ಹಾವೇರಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ 80 ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷಾ ವಿಷಯದ ಪರೀಕ್ಷೆಗಳು ಶಾಂತಿಯುತ ಮತ್ತು ಸುಗಮವಾಗಿ ಜರುಗಿದವು.ಕನ್ನಡ, ಆಂಗ್ಲ ಮತ್ತು ಉರ್ದು ಭಾಷಾ ಪರೀಕ್ಷೆಗಳು ನಡೆದವು. ಜಿಲ್ಲೆಯ ಎಂಟು ತಾಲೂಕಿನ 80 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ನಡೆದ ಎಸ್ಎಸ್ಎಲ್ಸಿ ಪ್ರಥಮ ಭಾಷಾ ವಿಷಯದ ಪರೀಕ್ಷೆಗಳಿಗೆ ಒಟ್ಟು 22,009 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 21,741 ವಿದ್ಯಾರ್ಥಿಗಳು ಹಾಜರಾಗಿದ್ದರು. 268 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸವಣೂರು: ಪರೀಕ್ಷೆಯನ್ನು ಹಬ್ಬದಂತೆ ಸಂತೋಷದಿಂದ ಕಂಡಲ್ಲಿ ಒತ್ತಡದಿಂದ ಮುಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ಬಿಇಒ ಎಂ.ಎಫ್. ಬಾರ್ಕಿ ತಿಳಿಸಿದರು.
ಪಟ್ಟಣದ ಕೆಪಿಎಸ್(ಸರ್ಕಾರಿ ಮಜೀದ ಪ್ರೌಢಶಾಲೆ)ಯಲ್ಲಿ ಸ್ಥಾಪಿಸಲಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಮೊದಲ ಕನ್ನಡ ಭಾಷೆ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದರು.ನಿರಂತರ ಕಠಿಣವಾಗಿ ಅಭ್ಯಾಸ ಕೈಗೊಂಡ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಎದುರಿಸುವ ಬದಲಾಗಿ ಮಾನಸಿಕವಾಗಿ ಪರೀಕ್ಷೆ ಎದುರಿಸಲು ಮುಂದಾಗಬೇಕು ಎಂದರು.ಪಟ್ಟಣದ ಕೆಪಿಎಸ್(ಸರ್ಕಾರಿ ಮಜೀದ ಪ್ರೌಢಶಾಲೆ), ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್ಎಫ್ಎಸ್ ಶಾಲೆ, ಹತ್ತಿಮತ್ತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಹೂವಿನಶಿಗ್ಲಿ ಗ್ರಾಮದ ಪ್ರೌಢಶಾಲೆ, ಕುಣಿಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕಡಕೋಳ ಗ್ರಾಮದ ಕೆಜಿಎಲ್ ಪ್ರೌಢಶಾಲೆ ಹಾಗೂ ಕಾರಡಗಿ ಉರ್ದು ಪ್ರೌಢಶಾಲೆ ಸೇರಿ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂದೇಶ ಲಾಡ್ ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಪ್ರಥಮ ಭಾಷೆ(ಕನ್ನಡ) ಪರೀಕ್ಷೆಯನ್ನು 2133 ವಿದ್ಯಾರ್ಥಿಗಳು ಎದುರಿಸಬೇಕಿತ್ತು. ಅದರಲ್ಲಿ 2117 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 16 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.ನಕಲು ತಡೆಯುವ ನಿಟ್ಟಿನಲ್ಲಿ ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳು, ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರ ನೇತೃತ್ವದಲ್ಲಿ ತಾಲೂಕು ಜಾಗೃತ ದಳವು ಸೇರಿದಂತೆ ವಿಶೇಷ ತಂಡದ ಸದಸ್ಯರು ಕಾರ್ಯ ಕೈಗೊಂಡರು.
ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ಎಂ.ಎನ್. ಅಡಿವೆಪ್ಪನವರ, ನೋಡಲ್ ಅಧಿಕಾರಿ ವಿಜೇಂದ್ರಚಾರಿ ಎನ್., ರಮೇಶಗೌಡ ಗುಡಿಸಾಗರ, ಎಸ್ಡಿಎಂಸಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.