ನೆಲಮಂಗಲ/ದಾಬಸ್ಪೇಟೆ: ಶೈಕ್ಷಣಿಕ, ಧಾರ್ಮಿಕ, ಹಾಗೂ ಸಾಮಾಜಿಕ ಬದ್ದತೆಯನ್ನು ಇಟ್ಟುಕೊಂಡು ಪೂಜ್ಯರ ನೇತೃತ್ವದಲ್ಲಿ ಸ್ವಾವಲಂಬಿ ಸಮಾಜವನ್ನು ನಿರ್ಮಿಸುತ್ತಿರುವ ಪೂರ್ಣಾನಂದಪುರಿ ಶ್ರೀಗಳ ಸೇವೆ ಅನನ್ಯವಾದುದು, ಸಂತ ಶ್ರೇಷ್ಟರ ತಪಸ್ವಿ ಜೀವನ ಮನುಕುಲದ ಪ್ರೇರಕ ಶಕ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಸ್ವಾರ್ಥ ಸಾಧನೆ ಮೇಲಾಗಿರುವ ಇಂದಿನ ಕಾಲದಲ್ಲಿ ಸಮಾಜದ ಏಳಿಗೆ ಬಯಸುವವರು ವಿರಳ, ಗಾಣಿಗ ಸಮಾಜಕ್ಕೆ ಸಿಕ್ಕ ಜಾಗ ಮತ್ತು ಅನುದಾನವನ್ನು ಸಂಪೂರ್ಣ ಸದ್ವಿನಿಯೋಗಿಸುವಲ್ಲಿ ಪೂರ್ಣಾನಂದಪುರಿ ಶ್ರೀಗಳು ಕಾಳಜಿ ವಹಿಸಿದ್ದಾರೆ. ಶ್ರದ್ಧೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಪೂರ್ಣಾನಂದಪುರಿ ಶ್ರೀಗಳು, ಅವರು ಪೂರ್ವಾಶ್ರಮದಲ್ಲಿದ್ದಾಗ ಯಡಿಯೂರಪ್ಪನವರ ಕಷ್ಟದ ಸಂದರ್ಭದಲ್ಲಿ ನೈತಿಕ ಸ್ಥೈರ್ಯ ತುಂಬಿದರು, ಬಿಎಸ್ವೈ ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ಬಂದ ಭಾಗ್ಯಲಕ್ಷ್ಮೀ ಯೋಜನೆಗಳು ಇಂದು ಜನರ ಸಂಕಷ್ಟಕ್ಕೆ ಸಹಕಾರಿಯಾಗಿದೆ ಎಂದರು.
ಬಿಎಸ್ವೈ ಅವರು ಮಠಗಳಿಗೆ ನೀಡಿದ ಜಾಗ ಹಾಗೂ ಅನುದಾನದಿಂದ ನೂರಾರು ಸೇವಾಕಾರ್ಯಗಳಾಗುತ್ತಿರುವುದು ಕಾಣಬಹುದಾಗಿದೆ. ಇದರಿಂದ ನಾವು ಸೇವೆಯಿಂದ ಸಮಾಜಕ್ಕೆ ಸಿಕ್ಕ ಪ್ರತಿಫಲವನ್ನು ಕಾಣಬಹುದಾಗಿದೆ. ಸಮಾಜವನ್ನು ಸರಿದಾರಿಗೆ ತರುವುದು ಮಠಮಾನ್ಯಗಳಿಗಷ್ಟೆ ಸೀಮಿತವಾಗಿಲ್ಲ. ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಮಕ್ಕಳು ಸಮಾಜಕ್ಕೆ ಭಾರವಾಗದ ರೀತಿಯಲ್ಲಿ ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಿದೆ ಎಂದರು.ಕೈಲಾಸಶ್ರಮ ಮಹಾಸಂಸ್ಥಾನ ಮಠದ ಶ್ರೀ ಜಯೇಂದ್ರಪುರಿ ಸ್ವಾಮೀಜಿ ಮಾತನಾಡಿ, ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಹಲವಾರು ಜನೋಪಯೋಗಿ ಕಾರ್ಯಗಳು ನಡೆಯುತ್ತಿವೆ. ಸ್ಥಳದಲ್ಲೇ ಸಾವಿರಾರು ಜನರಿಗೆ ಉದ್ಯೋಗ ನೀಡುವುದು ಸಾಮಾನ್ಯ ಸಂಗತಿಯಲ್ಲ, ಜನಸೇವೆ ಮಾಡುವುದರ ಮೂಲಕ ಸಮಾಜದ ಉನ್ನತಿಗೆ ಕಾರಣವಾಗುತ್ತಿದ್ದಾರೆ. ಒಗ್ಗಟ್ಟು, ವಿದ್ಯೆ, ಉತ್ಸಾಹವಿದ್ದರೆ ಸಮಾಜದ ಏಳಿಗೆ ಸಾಧ್ಯ ಎಂದು ಗಾಣಿಗ ಸಮಾಜಕ್ಕೆ ಪೂರ್ಣಾನಂದ ಶ್ರೀಗಳು ಶಕ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಯವರನ್ನು ಅವರು ರಾಜಕೀಯ ಕ್ಷೇತ್ರದಲ್ಲಿದ್ದಾಗ ಅವರ ಜೊತೆ ತುಂಬಾ ಒಡನಾಟವಿತ್ತು. ರಾಜಕೀಯ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಸನ್ಯಾಸತ್ವ ಪಡೆದ ನಂತರವೂ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
4ನೇ ವರ್ಷದ ಪಟ್ಟಾಭಿಷೇಕ:ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಗಳ 4ನೇ ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆ ಕಿರೀಟ ಧರಿಸಿ ಅಭಿನಂದನೆ ಸಲ್ಲಿಸಿ ಹೂ ಮಳೆಸುರಿಸಿದರು. ಇದೇ ಸಮಯದಲ್ಲಿ ನೂತನ ಜ್ಞಾನಮಂದಿರ ಯೋಗ ಮತ್ತು ಧ್ಯಾನ ಕೇಂದ್ರವನ್ನು ಉದ್ಘಾಟನೆ ಮಾಡಿದ ವಿಜಯೇಂದ್ರ ಶುಭಕೋರಿದರು.
ಆರೋಗ್ಯ ತಪಾಸಣೆ:ವಿಶ್ವ ಗಾಣಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ, ಹೃದಯ ಪರೀಕ್ಷೆ, ಕಣ್ಣಿನ ತಪಾಸಣೆ, ಗಾಣಿಗ ವಧುವರರ ಅನ್ವೇಷಣೆ, ಪ್ರತಿಭಾ ಪುರಸ್ಕಾರ, ಉದ್ಯೋಗಮೇಳ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ನೆಲಮಂಗಲ ಶಿವಾನಂದಾಶ್ರಮದ ಶ್ರೀರಮಣಾನಂದನಾಥ ಸ್ವಾಮೀಜಿ, ಬೆಳಗಾವಿ ಮಡಿವಾಳೇಶ್ವರ ಸ್ವಾಮೀಜಿ, ಹೊಸಕೋಟೆ ತಿಗಳ ಮಹಾಸಂಸ್ಥಾನದ ಗೋವರ್ಧನ ನಂದಪುರಿ ಸ್ವಾಮೀಜಿ, ಬಿಜೆಪಿ ಮುಖಂಡ ಟ್ರಸ್ಟಿ ವೇಣುಗೋಪಾಲ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೇಶ್, ರಾಜಮ್ಮ ಇತರರು ಉಪಸ್ಥಿತರಿದ್ದರು.ಪೋಟೋ 10 :
ನೆಲಮಂಗಲ ಸಮೀಪದ ನಗರೂರಿನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಠದ ನೂತನ ಜ್ಞಾನಮಂದಿರ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಹರಗುರು ಚರಮೂರ್ತಿಗಳು ಉದ್ಘಾಟಿಸಿದರು.ಪೋಟೋ 11 :
ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ, ಉದ್ಯೋಗ ಮೇಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಚಾಲನೆ ನೀಡಿದರು.