ಧಾರವಾಡ:
ಸೃಜನಾ ರಂಗಮಂದಿರದಲ್ಲಿ ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಆಯೋಜಿಸಿದ್ದ ಸೃಷ್ಟಿ ಸುರೇಶ ಅವರ ಗಂಡ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತದಲ್ಲಿ ವೇದಾಧ್ಯಯನ ಸೇರಿದಂತೆ ಎಲ್ಲ ಜ್ಞಾನ ಗುರುಕುಲದಲ್ಲಿಯೇ ನಡೆಯುತ್ತಿತ್ತು. ಅಧ್ಯಯನ ಪೂರ್ಣಗೊಳಿಸಿದ ಆನಂತರ ಗುರುಗಳ ಅನುಮತಿ ಪಡೆದು ಅಲ್ಲಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದರು. ಆಗ ಗುರು-ಶಿಷ್ಯರ ಸಂಬಂಧ ತಂದೆ, ಮಕ್ಕಳ ಸಂಬಂಧದಂತಿರುತ್ತಿತ್ತು. ಬದಲಾದ ಸಂದರ್ಭದಲ್ಲಿ ಈ ಸಂಬಂಧಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.
ಪ್ರಸ್ತುತ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಸಿತಾರ ಗುರು ಉಸ್ತಾದ ಶಫೀಕಖಾನ ಅವರು ತಮ್ಮ ಶಿಷ್ಯೆ ಸೃಷ್ಟಿ ಅವರಿಗೆ ಗಂಡ ಕಟ್ಟುವ ಮೂಲಕ ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಇಂಥ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದರು.ನಮ್ಮ ಹಿರಿಯರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಈ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಭವಿಷ್ಯದ ಕಲಾವಿದರ ಮೇಲಿದೆ. ಗುರುಗಳಿಂದ ಪಡೆದ ಜ್ಞಾನವನ್ನು ಸಮಾಜಮುಖಿಯಾಗಿ ಬಳಕೆ ಮಾಡಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಉಸ್ತಾದ ಶಫೀಕಖಾನ ಅವರು ಈ ಕಾರ್ಯಕ್ರಮದ ಮೂಲಕ ಶಿಷ್ಯಳಿಗೆ ವಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಆರಂಭದಲ್ಲಿ ಗಾಯಕಿ ಜಿ. ಸುರಭಿ ಶ್ಯಾಮ ಕಲ್ಯಾಣ ರಾಗ, ವಚನ ಪ್ರಸ್ತುಪಡಿಸಿದರು. ಇದಾದ ಆನಂತರ ನಾಡಿನ ಪ್ರಖ್ಯಾತ ಹಿಂದುಸ್ತಾನಿ ಗಾಯಕ, ಪದ್ಮಶ್ರೀ ಪಂ. ವೆಂಕಟೇಶಕುಮಾರ ಅವರ ಕಂಠಸಿರಿಯಿಂದ ಮೂಡಿಬಂದ ರಾಗ ಕೇದಾರ, ವಚನ ಮತ್ತು ದಾಸರ ಪದ ಸಂಗೀತ ರಸಿಕರಲ್ಲಿ ಧನ್ಯತಾಭಾವ ಮೂಡಿಸಿದವು. ಅವರಿಗೆ ಶ್ರೀಧರ ಮಾಂಡ್ರೆ ತಬಲಾ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.