ಹಳಿಯಾಳ: ದೂರದೃಷ್ಟಿಯ ಮಹಾನಾಯಕ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಹಾಗೂ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂರಹಿತರಿಗೆ ಭೂಮಿಯ ಹಕ್ಕನ್ನು ನೀಡಿದ ಮಾಜಿ ಸಿಎಂ ದಿ. ದೇವರಾಜ ಅರಸು ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ತಿಳಿಸಿದರು.ಮಂಗಳವಾರ ಪಟ್ಟಣದ ಬಿಸಿಎಂ ಇಲಾಖೆಯ ದೇವರಾಜ ಅರಸು ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಹಳಿಯಾಳ ಮತ್ತು ದಾಂಡೇಲಿ ಪೌರಸಂಸ್ಥೆಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ದಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಡಾ. ಮೇಟಿ ರುದ್ರೇಶ ಅವರು ಅರಸು ಅವರ ಜೀವನದ ಬಗ್ಗೆ ಉಪನ್ಯಾಸ ನೀಡಿದರು. ಬಿಸಿಎಂ ಅಧಿಕಾರಿ ಸುಜಾತಾ ಖಡತರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರಸ್ತೇದಾರ ಹನುಮಂತ ಪರೋಡಕರ, ಹಳಿಯಾಳ ಪುರಸಭೆಯ ನೂತನ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸದಸ್ಯ ಜಮೀಲ ಅಹ್ಮದ ಶಿವಳ್ಳಿ, ದಾಂಡೇಲಿ ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಖೋಡೆ, ನಗರಸಭಾ ಹಿರಿಯ ಸದಸ್ಯೆ ಯಾಸ್ಮೀನ ಕಿತ್ತೂರ, ಪ್ರೀತಿ ನಾಯಕ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ ಹಾಗೂ ಇತರರು ಇದ್ದರು. ಚಿದಾನಂದ ಕೆ ಅವರು ಕಾರ್ಯಕ್ರಮ ನಿರ್ವಹಿಸಿದರು.