ಹುಬ್ಬಳ್ಳಿ: 5 ವರ್ಷದ ಬಾಲಕಿ ಹತ್ಯೆಗೈದ ಆರೋಪಿಯ ಎನ್ಕೌಂಟರ್ ಪ್ರಕರಣವನ್ನು ಸಿಐಡಿಗೆ ನೀಡಿರುವ ಬೆನ್ನಲ್ಲೇ ಇದೀಗ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನೂ ಸಿಐಡಿಗೇ ಹಸ್ತಾಂತರಿಸಲಾಗಿದೆ. ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನಗರಕ್ಕೆ ಆಗಮಿಸಿ ಎರಡು ಪ್ರಕರಣಗಳ ಮಾಹಿತಿ ಪಡೆದರು.
ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಅದರಂತೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಸಿಐಡಿ ತಂಡ ಅಶೋಕನಗರ ಠಾಣೆಯಿಂದ ಪಡೆಯಿತು. ಪ್ರಕರಣದ ತನಿಖೆಯನ್ನು ಪಿಐ ಕಿರಣಕುಮಾರ ತಾವರಗೆರೆ ನಡೆಸುತ್ತಿದ್ದರು.
ಇನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಕಪ್ಪ ಅಗ್ನಿ ಹಾಗೂ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಎನ್ಕೌಂಟರ್ ಪ್ರಕರಣದೊಂದಿಗೆ ಬಾಲಕಿ ಹತ್ಯೆ ಪ್ರಕರಣವನ್ನೂ ಸಿಐಡಿಗೆ ಹಸ್ತಾಂತರಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಎಡಿಜಿಪಿ ಭೇಟಿ: ಈ ನಡುವೆ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ತನಿಖೆಯ ಮಾಹಿತಿ ಪಡೆದರು.
ಘಟನೆ ನಡೆದಿರುವ ವಿಜಯನಗರದ ನಿರ್ಮಾಣ ಹಂತದ ಕಟ್ಟಡಕ್ಕೆ ಭೇಟಿ ನೀಡಿದರು. ಬಳಿಕ ಆರೋಪಿ ರಿತೇಶಕುಮಾರನನ್ನು ಎನ್ಕೌಂಟರ್ ಮಾಡಿದ ಸ್ಥಳಕ್ಕೂ ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ಪ್ರಕರಣಗಳ ಸಂಪೂರ್ಣ ಮಾಹಿತಿ ಪಡೆದರು. ತನಿಖೆ ಕುರಿತಂತೆ ಎಸ್ಪಿ ವೆಂಕಟೇಶಕುಮಾರ ಅವರಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದರು.