ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಾಯೋರು ಹೆಚ್ಚಾಗಿದ್ರೂ, ಸದ್ಯಕ್ಕೆ ಖಾಲಿ ಇಲ್ಲ
ಪರಿಶಿಷ್ಟರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆಯೆಂದರೆ ಯಾರು ಬೇಡ ಎನ್ನುತ್ತಾರೆ? ಪರಿಶಿಷ್ಟರು ಮುಖ್ಯಮಂತ್ರಿ ಆಗಬೇಕೆಂದು ಕಾಯುತ್ತಿರುವವರು ಕಾಂಗ್ರೆಸ್ನಲ್ಲಿ ಹೆಚ್ಚಾಗಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಪರಿಶಿಷ್ಟರ ಸಿಎಂ ಮಾಡುತ್ತಾರೆಂದರೆ ಬೇಡ ಎಂಬುದಾಗಿ ಯಾರು ಹೇಳುತ್ತಾರೆ ಎಂದು ಪ್ರಶ್ನಿಸಿದರು.ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹಾಗಾಗಿ ಪರಿಶಿಷ್ಟರಿಗೆ ಮುಖ್ಯಮಂತ್ರಿ ಹುದ್ದೆ ವಿಚಾರ ಅಪ್ರಸ್ತುತ. ಈಗ ಡಿಸಿಎಂ ಹುದ್ದೆಗಳು ಮಾತ್ರ ಖಾಲಿ ಇದ್ದು, ಯಾರು ಬೇಕಾದರೂ ಉಪ ಮುಖ್ಯಮಂತ್ರಿ ಆಗಬಹುದು. ಸಿಎಂ ಹುದ್ದೆ ಖಾಲಿಯಾದ ಮೇಲೆ ಪರಿಶಿಷ್ಟರ ಮಾಡಬೇಕಾ, ಅಲ್ಪಸಂಖ್ಯಾತರ ಮಾಡಬೇಕಾ, ಹಿಂದುಳಿದವರಿಗೆ ಸಿಎಂ ಮಾಡಿ ಅವಕಾಶ ನೀಡಬೇಕಾ ಎಂಬ ತೀರ್ಮಾನವಾಗುತ್ತದೆ ಎಂದು ಹೇಳಿದರು.
ಸ್ವಾರ್ಥಕ್ಕೋಸ್ಕರ ಜೆಡಿಎಸ್ನವರು ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ಸೇರಲಿ ತಪ್ಪೇನೂ ಇಲ್ಲ. ಆದರೆ, ರಾಜ್ಯದ ಮತದಾರರು ಬುದ್ಧಿವಂತರು. ಯಾರಿಗೆ ಏನು ಮಾಡಬೇಕೆಂಬುದು ಮತದಾರರಿಗೂ ಗೊತ್ತಿದೆ. ಅದನ್ನೇ ಜನರು ಸಮಯ, ಸಂದರ್ಭ ಬಂದಾಗ ತೀರ್ಮಾನ ಮಾಡುತ್ತಾರೆ. ಬಿಜೆಪಿ-ಜೆಡಿಎಸ್ನವರು ಎಲ್ಲಾ 28 ಕ್ಷೇತ್ರದಲ್ಲೂ ಸ್ಪರ್ಧಿಸುತ್ತಾರೆ. ನಾವೂ ಎಲ್ಲಾ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳ ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ನ ಎಲ್ಲಾ 28 ಅಭ್ಯರ್ಥಿಗಳು ಗೆಲ್ಲಬೇಕೆಂಬುದು ನಮ್ಮ ಅಭಿಲಾಷೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಡಿಸಿಎಂ ಹುದ್ದೆಗಳನ್ನು ಎಲ್ಲಾ ಸಮುದಾಯಗಳಿಗೆ ನೀಡಿದರೆ, ಆ ಸಮುದಾಯದ ಮತಗಳೂ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿ ಸಿಗುತ್ತದೆ. ಈ ಬಗ್ಗೆ ಎಲ್ಲರಲ್ಲೂ ದೃಢವಾದ ಅಭಿಪ್ರಾಯವೂ ಇದೆ. ಇದೇ ವಿಚಾರವನ್ನು ಜ.11ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂದಿಡುತ್ತೇವೆ. ಅಂತಿಮ ನಿರ್ಣಯ ಪಕ್ಷದ ಹೈಕಮಾಂಡ್ ಕೈಗೊಳ್ಳುತ್ತದೆ. ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಜೊತೆ ಸಭೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗಳು, ಗ್ಯಾರಂಟಿಗಳ ಬಗ್ಗೆಯೂ ಚರ್ಚಿಸಿದ್ದೇವೆ. ಆಗಿರುವ ಲೋಪ ಸರಿಪಡಿಸಿಕೊಳ್ಳಲು, ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿ, ಕಣಕ್ಕಿಳಿಸಬೇಕೆಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಅದು ಜನತಾದಳ ಸೆಕ್ಯುಲರ್ ಪಕ್ಷ. ಜಾತ್ಯತೀತ ಅನ್ನುವ ಪದಕ್ಕೆ ಇನ್ನು ನಾವು ಬೇರೆ ಅರ್ಥೈಸಬೇಕಾಗಿದೆ.