ಸೋರುತಿಹುದು ಇಂದಿರಾ ಕ್ಯಾಂಟೀನ್ ಮಾಳಿಗೆ

KannadaprabhaNewsNetwork |  
Published : Aug 24, 2026, 02:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿಮಳೆ ಬಂದರೆ ನೀರೆಲ್ಲ ಮಾಳಿಗೆಗೆ ನುಗ್ಗುತ್ತದೆ. ಗೋಡೆ,ವಿದ್ಯುತ್ ಸ್ವಿಚ್ ಬಾಕ್ಸ್ ಗಳು, ನೆಲವೆಲ್ಲ ಮಳೆ ನೀರಿನಿಂದ ಒದ್ದೆ ಯಾಗುತ್ತಿದೆ. ಬಾಗಿಲು ಮುರಿದಿದೆ.ಅಡುಗೆ ಕೊಠಡಿಯೊಳಗೆಲ್ಲ ನೀರು. ಉಪಹಾರ ,ಭೋಜನ ಮಾಡುವವರು ತಲೆಯ ಮೇಲೆಯೂ ಮಳೆ ನೀರಿನ ಸಿಂಚನ ಅನುಭವಿಸುವ ದುಸ್ಥಿತಿ.

ಮಳೆಗೆ ಪ್ರತಿ ವರ್ಷ ತಪ್ಪದ ರಗಳೆ । 8 ವರ್ಷಗಳಿಂದ ದುರಸ್ತಿ ಭಾಗ್ಯ ಮರಿಚೀಕೆ । ಗ್ರಾಹಕರು ಉಪಹಾರ ಭೋಜನ ಸೇವಿಸುವ ದುಸ್ಥಿತಿ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಳೆ ಬಂದರೆ ನೀರೆಲ್ಲ ಮಾಳಿಗೆಗೆ ನುಗ್ಗುತ್ತದೆ. ಗೋಡೆ,ವಿದ್ಯುತ್ ಸ್ವಿಚ್ ಬಾಕ್ಸ್ ಗಳು, ನೆಲವೆಲ್ಲ ಮಳೆ ನೀರಿನಿಂದ ಒದ್ದೆ ಯಾಗುತ್ತಿದೆ. ಬಾಗಿಲು ಮುರಿದಿದೆ.ಅಡುಗೆ ಕೊಠಡಿಯೊಳಗೆಲ್ಲ ನೀರು. ಉಪಹಾರ ,ಭೋಜನ ಮಾಡುವವರು ತಲೆಯ ಮೇಲೆಯೂ ಮಳೆ ನೀರಿನ ಸಿಂಚನ ಅನುಭವಿಸುವ ದುಸ್ಥಿತಿ.

ಇದು ಪಟ್ಟಣದ ಜನನಿಬಿಡ ಹೃದಯ ಭಾಗದ ಶಾರದಾ ನಗರದ ಸಂತೇ ಮಾರುಕಟ್ಟೆ ಬಳಿಯಿರುವ ಇಂದಿರಾ ಕ್ಯಾಂಟಿನ್ ಸ್ಥಿತಿ. ಕಟ್ಟಡ ನಿರ್ಮಾಣವಾಗಿ 8 ವರ್ಷಗಳು ಕಳೆಯುತ್ತಾ ಬಂದರೂ ಇನ್ನೂ ಈ ಕಟ್ಟಡ ಮಾತ್ರ ದುರಸ್ತಿ ಕಂಡಿಲ್ಲ. 2018 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿದ್ದರು.

ಪ್ರತಿನಿತ್ಯ ಉಪಹಾರ, ಭೋಜನ ವ್ಯವಸ್ಥೆ ಉತ್ತಮವಾಗಿದೆ. ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರು ಬೆಳಗಿನ ಉಪಹಾರ, ಮಧ್ಯಾಹ್ನ,ರಾತ್ರಿ ಭೋಜನ ಸೇವಿಸಲು ವಿವಿಧೆಡೆಗಳಿಂದ ಬರುತ್ತಾರೆ. ಕುಡಿವ ನೀರಿನ ವ್ಯವಸ್ಥೆಯೂ ಇದೆ. ಆದರೆ ಮಾಳಿಗೆ ಮಾತ್ರ ಸೋರುತ್ತಿದೆ. ಬಾಗಿಲು ಮುರಿದಿದೆ. ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಸತತ 3-4 ತಿಂಗ‍ಳು ಮಳೆ ಸಾಮಾನ್ಯ. ಈ ರೀತಿ ಸತತ ಮಳೆಗೆ ಈ ಮಾಳಿಗೆ ಸೋರಿ ಟೇಬಲ್ ಗಳು, ನೆಲ, ಸ್ಲಾಬ್ ಒಳಭಾಗ, ಗೋಡೆಗಳು, ಅಡುಗೆ ಕೋಣೆ ಎಲ್ಲೆಡೆ ನೀರು ನಿಲ್ಲುತ್ತಿದೆ. ಇದರಿಂದ ಗ್ರಾಹಕರಿಗೆ ಕಷ್ಟವಾಗುತ್ತಿದೆ. ಈ ನಡುವೆಯೇ ಸಿಬ್ಬಂದಿ ಅಡುಗೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ.

