ಕವಿವಿ ಸ್ನಾತಕೋತ್ತರ ಕೇಂದ್ರ, ನಾರಿಹಳ್ಳ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ ನಾಯಕವಿ.ಎಂ. ನಾಗಭೂಷಣ
ಕನ್ನಡಪ್ರಭ ವಾರ್ತೆ ಸಂಡೂರುರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜು ಅರಸು ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರ ಹಾಗೂ ನಾರಿಹಳ್ಳ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಇಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ:ಸಂಡೂರಿನ ದಿವಂಗತ ಎಂ.ವೈ. ಘೋರ್ಪಡೆಯವರ ದೂರದೃಷ್ಟಿಯಿಂದಾಗಿ ತಾಲೂಕಿನ ನಂದಿಹಳ್ಳಿಯಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ವಿಸ್ತಾರವಾದ ಜಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಭಾಗವಾಗಿ ಆರಂಭಿಸಲಾದ ಸ್ನಾತಕೋತ್ತರ ಕೇಂದ್ರಕ್ಕೆ ಅಂದಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ. ದೇವರಾಜ ಅರಸು ಜ.೩೧, ೧೯೭೪ರಂದು ಶಂಕು ಸ್ಥಾಪನೆ ನೆರವೇರಿಸಿದ್ದರು.
ನಂತರದಲ್ಲಿ ಈ ಕೇಂದ್ರವು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡು, ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವೀಗ ಸ್ನಾತಕೋತ್ತರ ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ಸರೋವರವಾಗಿ ಪರಿಣಮಿಸಿದೆ.ಪ್ರತಿ ವರ್ಷ ಈ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.
ನಾರಿಹಳ್ಳ ಜಲಾಶಯ:ತಾಲೂಕಿನ ತಾರಾನಗರದ ಬಳಿ ಇರುವ ನಾರಿಹಳ್ಳ ಜಲಾಶಯಕ್ಕೂ ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅ.೨೯, ೧೯೭೨ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ನಾರಿಹಳ್ಳ ಜಲಾಶಯದ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಿನ ಮೈಸೂರು ಸರ್ಕಾರದ ಹಣಕಾಸು ಮಂತ್ರಿಗಳಾಗಿದ್ದ ಎಂ.ವೈ. ಘೋರ್ಪಡೆ ವಹಿಸಿದ್ದರು.
ಈ ಜಲಾಶಯವಿಂದು ಸಂಡೂರು ಹಾಗೂ ದೋಣಿಮಲೈ ಟೌನ್ಶಿಪ್ಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಈ ಜಲಾಶಯದಿಂದಲೇ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಜಲಾಶಯ ತುಂಬಿದಾಗ, ಜಲಾಶಯದ ಕೆಳಭಾಗದ ಕೆಲ ಗ್ರಾಮಗಳ ಜಮೀನುಗಳಿಗೆ ಕೃಷಿಗಾಗಿ ನೀರನ್ನು ಪೂರೈಸಲಾಗುವುದು.ಸುತ್ತಲೂ ಹಸಿರುಟ್ಟ ಗುಡ್ಡಬೆಟ್ಟಗಳ ಮಧ್ಯದಲ್ಲಿ ನಿರ್ಮಿಸಲಾದ ಈ ಜಲಾಶಯವಿಂದು ಪ್ರಮುಖ ಆಕರ್ಷಣೀಯ ತಾಣವಾಗಿದೆ. ಸಮೀಪದ ಭೀಮತೀರ್ಥದ ಬಳಿಯ ಬೆಟ್ಟದ ಮೇಲಿಂದ ಈ ಜಲಾಶಯ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಚಾರಣಿಗರು ಹೆಚ್ಚಿನ ಸಂಖೆಯಲ್ಲಿ ಈ ಭಾಗಕ್ಕೆ ಬರುತ್ತಾರೆ.
ಅರಸು ತಾಲೂಕಿನ ನಂದಿಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಹಾಗೂ ತಾರಾನಗರದ ಬಳಿಯ ನಾರಿಹಳ್ಳ ಜಲಾಶಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಎರಡೂ ಯೋಜನೆಗಳ ಪ್ರಯೋಜನವನ್ನು ಸಂಡೂರಿಗರು ಪಡೆಯುತ್ತಿದ್ದಾರೆ.