ರಿಪ್ಪನ್ಪೇಟೆ; ಇತಿಹಾಸ ಪ್ರಸಿದ್ಧ ಹೊಂಬುಜ ಜಗನ್ಮಾತೆ ಪದ್ಮಾಂಬ ದೇವಿ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ನಡೆಯಿತು.
ಈ ವೇಳೆ ನೆರೆದ ಭಕ್ತ ಸಮೂಹ ಜಯ ಘೋಷಣೆ ಕೂಗಿ ಹಣ್ಣು ಮತ್ತು ಹೂವುಗಳನ್ನು ದೇವಿಯ ರಥದತ್ತ ಮುಗಿಲೆತ್ತರಕ್ಕೆ ಎಸೆಯುತ್ತಾ ತಮ್ಮ ಭಕ್ತಿಯ ಪರಾಕಾಷ್ಠತೆಯನ್ನು ಮೆರೆದರು.
ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಗಜರಾಜನ ಗಾಂಭೀರ್ಯ ನಡಿಗೆಯೊಂದಿಗೆ ಮಠದ ಪಟ್ಟದರಸಿ ಗಜಲಕ್ಷ್ಮಿದೇವಿಯ ರಥದ ಬಳಿ ನಿಂತು ಸ್ವಾಗತ ಕೋರುತ್ತಿದ್ದ ದೃಶ್ಯ ಭಕ್ತರಲ್ಲಿ ಇನ್ನಷ್ಟು ಮೆರಗು ಮೂಡಿಸಿತು. ಬಿಸಿಲ ಬೇಗೆಯನ್ನು ಲಕ್ಕಿಸದೆ ಭಕ್ತರು ದೇವಿಯ ದರ್ಶನಾಶೀರ್ವಾದಕ್ಕಾಗಿ ಕಾದು ನಿಂತಿದ್ದು, ವಿಶೇಷವಾಗಿತು.ಕರ್ನಾಟಕ, ತಮಿಳುನಾಡು ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ದೆಹಲಿ, ಮಧ್ಯಪ್ರದೇಶಗಳಿಂದ ಭಕ್ತರು ಆಗಮಿಸಿ ಶ್ರೀ ಪದ್ಮಾವತಿ ದೇವಿ ರಥಯಾತ್ರೆಯ ಶ್ರೀ ವಿಹಾರದಲ್ಲಿ ಪಾಲ್ಗೊಂಡಿದ್ದರು.
ಹೊಂಬುಜ ಜೈನ ಮಠದಲ್ಲಿ ಸಹ ಭಕ್ತರಿಗೆ ದಾಸೋಹದ ವ್ಯವಸ್ಥೆ ನೆರವೇರಿಲಾಗಿತ್ತು. ಬಿಸಿಲ ಝಳಕ್ಕೆ ಬಸವಳಿದ ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ನೀರು, ಕಬ್ಬಿನ ಹಾಲು, ತಂಪು ಪಾನೀಯ ವ್ಯವಸ್ಥೆಯನ್ನು ವಿವಿಧ ಸಂಘ ಸಂಸ್ಥೆಯವರು ಮಾಡಿದ್ದರು.ಜಗನ್ಮಾತೆ ಪದ್ಮಾವತಿ ದೇವಿಯ ರಥೋತ್ಸವದ ಆಂಗವಾಗಿ ಮೈಸೂರಿನ ಅರಳಿಕಟ್ಟೆ ಕುಟುಂಬದವರು ಮತ್ತು ಸ್ನೇಹಿತ ಬಳಗದವರು ಹಾಗೂ ಮೈಸೂರಿನ ಜೈನ ಸಮಾಜದವರು ಭಕ್ತರಿಗಾಗಿ ಪ್ರತ್ಯೇಕವಾಗಿ ಆನ್ನ ದಾಸೋಹವನ್ನು ನೇರವೇರಿಸಿದರು.