ಅರ್ಧಂಬರ್ಧ ಕೆಲಸವಾಗಿ ಲೋಕಾರ್ಪಣೆಗೆ ಕಾದುನಿಂತಿರುವ ಕಟ್ಟಡ । ಪತ್ರಿ ವರ್ಷ ಬಾಡಿಗೆ ಕಟ್ಟಡಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತವಾದ ಗುರುಭವನ ಬೇಕೆಂಬುದು ಅಖಂಡ ಗುರು ವೃಂದದ ಹಲವು ದಶಕಗಳ ಕನಸು. ಇದಕ್ಕಾಗಿ ನಡೆಸಿದ ಹೋರಾಟ, ಮಾಡಿದ ತ್ಯಾಗ, ಕ್ರಮಿಸಿದ ಹಾದಿ, ರೂಪಿಸಿದ ಯೋಜನೆ, ಸಂಗ್ರಹಿಸಿದ ವಂತಿಗೆ, ರಾಜಕಾರಣಿಗಳ ಶ್ರೀರಕ್ಷೆ ಇದ್ದರೂ ಈವರೆಗೂ ಗುರಿ ಮುಟ್ಟಿಲ್ಲ. ಹಂಗಿನ ಅರಮನೆಯಲ್ಲಿ ಶಿಕ್ಷಕರ ದಿನಾಚರಣೆ ಮಾಡುವ ಪರಿಪಾಟಕ್ಕೆ ವಿರಾಮ ಬೀಳದಿರುವುದು ವಿಚಿತ್ರವಾದರೂ ಸತ್ಯ.ಜಿಲ್ಲಾ ಕೇಂದ್ರದಲ್ಲಿ ಗುರುಭವನ ಬೇಕೆಂಬ ಕೂಗಿಗೆ 2 ದಶಕಗಳ ಇತಿಹಾಸವಿದೆ. ಈ ವಿಚಾರದಲ್ಲಿ ಇಂದಿಗೂ ಕೂಡ ಶಿಕ್ಷಕ ವೃಂದ ಹೋರಾಟ ನಡೆಸುತ್ತಲೇ ಬಂದಿದ್ದರೂ ಪ್ರತಿಫಲ ಮಾತ್ರ ಶೂನ್ಯ ಎನ್ನುವಂತಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಅಂದಿನ ಸಚಿವ ಡಾ.ಕೆ.ಸುಧಾಕರ್ ನಗರದ ಹೊರವಲಯ ಜೈನ್ ಆಸ್ಪತ್ರೆ ಸಮೀಪ 2020ರಲ್ಲಿ ಗುರು ಭವನಕ್ಕಾಗಿ ಅರ್ಧ ಎಕರೆ ಭೂಮಿಯನ್ನು ಗುರುತಿಸಿ ಅಂದಾಜು 4.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲು ಭೂಮಿ ಪೂಜೆ ನೆರವೇರಿಸಿ 2022 ರ ಶಿಕ್ಷಕರ ದಿನಾಚರಣೆ ಇಲ್ಲಿಯೇ ಎಂದು ಸಾರಿದ್ದರು. ಆದರೆ ಬದಲಾದ ರಾಜಕೀಯದ ಸುಳಿಗೆ ಸಿಕ್ಕಿ ಆ ಕನಸು ಹುಸಿಯಾಗಿರುವುದು ವಿಪರ್ಯಾಸವೇ ಸರಿ. 5 ವರ್ಷಗಳ ಹಿಂದೆಯೇ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದರೂ ನೆಲಮಹಡಿ ಮಾತ್ರ ಸಿದ್ಧವಾಗಿದ್ದು ಬಿಟ್ಟರೆ ಅರ್ಧಂಬರ್ಧ ಕೆಲಸವಾಗಿ ಲೋಕಾರ್ಪಣೆ ಕನಸಿಗೆ ಎಳ್ಳು ನೀರು ಬಿಟ್ಟಿದೆ.
ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದರೂ ವರ್ಷಕ್ಕೊಮ್ಮೆ ಬರುವ ಶಿಕ್ಷಕರ ದಿನಾಚರಣೆಗೆ ಮಾತ್ರ ಪರಾವಂಭನೆ ತಪ್ಪಿಲ್ಲ. ಸದಾ ಕಾಲಕ್ಕೂ ಬಾಡಿಗೆ ಕಟ್ಟಡಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಲು ಏನು ಕಾರಣ ಎಂಬುದನ್ನು ಶಿಕ್ಷಕ ಸಂಘದ ಪದಾಧಿಕಾರಿಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಲಿಷ್ಟ ಸಂಘಟನೆ ಇದ್ದರೂ, ಭವನ ನಿರ್ಮಾಣಕ್ಕೆ ತನ್ನ ಪಾಲಿನ ವಂತಿಗೆ ನೀಡಿದ್ದರೂ, ಭೂಮಿ ದೊರೆತು ಕಾಮಗಾರಿ ಆರಂಭವಾಗಿದ್ದರೂ ಕಾಲಮಿತಿಯಲ್ಲಿ ಸಿದ್ಧವಾಗಿ ಬಳಕೆಗಿಲ್ಲವಾಗಿದೆ. ಜಿಲ್ಲಾಡಳಿತವೂ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣಿಸುತ್ತಿದೆ. ಶಿಕ್ಷಕ ದಿನದ ಸಂದರ್ಭದಲ್ಲಿಯಾದರೂ ಇದಕ್ಕಿರುವ ಸಂಕಷ್ಟಗಳನ್ನು ದೂರ ಮಾಡಿ ತಾರ್ಕಿಕ ಅಂತ್ಯ ಕಾಣಿಸುದೇ ಎಂಬುದನ್ನು ಕಾದು ನೋಡಬೇಕಿದೆ.
ಕಾಮಗಾರಿಗೆಂದು ತರಲಾಗಿದ್ದ ಕಬ್ಬಿಣ, ಸಿಮೆಂಟ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಚಿಕ್ಕಬಳ್ಳಾಪುರ- ಬೆಂಗಳೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ 12ರಿಂದ 14 ಅಡಿಗೂ ಹೆಚ್ಚು ಆಳದ ಹಳ್ಳದಲ್ಲಿ ನಿರ್ಮಾಣವಾಗುತ್ತಿರುವ ಭವನವನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 3 ಕೋಟಿ ಅಗತ್ಯ ವಿದೆ ಎಂದು ಶಿಕ್ಷಕರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಇದು ಬರುವುದು ಯಾವಾಗ ಪೂರ್ಣ ಗೊಳ್ಳುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.
ಗುರುಭವನ ಕಾಮಗಾರಿ ಬೇಗನೆ ಮುಗಿಸಬೇಕು ಎಂಬ ಆಸೆ ನಮಗೂ ಇದೆ. ಆದರೆ ಅನುದಾನ ಬಿಡುಗಡೆ ಆಗಿಲ್ಲ. ಈವರೆಗೆ ಆಗಿರುವ ಕಾಮಗಾರಗೆ 1.5 ಕೋಟಿ ಅಷ್ಟೇ ನೀಡಿದ್ದಾರೆ. ನಾನು ಕೈಯಿಂದ ಹಣ ಹಾಕಿ ನೆಲಮಹಡಿ ಪೂರ್ಣಗೊಳಿಸಿದ್ದೇನೆ. ಇದರ ಒಟ್ಟು ಯೋಜನಾ ವೆಚ್ಚ 4.5 ಕೋಟ ಆಗಿದ್ದು ಅನುದಾನ ಬಿಡುಗಡೆ ಆದ ಕೂಡಲೇ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರ ಮುನಿಕೃಷ್ಣಪ್ಪ ಹೇಳಿದ್ದಾರೆ.