ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ದಿನಬಳಕೆ ವಸ್ತುಗಳು ಬೆಲೆ ಏರಿಕೆ ಮಾಡಿ ದ್ರೋಹ ಬಗೆದಿರುವ ರಾಜ್ಯ ಸರ್ಕಾರ ಯಾವ ಕ್ಷಣದಲ್ಲಿ ಬೀಳುತ್ತದೆ ಎಂದು ನಾಡಿದ ಜನತೆ ಕಾಯುತ್ತಿದ್ದಾರೆ ಎಂದು ಸಂಸದ ಮಲ್ಲೇಶ್ ಬಾಬು ಹೇಳಿದರು. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಶ್ರೀರಾಮ ಸೇನೆಯಿಂದ ೧೦ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದಿನಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ ಎಂದರು.
ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲೇ ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಆವರಿಸಿರುವುದರಿಂದ ರಾಜ್ಯದ ಜನತೆ ರಾಜ್ಯ ಸರ್ಕಾರ ಯಾವಾಗ ಬೀಳುತ್ತದೆ ಎಂದು ಕಾಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ಬೆಲೆ ಏರಿಕೆ ಮಾಡುವ ಮೂಲಕ ಮತ್ತೊಂದು ಕೈಯಲ್ಲಿ ಗಂಡು ಮಕ್ಕಳಿಂದ ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ಬರುತ್ತಿದೆ. ನಿಮಗೆ ಯಾರು ಉತ್ತಮರೋ ಅವರನ್ನು ನೋಡಿ ಮತ ನೀಡಿ, ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿಕೂಟ ಚೆನ್ನಾಗಿ ಗಟ್ಟಿಯಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಕೂಟದಲ್ಲಿ ಯಾವುದೇ ಭೀನ್ನಾಭಿಪ್ರಾಯಗಳಿಲ್ಲ ಈ ಬಗ್ಗೆ ಕುಮಾರಸ್ವಾಮಿಯವರೆ ಸ್ಪಷ್ಟನೆ ನೀಡಿದ್ದಾರೆ. ಮೈತ್ರಿ ಕೂಟ ಚೆನ್ನಾಗಿಲ್ಲ ಎನ್ನುವುದು ಮಾಧ್ಯಮಗಳ ಸೃಷ್ಟಿಯಷ್ಟೆ ಎಂದು ಸ್ಪಷ್ಟನೆ ನೀಡಿದರು.ಸರ್ಕಾರದ ವಿರುದ್ಧ ಪ್ರತಿಭಟನೆ
ವಿದ್ಯುತ್, ಹಾಲು, ನೋಂದಣಿ, ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹೊರೆ ರಾಜ್ಯದ ಜನತೆ ಅನುಭವಿಸುತ್ತಿದ್ದಾರೆ, ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿರುವುದು ಕಡಿಮೆಯಾಗುವ ಸೂಚನೆಗಳಿಲ್ಲ, ಆದರೆ ಇನ್ನಷ್ಟು ಬೆಲೆ ಏರಿಕೆ ಹಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಎಂದು ರಾಜ್ಯ ಸರ್ಕಾರದ ವಿರುದ್ದ ಕಟುವಾಗಿ ಟೀಕಿಸಿದರಲ್ಲದೇ ಇದರ ಪ್ರತಿಭಲವನ್ನು ಮುಂದಿನ ೨೦೨೮ ರ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಎದುರಿಸಲಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಮುಖಂಡ ರಮೇಶ್ರಾಜ್ ಅರಸ್, ನಗರಸಭೆ ಸದಸ್ಯ ವಡಗೂರು ರಾಕೇಶ್, ಮುಖಂಡರಾದ ವಡಗೂರು ರಾಮು, ಬಣಕನಹಳ್ಳಿ ನಟರಾಜ್ ಇದ್ದರು.