ಕನ್ನಡಪ್ರಭ ವಾರ್ತೆ ತುಮಕೂರುಸಾರ್ವಜನಿಕ ಬದುಕಿನಲ್ಲಿ ಮಹಿಳೆಯರಿಗೆ ಎಲ್ಲ ರಂಗದಲ್ಲೂ ಅವಕಾಶಗಳ ಬಾಗಿಲು ತೆರೆದಿದ್ದರೂ, ಇಂದಿಗೂ ಕನ್ನಡ ಪತ್ರಿಕೋದ್ಯಮದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.೨೦ ರಷ್ಟನ್ನು ದಾಟದಿರುವುದು ವಿಷಾದನೀಯ ಎಂದು ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಬೇಸರ ವ್ಯಕ್ತಪಡಿಸಿದರು.ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ‘ಮಾಧ್ಯಮ ಮತ್ತು ಮಹಿಳೆ: ಅಂದು-ಇಂದು’ ಕುರಿತು ವಿಶೇಷ ಉಪನ್ಯಾಸ ನೀಡಿದರು.60 ರ ದಶಕದಲ್ಲಿ ‘ಪತ್ರಿಕೆಗಳಲ್ಲಿ ಮಹಿಳೆಯರಿಗೆ ಕೆಲಸ ನೀಡಲಾಗುವುದಿಲ್ಲ’ ಎನ್ನುವ ಮನಸ್ಥಿತಿಯಿತ್ತು. 1964 ರ ಭಾರತ-ಪಾಕಿಸ್ತಾನ ಯುದ್ಧದ ಪ್ರತ್ಯಕ್ಷ ವರದಿಯನ್ನು ಪತ್ರಕರ್ತೆ ಪ್ರಭಾದತ್ ಪರಿಣಾಮಕಾರಿಯಾಗಿ ಮಾಡಿ, ಮಹಿಳಾ ಸಾಮರ್ಥ್ಯವನ್ನು ನಿರೂಪಿಸಿದರು.70 ರ ದಶಕದ ನಂತರ ಮಹಿಳೆಯರಿಗೆ ಪತ್ರಕರ್ತೆಯರಾಗಿ ಕಾರ್ಯನಿರ್ವಹಿಸುವ ಅವಕಾಶ ದೊರಕಿತು ಎಂದು ತಿಳಿಸಿದರು.ಸಮಯ ನಿಬಂಧನೆಗಳಿಗೆ ಅಂಟಿಕೊಳ್ಳದೆ ಹಲವಾರು ಮಂದಿ ಮಹಿಳೆಯರು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ, ಡೆಸ್ಕ್ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ಮಾಡಿದ, ಸುದ್ದಿ ಮನೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮೊದಲಿಗರಿದ್ದಾರೆ. ರಾಜಕೀಯ, ಅಪರಾಧ, ಯುದ್ಧ ವರದಿಗಳನ್ನು ಸಮರ್ಥವಾಗಿ ಮಾಡಿದ್ದಾರೆ ಎಂದು ತಿಳಿಸಿದರು.ಸಾಮಾಜಿಕ ಜಾಲತಾಣದ ಮಾಹಿತಿಗಳನ್ನು ನಿರ್ಣಾಯಕ ಸುದ್ದಿಗಳಾಗಿ ಇಂದಿನ ವಾಹಿನಿಗಳು ಬಿತ್ತರಿಸುತ್ತಿವೆ. ವಾಹಿನಿಗಳು ಪಕ್ಷ ರಹಿತವಾಗಿ ಕಾರ್ಯನಿರ್ವಹಿಸಬೇಕು. ರಾಜಕೀಯ ಪಕ್ಷಗಳಿಗೆ ಮುಖ್ಯವಾಹಿನಿ ಆಗಬಾರದು. ಲೈಂಗಿಕ ಭಾಷೆ, ಉದ್ರಿಕ್ತ ಭಾಷೆ ಬಳಸದೆ ವರದಿ ತಯಾರಿಸಬೇಕು. ನೈತಿಕ ನಿಲುವುಗಳನ್ನು ಪತ್ರಕರ್ತರೆ ತೆಗೆದುಕೊಳ್ಳಬಾರದು ಎಂದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮಾತಿನಲ್ಲಿ ಮಹಿಳಾ ಪ್ರಾಧಾನ್ಯತೆ ಎನ್ನುತ್ತೀವಿ. ಕೃತಿ ರೂಪದಲ್ಲಿ ವಾಸ್ತವಕ್ಕೆ ತರಲು ಸಂಕುಚಿತರಾಗಿದ್ದೀವಿ. ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಲ್ಲಿ ಸತ್ಯವಿರಬೇಕು. ಮುದ್ರಣ ಮಾಧ್ಯಮಗಳು ವೈಯಕ್ತಿಕವಾಗಿ ಗುರುತಿಸಿಕೊಂಡು ಜನಮಾನಸದಲ್ಲಿ ನೆಲಸಿವೆ ಎಂದರು.
ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ವಿವಿಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕುಲಸಚಿವೆ ನಾಹಿದಾ ಜಮ್ಜಮ್, ಪ್ರಗತಿ ಟಿ.ವಿ.ಯ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಶಿಲ್ಪ ಸಂಜಯ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ರೋಟರಿ ಸಂಸ್ಥೆಯ ಅಧ್ಯಕ್ಷೆ ರೊ.ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ರೊ.ನಾಗಮಣಿ ಎಸ್.ಜಿ., ರೋಟರಿ ಟ್ರಸ್ಟ್ಅಧ್ಯಕ್ಷ ಡಾ.ಎಸ್. ಎಲ್.ಶಿವಶಂಕರ ಕಾಡದೇವರಮಠ್, ಕ್ಲಬ್ ಸರ್ವೀಸ್ ನಿರ್ದೇಶಕ ಲಕ್ಕಪ್ಪ ಉಪಸ್ಥಿತರಿದ್ದರು.