ಕನ್ನಡಪ್ರಭ ವಾರ್ತೆ ಸರಗೂರುವ್ಯಾಘ್ರನ ಅಟ್ಟಹಾಸಕ್ಕೆ ಮತ್ತೊಬ್ಬನ ರೈತನ ಬಲಿ ಪಡೆದ ಘಟನೆತಾಲೂಕಿನ ಮಟಕೆರೆ ಗ್ರಾಪಂ ವ್ಯಾಪ್ತಿಯ ಕೊಡಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.ಗ್ರಾಮದ ನಿವಾಸಿ ರೈತ ದೊಡ್ಡ ನಿಂಗಯ್ಯ (65) ಹುಲಿ ದಾಳಿಗೆ ಬಲಿಯಾಗಿದ್ದಾರೆ. ಘಟನೆಯಿಂದ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ.ರೈತ ನಿಂಗಯ್ಯ ಕುರುಣೆಗಾಲ ಗ್ರಾಮದ ಪುಟ್ಟಯ್ಯನ ಗೋವಿಂದ ಅವರ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಂಡಿಪುರ ವನ್ಯಜೀವಿ ವಿಭಾಗಕ್ಕೆ ಸೇರಿರುವ ಯಡಿಯಾಲ ವನ್ಯಜೀವಿ ಉಪ ವಲಯದ ಮೊಳೆಯೂರು ವಲಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕುರುಣೆಗಾಲ ಗ್ರಾಮದ ಹೊಲದ ಬಳಿ ಹುಲಿ ಏಕಾಏಕಿ ದೊಡ್ಡನಿಂಗಯ್ಯ ಅವರ ಮೇಲೆ ದಾಳಿ ಮಾಡಿದೆ. ದಾಳಿಯ ರಭಸಕ್ಕೆ ಸ್ಥಳದಲ್ಲೇ ಮೃತ ಪಟ್ಟ ಇವರನ್ನು ಕಾಡಿನ ಒಳಗಡೆ ಎಳೆದುಕೊಂಡು ಹೋಗಿದ್ದು, ಈತನ ಜೊತೆ ಇನ್ನಿಬ್ಬರು ಸಹ ದನ ಮೇಯಿಸುತ್ತಿದ್ದರು, ಹುಲಿಯನ್ನು ಕಂಡ ಓಡಿ ಹೋದ ಅವರು, ಗ್ರಾಮಸ್ಥರಿಗೆ ವಿಷಯ ತಿಳಿಸಿದರು. ಕೊಡಗಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಘಟನೆ ಸ್ಥಳಕ್ಕೆ ತೆರಳಿದರು.ಈ ಘಟನೆಯಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ದೂರಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಗ್ರಾಪಂ ಮಾಜಿ ಸದಸ್ಯ ಬಾಲಾಜಿ ನಾಯಕ ಇವರನ್ನು ಇದೆ ಫಸಲಿನ ಟೈಮಿನಲ್ಲಿ ಹುಲಿಯು ದಾಳಿ ಮಾಡಿತ್ತು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಗ್ರಾಮಸ್ಥರು ಮಾತನಾಡಿ, ನಮಗೆ ಈಗ ಜೀವಭಯ ಶುರುವಾಗಿದೆ. ಪ್ರತಿ ದಿನ ನಾವುಗಳು ನಮ್ಮ ಜಮೀನಿಗೆ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಭಯ ಆಗುತ್ತಿದೆ ಅರಣ್ಯ ಇಲಾಖೆ ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲಲ್ಲ ಎಂದರು.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ. ಮೃತ ರೈತ ದೊಡ್ಡ ನಿಂಗಯ್ಯ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿರುವ ಅಧಿಕಾರಿಗಳು, ಹುಲಿಯನ್ನು ಸೆರೆ ಹಿಡಿಯಲು ತಕ್ಷಣವೇ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಹುಲಿಗಳ ಓಡಾಟ ಹೆಚ್ಚಾಗುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.ವನ್ಯಜೀವಿಗಳ ಸಂರಕ್ಷಣೆ ಜೊತೆಗೆ ಮಾನವ ಜೀವಕ್ಕೆ ಬೆಲೆ ಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ತುರ್ತು ಕ್ರಮಗಳು ಏನಿರಲಿವೆ ಎಂಬುದನ್ನು ಕಾದು ನೋಡಬೇಕಿದೆ.ಈ ಹಿಂದೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಕೂಬಿಂಗ್ ವೇಳೆ ಹುಲಿ ದಾಳಿಯಿಂದ ರೈತ ಮಹದೇವ ಗಂಭೀರವಾಗಿ ಗಾಯಗೊಂಡವರು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮದ ಬೆಣ್ಣೆಗೆರೆ ಗ್ರಾಮದ ರಾಜಶೇಖರ್ ಅವರು ಕಳೆದ ಹತ್ತು ದಿನದ ಹಿಂದೆ ಹುಲಿ ದಾಳಿಗೆ ತ್ತುತ್ತಾಗಿದ್ದು, ಇದು ಮಾಸುವ ಮುನ್ನವೆ ಈ ಘಟನೆ ಜನರಲ್ಲಿ ಅತಂಕವಾಗಿತ್ತು. ಇದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದರು.ಘಟನೆ ನಡೆದ ಸ್ಥಳಕ್ಕೆ ತಕ್ಷಣ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಸಿ.ಎಫ್. ಪ್ರಭಾಕರ್, ಯಡಿಯಾಲ ಉಪ ವಿಭಾಗದ ಎಸಿಎಫ್ ಡಿ. ಪರಮೇಶ, ಮೈಸೂರು ಅರಣ್ಯ ವಿಭಾಗದ ಕೆ. ಪರಮೇಶ್, ತಹಸೀಲ್ದಾರ್ ಮೋಹನ್ ಕುಮಾರಿ ಹಾಗೂ ಸರಗೂರು ಆರಕ್ಷಕ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಆರಕ್ಷಕ ಉಪ ನಿರೀಕ್ಷಕರಾದ ಕಿರಣ್ ಕುಮಾರ್, ಗೋಪಾಲ್, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ವಿಶೇಷ ತುಕಡಿಗಳು ಸ್ಥಳಕ್ಕೆ ಆಗಮಿಸಿದ್ದರು.ರಾಜ್ಯ ಕಲ್ಯಾಣ ರೈತ ಸಂಘದ ಅಧ್ಯಕ್ಷ ಚಂದನ್ ಗೌಡ ಹಾಗೂ ಪದಾಧಿಕಾರಿಗಳು, ಕೋಟೆ ಸರಗೂರು ತಾಲೂಕಿನ ರೈತ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮೈಸೂರಿನ ರೈತ ಮಂಜು ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದರು.ಎಸ್ಟಿಎಫ್ ತಂಡ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಸ್ಥಳದಲ್ಲಿ ಇದನ್ನು ವೀಕ್ಷಿಸಲು ನೂರಾರು ಮಂದಿ ಸೇರಿದ್ದರು. ಮೃತ ರೈತನ ಪತ್ನಿ, ಮಕ್ಕಳ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.