ರಂಗಕರ್ಮಿಗೆ ಒಲಿದ ತಾಲೂಕು ಸಾಹಿತ್ಯ ಸಮ್ಮೇಳನದ ಸಾರಥ್ಯ

KannadaprabhaNewsNetwork |  
Published : Dec 22, 2024, 01:33 AM IST
ಫೋಟೋ : ಆರ್.ಎನ್.ಭಟ್ಟ ಧುಂಡಿ | Kannada Prabha

ಸಾರಾಂಶ

ಯಲ್ಲಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯ ಸ್ಥಾನ ಈ ಬಾರಿ ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ಅವರಿಗೆ ಒಲಿದಿದೆ.

ಶಂಕರ ಭಟ್ಟ ತಾರೀಮಕ್ಕಿ, ಯಲ್ಲಾಪುರ

ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ್ಯ ಸ್ಥಾನ ಈ ಬಾರಿ ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ (ರಾಮಕೃಷ್ಣ ನಾರಾಯಣ ಭಟ್ಟ) ಅವರಿಗೆ ಒಲಿದಿದೆ.

ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ಟ ಹಾಗೂ ಧುಂಡಿ ಅವರ ಸಾಧನೆಯಿಂದಾಗಿ ತಾಲೂಕಿನ ಮಂಚಿಕೇರಿ ಇಂದು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಹೆಗ್ಗೋಡಿನ ನೀನಾಸಂ ನಾಟಕಗಳಿಂದ ಪ್ರಭಾವಿತರಾದ ಧುಂಡಿ ತಮ್ಮೂರಿನಲ್ಲೇ ರಾಜರಾಜೇಶ್ವರಿ ರಂಗ ಸಮೂಹವನ್ನು ೧೯೮೧ರಲ್ಲಿ ಸ್ಥಾಪಿಸಿ, ಅದರ ಕರ್ಣಧಾರತ್ವವನ್ನು ಹಿಡಿದು, ಈವರೆಗೂ ಮಂದುವರಿಸಿಕೊಂಡು ಬಂದಿದ್ದಾರೆ.

೭೨ರ ಹರೆಯದ ಚೈತನ್ಯಶೀಲ ಧುಂಡಿ, ತಮ್ಮ ೪೪ ವರ್ಷದ ರಂಗ ಚಟುವಟಿಕೆ ಅವಧಿಯಲ್ಲಿ ೫೦ಕ್ಕೂ ಹೆಚ್ಚಿನ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಪ್ರತಿವರ್ಷವೂ ಮಕ್ಕಳಿಗೆ ರಂಗತರಬೇತಿ ನೀಡಿ, ನಾಟಕ ಪ್ರದರ್ಶಿಸುತ್ತಾರೆ. ೩ ವರ್ಷಗಳ ಕಾಲ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಸಂಘಟನೆ, ನಾಡಿನಾದ್ಯಂತ ನಾಟಕ ಪ್ರದರ್ಶನಗಳ ನೇತೃತ್ವ ವಹಿಸಿದ ಪರಿಣಾಮ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸಂಘ- ಸಂಸ್ಥೆಗಳಿಂದಲೂ ಪ್ರಶಸ್ತಿಗಳು ಅರಸಿ ಬಂದಿವೆ.

ಕೇವಲ ನಾಟಕವೊಂದೇ ಅಲ್ಲದೇ, ಸಂಗೀತ, ಯಕ್ಷಗಾನ, ನೃತ್ಯ ಇವುಗಳ ಜತೆ ಸಂವಾದಗೋಷ್ಠಿ ಹೀಗೆ ಎಲ್ಲ ಕ್ಷೇತ್ರಗಳ ಸಂಘಟನೆಯ ಹೊಣೆ ಇವರದ್ದು. ಸಹಕಾರಿ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲಿಯೂ ತೊಡಗಿಸಿಕೊಂಡಿದ್ದಲ್ಲದೇ ಸಿನಿಮಾ ಕ್ಷೇತ್ರದಲ್ಲಿಯೂ ಪಾತ್ರ ನಿರ್ವಹಿಸಿದ್ದು, ಇತ್ತೀಚೆಗೆ ನಿರ್ಮಾಣಗೊಂಡ ರಾಜ್ ಶೆಟ್ಟಿ ನಿರ್ಮಾಣದ ನಟೇಶ್ ಹೆಗಡೆ ನಿರ್ದೇಶನದ ಪೇದ್ರೋ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಬುಡಕಟ್ಟು ಜನಾಂಗದ ಸಿದ್ದಿ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯ, ರಂಗ ತರಬೇತಿ, ಹಲವು ರೀತಿಯ ಸೌಲಭ್ಯ ಕೊಡಿಸಿದ್ದಾರೆ. ಪ್ರಮುಖವಾಗಿ ಹೆಗ್ಗೋಡಿನ ಕೆ.ವಿ. ಅಕ್ಷರ, ಚಿದಂಬರ ರಾವ್ ಜಂಬೆ, ರಘುನಂದನ, ನಟರಾಜ್ ಏಣಗಿ, ಹುಲಿಗೆಪ್ಪ ಕಟ್ಟಿಮನಿ, ಕೆ.ಜಿ. ಕೃಷ್ಣಮೂರ್ತಿ, ಬಿ.ಆರ್. ವೆಂಕಟ್ರಮಣ ಐತಾಳ, ಪ್ರಮೋದ ಶಿಗ್ಗಾಂವ್, ಚನ್ನಕೇಶವ, ಶಶಿಧರ ಭಾರೀಘಾಟ್, ಅರವಿಂದ್ ಕುಲಕರ್ಣಿ, ಕೃಷ್ಣಮೂರ್ತಿ ಕವತ್ತಾರ್, ವಿ.ಟಿ. ಹೆಗಡೆ ಶೀಗೇಹಳ್ಳಿ ಮುಂತಾದ ಹಲವರ ನಿರ್ದೇಶನ, ಮಾರ್ಗದರ್ಶನದಲ್ಲಿ ೫೦ಕ್ಕೂ ಹೆಚ್ಚಿನ ನಾಟಕಗಳನ್ನು ಅಭಿನಯಿಸುವ ತಂಡ ಕಟ್ಟಿ, ರಾಜ್ಯಾದ್ಯಂತ ಪ್ರತಿವರ್ಷವೂ ಪ್ರದರ್ಶನ ನೀಡಿದ್ದಾರೆ. ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರಗಳಲ್ಲಿಯೂ ಪ್ರದರ್ಶನ ನೀಡಿದ ಹಿರಿಮೆ ಇವರದಾಗಿದೆ.

ಇವರ ಕಾಲಚಕ್ರ ಎಂಬ ನಾಟಕ ಹಳ್ಳಿಯ ಮನೆಯೊಂದರ ಸನ್ನಿವೇಶದಲ್ಲೇ ನಿರ್ದೇಶಿಸಿದ್ದು, ವಿಶೇಷ. ಅದು ಈಗಾಗಲೇ ೩೦ ಪ್ರದರ್ಶನವನ್ನು ಕಂಡಿದ್ದು, ಈ ನಾಟಕದ ಸಾಮರ್ಥ್ಯ, ನಿರ್ದೇಶನ, ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಇಂತಹ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡ ರಾಮಕೃಷ್ಣ ನಾರಾಯಣ ಭಟ್ಟ ಧುಂಡಿಯವರಿಗೆ ಡಿ. ೨೩ರಂದು ತನ್ನೂರಿನಲ್ಲೇ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ದೊರೆತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌
ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