ಗಿರಿಜಾಶಂಕರ್ ಅಭಿಮತ । ಪತ್ರಿಕಾ ವಿತರಕರ ದಿನಾಚರಣೆ
ಪತ್ರಿಕೆಗಳನ್ನು ಮುದ್ರಿಸುವುದು ಸುಲಭವಾದರೂ ಅವುಗಳನ್ನು ಬೆಳಗಿನ ಜಾವ ಓದುಗರ ಮನೆ ಬಾಗಿಲಿಗೆ ತಲುಪಿಸುವುದು ಅತ್ಯಂತ ಕಷ್ಟದ ಕೆಲಸ. ಅಂತಹ ಮಹತ್ವದ ಕೆಲಸವನ್ನು ಪತ್ರಿಕಾ ವಿತರಕರು ಮಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಗಿರಿಜಾಶಂಕರ್ ಹೇಳಿದರು.
ನಗರದ ಹನುಮಂತಪ್ಪ ವೃತ್ತದಲ್ಲಿ ಶುಕ್ರವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪತ್ರಿಕೆ ವಿತರಕರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೆ ಹಂಚಲು ಯುವಕರು ಸಿಗದಿರುವುದು ದೊಡ್ಡ ಸಮಸ್ಯೆ ಯಾಗಿದೆ. ಹಿಂದೆ ಪತ್ರಿಕೆ ಹಂಚುವ ಕೆಲಸಕ್ಕೆ ಜಾಹೀರಾತು ನೀಡಿದರೆ 30–40 ಯುವಕರು ಬರುತ್ತಿದ್ದರು. ಆದರೆ ಈಗ ಪೋಷಕರು ಮಕ್ಕಳನ್ನು ಪತ್ರಿಕೆ ಹಂಚುವ ಕೆಲಸಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.ಮಕ್ಕಳು ಉತ್ತಮವಾಗಿ ಓದಬೇಕು, ಟ್ಯೂಷನ್ಗೆ ಹೋಗಬೇಕು ಎಂಬ ಕಾರಣಕ್ಕೆ ಪತ್ರಿಕೆ ವಿತರಣೆ ಕೆಲಸದಿಂದ ದೂರ ಉಳಿ ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳಿದ್ದರೂ ಮುದ್ರಿತ ಪತ್ರಿಕೆ ಗಳ ಮಹತ್ವ ಕಡಿಮೆಯಾಗುವುದಿಲ್ಲ. ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ವಿತರಕರ ಸೇವೆ ಅನನ್ಯ ಎಂದು ಹೇಳಿದರು.
ಚಿಕ್ಕಮಗಳೂರು ಪತ್ರಿಕಾ ಏಜೆಂಟರು ಹಾಗೂ ವಿತರಕರ ಸಂಘದ ಅಧ್ಯಕ್ಷ ಶ್ರೀಧರ್ ಮೋಹನ್ ಮಾತನಾಡಿ ಸುಮಾರು 20 ವರ್ಷಗಳ ಹಿಂದೆ ತಾವು ಪ್ರತಿದಿನ 6 ಸಾವಿರಕ್ಕೂ ಹೆಚ್ಚು ಪ್ರತಿಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೆವು. ಆ ಸಂದರ್ಭದಲ್ಲಿ ಪತ್ರಿಕೆಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ಕೇಕ್ ಕತ್ತರಿಸಿ ಪತ್ರಿಕಾ ವಿತರಕರ ದಿನಾಚರಣೆ ಆಚರಿಸಲಾಯಿತು. ಕನ್ನಡಪ್ರಭದ ಎಕ್ಸಿಕ್ಯೂಟಿವ್ಅಣ್ಣಪ್ಪ, ನಗರದ ಪತ್ರಿಕೆ ವಿತರಕರಾದ ಹೇಮಂತ್, ಅಳವಂಡಿ ಹಾಗೂ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.