ಉಡುಪಿ; ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಗೆ ಸಾರ್ಥಕ 25 ವರ್ಷಗಳ ಹಾಗೂ 76ನೇ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯುವ ಸೇವಾ ಸಂಕಲ್ಪ ಅಭಿಯಾನದಡಿ ಆಶೀರ್ವಾದದ ದೀಪ ಕಾರ್ಯಕ್ರಮವು ಇಲ್ಲಿನ ಪಂದುಬೆಟ್ಟು ನಿವಾಸಿ, ಆಯುಷ್ಮಾನ್ ಭಾರತ್ ಫಲಾನುಭವಿ ತೇಜಾವತಿ ಅವರ ನಿವಾಸದಲ್ಲಿ ನಡೆಯಿತು. ತೇಜಾವತಿ ಅವರು, ತಾನು ಕಳೆದ ಸುಮಾರು 23 ವರ್ಷಗಳಿಂದ ಆಮ ವಾತ ದಿಂದ ನಡೆಯಲಾಗದ ಸ್ಥಿತಿಯಲ್ಲಿದ್ದಾಗ ತನಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 3.50 ಲಕ್ಷ ರು. ನೆರವಿನಿಂದ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಈಗ ನಡೆದಾಡಲು ಹಾಗೂ ನಿತ್ಯಕರ್ಮ ನಿರ್ವಹಿಸಲು ಶಕ್ತಳಾಗಿದ್ದೇನೆ. ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ತನ್ನ ಬದುಕಿಗೆ ಆಶಾಕಿರಣವಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವಂತನು ದೀರ್ಘಾಯುಷ್ಯ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಆಶೀರ್ವಾದದ ದೀಪವನ್ನು ಬೆಳಗಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಸದಾ ಜನಹಿತವನ್ನು ಬಯಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ ಜನಪರ ಯೋಜನೆಗಳ ಲಕ್ಷಾಂತರ ಫಲಾನುಭವಿಗಳು ಜಿಲ್ಲೆಯಾದ್ಯಂತ ತಮ್ಮ ಮನೆಗಳಲ್ಲಿ ಆಶೀರ್ವಾದದ ದೀಪವನ್ನು ಬೆಳಗಿಸುವ ಮೂಲಕ ಮೋದಿ ಅವರಿಗಾಗಿ ಪ್ರಾರ್ಥಿಸಿದ್ದಾರೆ. ಈ ಪ್ರಾರ್ಥನೆ ದೇಶವನ್ನು ವಿಕಸಿತ ಭಾರತ, ವಿಶ್ವಗುರು ಭಾರತವಾಗಿ ಮುನ್ನಡೆಸಲು ಮೋದಿ ಅವರಿಗೆ ಸ್ಪೂರ್ತಿಯಾಗಲಿದೆ ಎಂದರು. ಮೋದಿ ಹುಟ್ಟುಹಬ್ಬದ ಪ್ರಯುಕ್ತ ಸ್ಥಳೀಯ ಕೃಷಿಕರಾದ ಕಮಲ ಪೂಜಾರ್ತಿ, ಕೃಷ್ಣಪ್ಪ ಬೆಲ್ಚಡ ಮತ್ತು ಸಿಆರ್ಪಿಎಫ್ ತರಬೇತಿ ಸೈನ್ಯಕ್ಕೆ ಸೇರಲಿರುವ ಕೃಷ್ಣ ಪಂದುಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಅಭಿಯಾನದ ಜಿಲ್ಲಾ ಸಹಸಂಚಾಲಕ ಉಮೇಶ್ ಎ. ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಯಶ್ಪಾಲ್ ಎ. ಸುವರ್ಣ, ಆಶೀರ್ವಾದ ದೀಪ ಕಾರ್ಯಕ್ರಮದ ಜಿಲ್ಲಾ ಪ್ರಮುಖ್ ರೇಷ್ಮಾ ಉದಯ ಶೆಟ್ಟಿ, ಪಕ್ಷದ ಪ್ರಮುಖರಾದ ಕೆ.ಉದಯ ಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಶಿಲ್ಪಾ ಜಿ. ಸುವರ್ಣ, ನಳಿನಿ ಪ್ರದೀಪ್ ರಾವ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶಿವಕುಮಾರ್ ಅಂಬಲಪಾಡಿ, ಶಶಾಂಕ್ ಶಿವತ್ತಾಯ ಮತ್ತಿತರು ಉಪಸ್ಥಿತರಿದ್ದರು.