ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗಾಂಜಾ ಸೇರಿದಂತೆ ಇತರೆ ದುಶ್ಚಟಗಳಿಂದ ಸಮಾಜವನ್ನು ಹಾಳು ಮಾಡುತ್ತಿರುವವರಿಗೆ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಜಾರಿಯಾಗಬೇಕು ಎಂದು ಪುರಸಭಾ ಸದಸ್ಯ ಎಸ್.ಪ್ರಕಾಶ್ ಒತ್ತಾಯಿಸಿದರು.ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಕುವೆಂಪು ವೃತ್ತದ ಬಳಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಅಲಯನ್ಸ್ ಐಕ್ಯ ಹಾಗೂ ನಿಧಿ ಸಂಸ್ಥೆ ಮತ್ತು ಸ್ತ್ರೀ ರಂಗನಾಯಕಿ ಸಮಾಜದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಮಾತನಾಡಿದರು.
ಗಾಂಜಾ, ಅಫಿಮು ಸೇರಿದಂತೆ ಇತರೆ ದುಶ್ಚಟಗಳಿಗೆ ಯುವಕರು ಬಲಿಯಾಗಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಇಂತವರಿಗೆ ಪೊಲೀಸ್ ಇಲಾಖೆ ಯಾವುದೇ ಕನಿಕರ ತೋರದೆ ಸಾರ್ವಜನಿಕವಾಗಿ ಶಿಕ್ಷೆ ನೀಡುವಂತ ಕಠಿಣ ಕ್ರಮಗಳ ಜಾರಿಯಾಗಬೇಕು. ಜೊತೆಗೆ ಗಾಂಜಾ ಮಾರಾಟ ಮಾಡುವ ಜಾಲವನ್ನು ಬುಡ ಸಮೇತ ಕಿತ್ತು ಹಾಕಬೇಕು. ಆಗ ಮಾತ್ರ ಅತ್ಯಾಚಾರದಂತ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದರು.ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಬೆನ್ನೂರ ಮಾತನಾಡಿ, ಇಲಾಖೆಯಿಂದ ಪ್ರಬಂಧ, ಚಿತ್ರಕಲಾ, ಪತ್ರಚಳವಳಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ತಂಬಾಕು ರಹಿತ ಶ್ರೀರಂಗಪಟ್ಟಣ ತಾಲೂಕುವನ್ನಾಗಿ ಮಾಡಲು ಪಣತೊಡಲಾಗಿದೆ ಎಂದರು.
ಈ ವೇಳೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಸರಸ್ವತಿ, ವಿಜಯ್ಕುಮಾರ್, ಸದಸ್ಯರಾದ ಮಂಜುನಾಥ್, ಮಹೇಶ್, ಗೋಪಾಲ್ಗೌಡ, ರಾಘವೇಂದ್ರ, ನವೀನ್ಕುಮಾರ್, ಗಂಜಾಂ ಮಂಜು, ಡಾ.ಶ್ರೀನಿವಾಸ್, ವಿಶಾಲಾಕ್ಷಿ, ಅನುಪಮ, ಗಾಯಿತ್ರಿ, ಸುವರ್ಣಾದೇವಿ, ಶೀಲಾ ನಂಜುಂಡಯ್ಯ, ಪೊಲೀಸ್ ಇಲಾಖೆ ಗಂಗಾಧರ್ ಸೇರಿದಂತೆ ಐಟಿಐ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ನಂತರ ಕುವೆಂಪು ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಜಾಥಾ ನಡೆಸಿ ಜಾಗೃತಿ ಮೂಡಿಸಿದರು.