ಬಾಗಿಲು ಸಹ ಮುರಿದು ರಟ್ಟು,ಗಮ್ ಟೇಪ್ ಅಂಟಿಸಲಾಗಿದೆ. ಕಳೆದ 8 ವರ್ಷಗಳಿಂದ ಮಳೆ ಕಳೆದು ಬೇಸಿಗೆ, ಬೇಸಿಗೆ ಕಳೆದು ಮಳೆ ಬಂದು ಹೋಗುತ್ತಿದ್ದರೂ ಈ ಮಾಳಿಗೆಗೆ ಮಾತ್ರ ದುರಸ್ತಿ ಭಾಗ್ಯವಿಲ್ಲ. ಮಲೆನಾಡಿನಲ್ಲಿ ಮಳೆ ಹೆಚ್ಚು 5 ವರ್ಷಕ್ಕೊಮ್ಮೆಯಾದರೂ ದುರಸ್ತಿ ಮಾಡಬೇಕು. ಆದರೆ 8 ವರ್ಷವಾದರೂ ಸುಣ್ಣ ಬಣ್ಣ, ಮೂಲ ಸೌಕರ್ಯ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಇನ್ನು ಕಟ್ಟಡದ ಸುತ್ತಮುತ್ತಲೂ ಸ್ವಚ್ಛತೆ ಕೊರತೆಯಿದೆ. ಸಮೀಪವೇ ಸಂತೆ ಮಾರುಕಟ್ಟೆಯಿರುವುದರಿಂದ ಸುತ್ತಮುತ್ತಲು ಸ್ವಚ್ಛತೆ ಇಲ್ಲದೇ ಇಡೀ ಪರಿಸರ ಮಲೀನವಾಗುತ್ತಿದೆ. ರಸ್ತೆ ಹಾಳಾಗಿದ್ದು, 2 ಕಡೆಗಳಲ್ಲಿ ಚರಂಡಿಯಿಲ್ಲದೇ, ಮಳೆ ನೀರೆಲ್ಲ ರಸ್ತೆ ಮೇಲೆಯೇ ಹರಿಯುತ್ತಿದೆ. ರಸ್ತೆಯೇ ಕಾಲುವೆ ಮಯವಾಗಿದೆ. ಮಳೆ ನಿಂತಾಗ ರಸ್ತೆಯಲ್ಲಿ ನೀರು ಹರಿಯುವುದು ನಿಂತರೂ ಕೆಸರುಮಯವಾಗುತ್ತಿದೆ. ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಹಾಗಾಗಿ ಕ್ಯಾಂಟೀನ್ ನಲ್ಲಿ ಉತ್ತಮ ಉಪಹಾರ, ಬೋಜನಾ ವ್ಯವಸ್ಥೆಯಿದ್ದರೂ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ,ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸೋರುತ್ತಿರುವ ಇಂದಿರಾ ಕ್ಯಾಂಟೀನ್ ಮಾಳಿಗೆ ಸಮಸ್ಯೆ ಸರಿಪಡಿಸಿ, ಕಟ್ಟಡಕ್ಕೆ ದುರಸ್ತಿಗೆ ಕ್ರಮ ವಹಿಸಬೇಕಿದೆ.

-- ಕೋಟ್‌--

ಈ ಕಟ್ಟಡ ನಿರ್ಮಾಣ ಅವೈಜ್ಞಾನಿಕ. ಮಲೆನಾಡಿನಲ್ಲಿ ಕನಿಷ್ಠ ಐದು ವರ್ಷಕ್ಕೆ ಒಮ್ಮೆಯಾದರೂ ದುರಸ್ತಿ ಮಾಡಬೇಕು. ಕೇವಲ ಊಟ,ಉಪಹಾರ ನೀಡಿದರೆ ಸಾಲದು, ವ್ಯವಸ್ಥೆಯೂ ಸರಿಯಿರಬೇಕು. ಕಟ್ಟಡದ ಸುತ್ತ, ಪರಿಸರ ಶುಚಿತ್ವ ಕಾಪಾಡ ಬೇಕು.ಇಲ್ಲಿ ನಿರ್ವಹಣೆ ಸರಿಯಿಲ್ಲ. ನಿರ್ಲಕ್ಷ್ಯ ಬಿಟ್ಟು ಅವ್ಯವಸ್ಥೆ ಸರಿಪಡಿಸಿ

- ಬಿ.ಶಿವಶಂಕರ್. ಜಿಪಂ ಮಾಜಿ ಸದಸ್ಯ

--

-- ಕೋಟ್‌--

ಊಟ, ಉಪಹಾರ ಸೇವಿಸಲು ಹೋಗುವ ಗ್ರಾಹಕರು ಮಾಳಿಗೆ ಅವ್ಯವಸ್ಥೆ ಕಂಡು ಇಂದಿರಾ ಕ್ಯಾಂಟೀನ್‌ ಸಹವಾಸವೇ ಬೇಡ ಎನ್ನುತ್ತಿದ್ದಾರೆ. 8 ವರ್ಷಗಳಾದರೂ ದುರಸ್ತಿ ಮಾಡದಿರುವುದು ನಿರ್ಲಕ್ಷವೇ ಸರಿ. ಇನ್ನಾದರೂ ಅಗತ್ಯ ಕ್ರಮ ಕೈಗೊಳ್ಳಬೇಕು.

- ಕೃಷ್ಣ ಸಾಲ್ಮರ , ಶೃಂಗೇರಿ

20 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ .

20 ಶ್ರೀ ಚಿತ್ರ 2,3--

ಮಾಳಿಗೆ ಯೊಳಗೆ ಸೋರಿಕೆಯಿಂದ ಗೋಡೆ,ಛಾವಣಿ ಸ್ಲಾಭ್

29 ಶ್ರೀ ಚಿತ್ರ 4-

ಬಿ.ಶಿವಶಂಕರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣಜಿಗ ಸಮಾಜ ಸ್ವಾವಲಂಬನೆಯಿಂದ ಸಂಘಟಿತವಾಗಬೇಕು
ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಗಡಿಪಾರು ಮಾಡಿ