ಬೇಲೂರು: ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ರೈತನ ಮನೆಗೆ ಶಾಸಕ ಎಚ್ ಕೆ ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿ ನಂತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ರೈತನ ಮನೆಗೆ ಶಾಸಕ ಎಚ್ ಕೆ ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಮಾತನಾಡಿ, ಆನೆ ದಾಳಿಗೆ ಸಾವಿಗೀಡಾದ ರೈತ ಮೂರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಪದೇ ಪದೆ ಕಣ್ಣೆದುರೆ ಆನೆಯ ದಾಳಿಗೆ ಸಾವಿಗೀಡಾಗುತ್ತಿರುವುದು ನಿಜಕ್ಕೂ ಬೇಸರ. ಈಗಾಗಲೇ ತಾವು ಸದನದಲ್ಲಿ ಈ ಬಗ್ಗೆ ಮಧ್ಯರಾತ್ರಿಯಲ್ಲೂ ಚರ್ಚೆ ನಡೆಸಿದ್ದೇನೆ. ಅರಣ್ಯ ಸಚಿವರನ್ನು ಅರೇಹಳ್ಳಿಗೆ ಕರೆಸಿ ಸಮಾಲೋಚನೆ ಮಾಡಿದ್ದೇನೆ. ಅರಣ್ಯ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ಸೂಚನೆ ನೀಡಿದ್ದೇನೆ. ಡಿಸಿಯವರಿಗೆ ಬೆಳಗಾರರ ಸಮಸ್ಯೆ ಕಾಡಾನೆ ಹಾವಳಿ ಬಗ್ಗೆ ಸಮರ್ಪಕವಾಗಿ ವಿವರಿಸಿದ್ದೇನೆ. ನಿಮ್ಮೆಲ್ಲರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುವ ಶಾಸಕ ಎಂದು ಕರೆಸಿಕೊಂಡಿದ್ದೇನೆ. ಇಷ್ಟಾದರೂ ಮತ್ತೆ ಆನೆ ದಾಳಿ ಮುಂದುವರಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಕೂಡಲೇ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಅಮಾಯಕ ಕೂಲಿ ಕಾರ್ಮಿಕರ ಬಾಳು ಹಾಳಾಗುತ್ತದೆ ಎಂದರು.ಸಿಸಿಎಫ್ ಏಡುಕುಂಡಲು ಮಾತನಾಡಿ ನಾಳೆಯಿಂದಲೇ ಕಾಡಾನೆ ಹಿಡಿಯುವ ಕಾರ್ಯಾಚರಣೆ ಶುರು ಮಾಡಲಾಗುವುದು. ನಮ್ಮಲ್ಲಿ ಎರಡು ಡ್ರೋನ್ ಕ್ಯಾಮೆರಾ ಇದ್ದು ಎರಡು ದಿನಗಳಲ್ಲಿ ಇನ್ನೂ ಮೂರು ಬರಲಿದೆ. ಈಗಾಗಲೇ ಆನೆಧಾಮ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿ ಸಲಾಗಿದೆ. ಇನ್ನು ಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ, ಡಿಎಫ್ಒ ಸೌರಭ್ ಕುಮಾರ್, ಎಸಿಎಫ್ ಮೋಹನ್ ಕುಮಾರ್, ಇಟಿಎಫ್ ಉಮಾಪತಿ, ಆರ್ಎಫ್ ಒ ಯತೀಶ್ ಕುಮಾರ್ ಇತರರು ಹಾಜರಿದ್ದರು.