ಗದಗ: ಮಾನವನ ಎಲ್ಲಾ ಅಂಗಾಂಗಗಳು ಸತ್ತ ನಂತರವು ಉಪಯೋಗಕ್ಕೆ ಬರುತ್ತವೆ. ಬದುಕಿದ್ದಾಗಲೇ ಮನಸ್ಸು ಮಾಡಿ ದೇಹದಾನ ಮಾಡಬೇಕು. ದೇಹದಾನ ಮಾಡಿದ ಕೌತಾಳ ವೀರಪ್ಪನವರ ಬದುಕು ಸಾರ್ಥಕವಾದುದು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಡಿ.ಜಿ.ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ. ಗೋವಿಂದಪ್ಪ ಮಾತನಾಡಿ, ಮರಣಾನಂತರ ದೇಹದಾನ ಹಾಗೂ ಅಂಗಾಂಗ ದಾನ ವಿಷಯ ಕುರಿತು ಮಾತನಾಡಿ, ಮರಣಾನಂತರ ವ್ಯಕ್ತಿಯ ಶರೀರ ಉಪಯೋಗವಾದರೆ ಅವನೆ ಉತ್ತಮ ಮಾನವ. ಎಲ್ಲಾ ದಾನಗಳಿಗಿಂತ ದೇಹದಾನ ಮುಖ್ಯ, ಕಣ್ಣು, ಮೆದುಳು ಹೀಗೆ ಮಾನವನ 26 ಅಂಗಾಂಗ ಉಪಯೋಗಕ್ಕೆ ಬರುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಜಿ.ಬಿ.ಪಾಟೀಲ, ಎಂ.ಸಿ.ಐಲಿ ಮುಂತಾದವರು ಮಾತನಾಡಿದರು. ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಸವಿತಾ ಕುಪ್ಪಸದ ನೆರವೇರಿಸಿದರು. ಧಾರ್ಮಿಕ ಗ್ರಂಥವನ್ನು ಹರ್ಷಿತಾ ಬಳಿಗೇರ ಹಾಗೂ ವಚನ ಚಿಂತನವನ್ನು ರಕ್ಷಿತಾ ಬಳಿಗೇರ ನೆರವೇರಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು.