ಶಿವನಸಮುದ್ರದ ಗಗನಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ..!

KannadaprabhaNewsNetwork | Updated : Jun 20 2025, 01:15 PM IST

ಹಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ತಾಲೂಕಿನ ಶಿವನಸಮುದ್ರದ (ಬ್ಲಪ್) ಗಗನಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದೆ. 

ಸಿ.ಸಿದ್ದರಾಜು ಮಾದಹಳ್ಳಿ

 ಮಳವಳ್ಳಿ :  ಹಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ತಾಲೂಕಿನ ಶಿವನಸಮುದ್ರದ (ಬ್ಲಪ್) ಗಗನಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ಹಸಿರು ವನದ ಮಧ್ಯೆ ಹಾಲ್ನೊರೆಯಂತೆ ಭೋರ್ಗರೆಯುತ್ತ ಗಗನದಿಂದ ಕೆಳ ಭಾಗಕ್ಕೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಸಿರಿಯಿಂದ ತನ್ನ ಪ್ರಕೃತಿ ವೈಭವವನ್ನು ಮರುಸ್ಥಾಪಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಉತ್ತಮ ಮುಂಗಾರಿನಿಂದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ ಹಾಲ್ನೊರೆಯಂತೆ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುವ ನೀರಿನಿಂದ ಗಗನಚುಕ್ಕಿ ಜಲಪಾತವು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ.

ಪ್ರತಿ ವರ್ಷ ಜುಲೈನಲ್ಲಿ ಗಗನಚುಕ್ಕಿ ಜಲಪಾತಕ್ಕೆ ಹೆಚ್ಚು ನೀರು ಹರಿದು ಬರುತ್ತಿತ್ತು. ಆದರೆ, ಪ್ರಸಕ್ತ ವರ್ಷ ಮುಂಗಾರು ಮೇ - ಜೂನ್ ತಿಂಗಳಲ್ಲೇ ಆರಂಭಗೊಂಡು ಹೆಚ್ಚು ಮಳೆಯಾಗುತ್ತಿರುವುರಿಂದ ಗಗನ ಚುಕ್ಕಿ ಜಲಪಾತಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ.

ಅತ್ತ ಕಬಿನಿ ಜಲಾಶಯ ಭಾಗದಲ್ಲೂ ಉತ್ತಮ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ಭರಚುಕ್ಕಿ ಜಲಪಾತದಲ್ಲೂ ಹೆಚ್ಚಿನ ನೀರು ಬಂದು ಗಗನದಿಂದ ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಗಗನಚುಕ್ಕಿ- ಭರಚುಕ್ಕಿ ಜಲಾಪಾತಗಳ ಪ್ರಕೃತಿಯ ಸೌಂದರ್ಯವನ್ನು ಪ್ರವಾಸಿಗರು ಒಂದು ತಿಂಗಳು ಮುಂಚಿತವಾಗಿಯೇ ಕಣ್ತುಂಬಿಕೊಳ್ಳುವಂತಾಗಿದೆ.

ಅಣೆಕಟ್ಟೆ ಭರ್ತಿಗೆ ಕ್ಷಣಗಣನೆ:

ಕಾವೇರಿ ಜಲನಯನ ಪ್ರದೇಶಗಳಲ್ಲಿ ಮುಂಗಾರು ಚುರುಕುಗೊಂಡು ಕೆಆರ್‌ಎಸ್ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈಗಾಗಾಲೇ ಅಣೆಕಟ್ಟೆ 116 ದಾಟಿದೆ. ಅಣೆಕಟ್ಟೆ ತುಂಬಲು ಇನ್ನು 8 ಅಡಿ ಬಾಕಿ ಇದ್ದು, ಡ್ಯಾಂ ಬಹುಬೇಕ ಭರ್ತಿಯಾದರೆ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುವುದರಿಂದ ಗಗನಚುಕ್ಕಿ ಜಲಪಾತಕ್ಕೆ ಮತ್ತಷ್ಟು ಮೆರಗು ಬರಲಿದೆ.

ಕೊಡಗಿನ ತಲ ಕಾವೇರಿಯಲ್ಲಿ ಹುಟ್ಟುವ ಜೀವನದಿ ಕಾವೇರಿ 320 ಕಿಲೋ ಮೀಟರ್ ಹರಿದು ಕೆಆರ್‌ಎಸ್ ಅಣೆಕಟ್ಟೆಗೆ ಸೇರುತ್ತದೆ. ಕೆಆರ್‌ಎಸ್‌ನಿಂದ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಸತ್ಯಗಾಲದ ಮೂಲಕ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಧುಮುಕಿ ಮುತ್ತತ್ತಿಯನ್ನು ಸುತ್ತಿಕೊಂಡು ಮೇಕೆದಾಟು ಮೂಲಕ ಹೊಗೆನಕಲ್ ತಲುಪಿ ನಂತರ ತಮಿಳುನಾಡುವರೆಗೆ ಸುಮಾರು 416 ಕಿ ಮೀ ವರೆಗೆ ಹರಿದು ಹೋಗಲಿದೆ.

