ್ನು ಕೆಎಫ್ಡಿ ಸಂಬಂಧಿತ ರೋಗಿಗಳಿಗೆ ಕಾಯ್ದಿರಿಸಲಾಗಿದೆ ಎನ್ನುತ್ತಾರೆ ಡಾ.ಶ್ರೀನಿವಾಸ್.

ಸದ್ಯ ತಾಲೂಕಿನಲ್ಲಿ ಮಂಗನ ಕಾಯಿಲೆಯ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ದಿನೇ ದಿನೆ ವೃದ್ಧಿಸುತ್ತಿರುವ ಮಂಗಗಳ ಸಾವು ಆತಂಕ ಹುಟ್ಟುಹಾಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