ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕೇಂದ್ರದ ವರಿಷ್ಠರು ಉಚ್ಚಾಟನೆ ಮಾಡಿದ್ದು, ಇದರಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಪಾತ್ರವೇನೂ ಇಲ್ಲ. ಆದರೆ, ಕೆಲವರು ದುರುದ್ದೇಶದಿಂದ ನಡಹಳ್ಳಿಯವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ್ದು, ಖಂಡನೀಯ. ಇದೇ ರೀತಿ ಹೋರಾಟ ಮುಂದುವರಿದರೆ ನಡಹಳ್ಳಿ ಅಭಿಮಾನಿ ಬಳಗದಿಂದ ದಾರಿ ದಾರಿಯಲ್ಲಿ ನಿಮ್ಮನ್ನು ನಿಲ್ಲಿಸಿ ಚಪ್ಪಲಿ ಹಾರ ಹಾಕಬೇಕಾಗುತ್ತದೆ ಎಂದು ಮುಖಂಡ ಸೋಮನಗೌಡ ಮೇಟಿ ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಅವರ ಉಚ್ಚಾಟನೆ ನಿಮಗಲ್ಲ, ನಮಗೂ ನೋವಿದೆ. ಹಾಗಂತ ಯಾರದೋ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ. ಯತ್ನಾಳ ಪರವಾಗಿ ಹೋರಾಟ ಮಾಡುವವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮೀತ್ ಶಾ ಅವರಿಗೆ ಭೇಟಿಯಾಗಿ ಯತ್ನಾಳರನ್ನು ಪಕ್ಷಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಿ ಎಂದು ಒತ್ತಾಯಿಸಲಿ. ಅದು ಬಿಟ್ಟು ಸಂಬಂಧವಿಲ್ಲದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಯಡಿಯೂರಪ್ಪನವರ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಾಕಿ ಸುಟ್ಟು ಚಪ್ಪಲಿ ಸೇವೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನಡಹಳ್ಳಿಯವರು ಮತಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ನೀವು ಯಾರಿಗಾದರೂ ಸಹಾಯ ಮಾಡಿದ್ದೀರಿ ಪಾಪ ಕರ್ಮಗಳನ್ನು, ಒಳ್ಳೆಯ ಕೆಲಸ ಮಾಡಿದ್ದೀರಾ ಎಂಬುದನ್ನು ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವು ಮಾಡುವ ತಪ್ಪುಗಳನ್ನು ಸಹಿಸಿಕೊಂಡು ನಡಹಳ್ಳಿಯವರಿಗೆ ಅವಮಾನಿಸುವುದನ್ನು ನೋಡಿ ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಯಕ್ಕೆ ತಕ್ಕಂತೆ ತಕ್ಕ ಉತ್ತರ ಕೊಡಲು ನಡಹಳ್ಳಿ ಅಭಿಮಾನಿಗಳು ಸದಾ ಸಿದ್ದರಾಗಿದ್ದೇವೆ. ಈ ನಿಟ್ಟಿನಲ್ಲಿ ಗುರುವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಯಡಿಯೂರಪ್ಪ, ವಿಜಯೇಂದ್ರ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಮುಖಂಡರಾದ ಸೋಮನಗೌಡ ಬಿರಾದಾರ, ಗುರುನಾಥಗೌಡ ಬಿರಾದಾರ ಅವರು ಮಾತನಾಡಿದರು. ಈ ವೇಳೆ ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಎಂ.ಎಸ್.ಬಿರಾದಾರ, ಮುಖಂಡರಾದ ಮಲ್ಲಯ್ಯಮುತ್ಯಾ ಬಿರಾದಾರ(ಚೊಂಡಿ), ಮಡಿವಾಳಪ್ಪಗೌಡ ಮುದ್ನೂರ, ಗಿರೀಶಗೌಡ ಪಾಟೀಲ, ಶ್ರೀಕಾಂತ ಹಿರೇಮಠ, ಹಣಮಂತ ದೇವರಳ್ಳಿ, ರೇಖಾ ಕೊಂಡಗೂಳಿ, ಜಿ.ಬಿ.ಬಿರಾದಾರ, ಬಿ.ಆರ್.ಪಾಟೀಲ ಕಾಶಿನಾಥಗೌಡ ಕೊಣ್ಣೂರ, ಸಂಜು ಬಾಗೇವಾಡಿ, ಗೌರಮ್ಮ ಹುನಗುಂದ ಸೇರಿದಂತೆ ಹಲವರು ಇದ್ದರು.