ವೀಕೆಂಡ್ ನಲ್ಲಿ ಪ್ರವಾಸಿಗರ ಹೆಚ್ಚಳ:

ಗಗನಚುಕ್ಕಿ ಜಲಪಾತಕ್ಕೆ ನೊರೆಹಾಲಿನಂತೆ ಸುಮಾರು 300 ಅಡಿಗಳವರೆಗೆ ನೀರು ಧುಮ್ಮಿಕ್ಕುವುದರಿಂದ ನೀರಿನ ಸೌಂದರ್ಯವನ್ನು ನೋಡಲು ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳು, ರಾಜ್ಯ ಹಾಗೂ ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಶನಿವಾರ - ಭಾನುವಾರಗಳಂದು ಪ್ರವಾಸಿಗರ ಸಂಖ್ಯೆ ಇಲ್ಲಿ ಹೆಚ್ಚಾಗಿರುತ್ತದೆ.

ವೀಕ್ಷಣೆಗೆ ಮೆಟ್ಟಿಲುಗಳು ನಿರ್ಮಾಣ:

ಗಗನಚುಕ್ಕಿ ಜಲಪಾತವನ್ನು ಹತ್ತಿರದಿಂದ ಕಾಣ್ತುಂಬಿಕೊಳ್ಳಲು ಕ್ಷೇತ್ರದ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಪ್ರವಾಸಿ ತಾಣಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದ ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ಮೆಟ್ಟಿಲುಗಳ ಮೇಲೆ ನಿಂತು ಅಥವಾ ಕುಳಿತು ಜಲಪಾತವನ್ನು ಸ್ವಚ್ಛಂದವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ರೈತರಲ್ಲಿ ಮೂಡಿದ ಮಂದಹಾಸ:

ಕನ್ನಂಬಾಡಿಯಿಂದ ಯತ್ತಂಬಾಡಿವರೆವಿಗೂ ಕಾವೇರಿ ನೀರು ಎಂಬ ಸಾಮಾನ್ಯ ಮಾತನಾದರೂ ಕೂಡ ನೀರಿನ ಕೊರತೆಯಿಂದಾಗಿ ಕಾವೇರಿ ನೀರು ಮಳವಳ್ಳಿ ತಾಲೂಕಿನ ಕೊನೇ ಭಾಗಕ್ಕೆ ತಲುವುದು ಕಷ್ಟದ ಮಾತಾಗಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ನಿರೀಕ್ಷೆಗೂ ಮೀರಿ ಆಗುತ್ತಿರುವುದರಿಂದ ಹಾಗೂ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕೊನೇ ಭಾಗಕ್ಕೆ ನೀರು ಸಾರಗವಾಗಿ ತಲುಪುವ ಭರವಸೆಯೊಂದಿಗೆ ರೈತರು ಈ ಬಾರಿ ಪೂರ್ಣ ಪ್ರಮಾಣದಲ್ಲಿ ವ್ಯವಸಾಯ ಮಾಡಬಹುದೆಂಬ ಆಶಯವನ್ನು ಹೊಂದಿದ್ದಾರೆ.

ಜಲಪಾತೋತ್ಸವ ಪ್ರಮುಖ ಆಕರ್ಷಣೆ:

ಕೆಆರ್‌ಎಸ್ ಅಣೆಕಟ್ಟೆ ತುಂಬಿದ ನಂತರ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಮೂಲಕ ಪ್ರವಾಸಿ ತಾಣಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಸಹಕಾರಿಯಾಗಿದೆ.

ಈ ಹಿಂದೆಯೂ ಅಣೆಕಟ್ಟೆ ತುಂಬಿದ ನಂತರ ಲಕ್ಷಾಂತರ ಕ್ಯುಸೆಕ್ ಹೆಚ್ಚಿನ ನೀರನ್ನು ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಯಬಿಡಲಾಗಿದೆ. ಈ ವೇಳೆ ಜಲಪಾತದ ಧುಮ್ಮಿಕ್ಕಿ ಹರಿಯುವ ಕಾವೇರಿ ನೀರಿನ ಸೌಂದರ್ಯವನ್ನು ಜನಸಾಮಾನ್ಯರಿಗೆ ಫಸರಿಸಲು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ದೃಷ್ಟಿಯಿಂದ ಸರ್ಕಾರಗಳು ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಜಲಪಾತೋತ್ಸವಗಳನ್ನು ಆಚರಿಸುತ್ತಿವೆ.

 ಈ ಬಾರಿಯೂ ಬಹುಬೇಕ ಜಲಪಾತೋತ್ಸವವನ್ನು ಆಚರಿಸುವ ನಿರೀಕ್ಷೆ ಹೊಂದಲಾಗಿದೆ.ಮಳವಳ್ಳಿ ತಾಲೂಕು ಹಲವು ಪ್ರಸಿದ್ಧ ಪ್ರವಾಸಿ ತಾಣಗಳು, ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇದರಲ್ಲಿ ಗಗನಚುಕ್ಕಿ ಜಲಪಾತವು ಒಂದು. ಕೆಆರ್‌ಎಸ್ ಅಣೆಕಟ್ಟೆ ಈ ವರ್ಷ ಜೂನ್ ತಿಂಗಳಲ್ಲೇ ತುಂಬುವ ನಿರೀಕ್ಷೆ ಇದೆ. ಅದ್ಧೂರಿಯಾಗಿ ಈ ಬಾರಿಯೂ ಜಲಪಾತೋತ್ಸವ ಆಚರಿಸಲು, ಪ್ರವಾಸಿ ತಾಣದಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.

-ಪಿ.ಎಂ.ನರೇಂದ್ರಸ್ವಾಮಿ, ಶಾಸಕರು, ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು

Read more Articles on